HIGHLIGHTS
- ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಟಿ. ಎಸ್. ನಾಗಾಭರಣ ಅವರಿಂದ ಸಭೆ
- ಕುವೆಂಪು ವಿಶ್ವವಿದ್ಯಾಲಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
ಸುದ್ದಿ ಕಣಜ.ಕಾಂ | TALUK | 08 SEP 2022
ಶಿವಮೊಗ್ಗ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು ನಡೆಸುವ ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಇರುವುದರಿಂದ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಯುವಕರಿಗೆ ಎಂಟು ಲಕ್ಷ ಉದ್ಯೋಗಗಳು ಕೈತಪ್ಪುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ. ಎಸ್. ನಾಗಭರಣ ಕಳವಳ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಕ್ಕೂಟ ಸರ್ಕಾರದ ಭಾಗವಾದ ಸಂಸ್ಥೆಗಳು ನಡೆಸುವ ಬ್ಯಾಂಕಿಂಗ್, ಎಸ್.ಎಸ್.ಸಿ., ಯು.ಪಿ.ಎಸ್.ಸಿ., ನೀಟ್ ಸೇರಿದಂತೆ ಹತ್ತಾರು ಪರೀಕ್ಷೆಗಳು ಕನ್ನಡ ಅಥವಾ ಮಾತೃಭಾಷೆಯಲ್ಲಿ ನಡೆಯುತ್ತಿಲ್ಲ. ಹಿಂದಿಯೇತರ ರಾಜ್ಯಗಳ ಯುವಕರಿಗೆ ಇದು ಲಕ್ಷಾಂತರ ಉದ್ಯೋಗಗಳಿಗೆ ಸ್ಪರ್ಧಿಸುವ, ಯಶಸ್ವಿಯಾಗುವ ಅವಕಾಶವನ್ನೇ ಕಸಿಯುತ್ತಿದೆ. ಮಾತೃಭಾಷೆಯ ಯತೇಚ್ಛ ಬಳಕೆ, ಅಭಿಮಾನ, ಹೋರಾಟ ಹಾಗೂ ಜ್ಞಾನಮೂಲಗಳ ಸೃಜಿಸುವ ಮೂಲಕ ಮಾತ್ರವೇ ಇದನ್ನು ಪರಿಹರಿಸಬಹುದು ಎಂದು ತಿಳಿಸಿದರು.
ಯುರೋಪ್ ಖಂಡದ ದೇಶಗಳ ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಇಂಗ್ಲೀಷ್ ಭಾಷೆ ಬರುವುದಿಲ್ಲ. ಫ್ರೆಂಚ್, ಸ್ಪಾನಿಷ್ ಸೇರಿದಂತೆ ಅವರೆಲ್ಲರೂ ತಮ್ಮ ಮಾತೃಭಾಷೆಗಳಲ್ಲಿ ಅಧ್ಯಯನ, ಸಂಶೋಧನೆ, ಬರಹಗಳನ್ನು ಪ್ರಕಟಿಸುತ್ತಾರೆ, ಮಾತನಾಡುತ್ತಾರೆ. ಮಾತೃಭಾಷೆ ಬಳಸಲು ನಮಗೆ ಕೀಳರಿಮೆ ಬೇಡ, ಕನ್ನಡ ಭಾಷೆಯ ಸಾಹಿತ್ಯದ ಅಗಾಧ ಬೇರುಗಳು ಶಿವಮೊಗ್ಗದಲ್ಲಿವೆ. ಇಲ್ಲಿನ ವಿವಿಯಾದ ನಮ್ಮಲ್ಲಿ ಕನ್ನಡ ಬಳಸಲು, ಬೆಳೆಸಲು ಮತ್ತಷ್ಟು ಸಕರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ.
| ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಪತಿ
ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ
ಬಹುಭಾಷಾ ಭಾರತದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಸಂವಿಧಾನದಡಿ ಭಾಷಾವಾರು ರಾಜ್ಯಗಳ ರಚನೆಯಾದ ನಂತರ ಭಾಷೆಗೆ ಸಂಬಂಧಪಟ್ಟಂತೆ ಒಂದೂ ತಿದ್ದುಪಡಿ ಆಗಿಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳಲ್ಲಿಯೂ ಪರೀಕ್ಷೆಗಳು, ಆಡಳಿತದ ಸುತ್ತೋಲೆಗಳು, ಆದೇಶಗಳು, ನಿಯಮಾವಳಿಗಳು, ಮಾಹಿತಿಕೋಶಗಳು ಪ್ರಕಟವಾಗುವಂತೆ ಆಭಿಯಾನ ಮಾಡಬೇಕಿದೆ. ಅದನ್ನು ಪ್ರಚೂರಪಡಿಸಲು ಮೊದಲು ಬೇರಿನಲ್ಲಿ ಕನ್ನಡ ಭಾ಼ಷೆಯನ್ನು ದೃಢಗೊಳಿಸೋಣ ಮುಂದುವರಿದು ಕೇಂದ್ರದಲ್ಲಿ ಕನ್ನಡದಲ್ಲಿ ಸೇವೆ, ಆಡಳಿತ ನೀಡಲು ಒತ್ತಾಯಿಸೋಣ ಎಂದು ಹೇಳಿದರು.
ಆಡಳಿತ ಕನ್ನಡಮಯವಾಗಲಿ
ಭಾಷಾ ನಿರ್ಲಕ್ಷ್ಯದ ಸಮಸ್ಯೆಯನ್ನು ಬಗೆಹರಿಸಲು ಮೂಲಕಾರಣದ ಹುಡುಕಾಟ ನಡೆಸಿ ಚಿಕಿತ್ಸೆ ನೀಡಬೇಕು. ಅಂತೆಯೇ ರಾಜ್ಯದಲ್ಲಿ ಕನ್ನಡ ನಿರ್ಲಕ್ಷಿತವಾಗುವುದನ್ನು ಮೊದಲು ಸರಿಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ರಾಜ್ಯದ ಸಚಿವಾಲಯಗಳಲ್ಲಿ, ನಿಗಮ-ಪ್ರಾಧಿಕಾರಗಳಲ್ಲಿ, ವಿವಿಗಳಲ್ಲಿ, ಕಚೇರಿಗಳಲ್ಲಿ ಸಂಪೂರ್ಣ ಕನ್ನಡ ಭಾಷೆಯ ಬಳಕೆ, ಸಂವಹನ ಆಗಬೇಕು. ರಾಜ್ಯದ ಒಳಗಿನ ಪತ್ರಗಳಿಗೆ ಕನ್ನಡದ ಮೊಹರುಗಳು, ಲೆಟರ್ ಹೆಡ್ಗಳನ್ನು ಬಳಸಬೇಕು. ಆಡಳಿತದಲ್ಲಿ ಕನ್ನಡ ಘೋಷಣೆಗಿಂತ ಶಿಕ್ಷಣದಲ್ಲಿ ಕನ್ನಡ ಬಳಕೆ ಅತ್ಯಧಿಕವಾಗಲಿ. ಅಗತ್ಯವಿರುವೆಡೆ ಇಂಗ್ಲೀಷನ ಜೊತೆಗೆ ಪ್ರವೇಶಾತಿ ಪ್ರಕ್ರಿಯೆಗಳಲ್ಲಿ, ಪ್ರಶ್ನೆಪತ್ರಿಕೆಗಳಲ್ಲಿ, ಪಠ್ಯಕ್ರಮ ರಚನೆಯಲ್ಲಿ, ಮೌಲ್ಯಮಾಪನ, ಅಂಕಪಟ್ಟಿಗಳ ವಿತರಣೆಯಲ್ಲಿ, ವೆಬ್ಸೈಟ್, ಆಹ್ವಾನ ಪತ್ರಿಕೆಗಳು ಸೇರಿದಂತೆ ಎಲ್ಲಡೆಯೂ ಕನ್ನಡ ಬಳಸಬೇಕು.
ಸಭೆಯಲ್ಲಿ ವಿವಿಯ ಕುಲಸಚಿವರಾದ ಜಿ.ಅನುರಾಧಾ, ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್ ಕುಮಾರ್, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ್, ರಕ್ಷಾ, ಕನ್ನಡ ಸಂಸ್ಕೃತಿ ಇಲಾಖೆಯ ಉಮೇಶ್, ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ, ಪ್ರೊ.ಜಿ. ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು.
https://suddikanaja.com/2022/09/07/kannada-development-authority-president-ts-nagabharana-meeting-at-shivamogga/