ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಗರ ಪಟ್ಟಣದ ಬಜರಂಗ ದಳದ ಸಹ ಸಂಚಾಲಕ ಸುನೀಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸುನೀಲ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಸಮೀರ್ ಸೇರಿದಂತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ರೀತಿಯ ಘಟನೆಗಳಾದಾಗ ಮೊದಲು ಪೊಲೀಸರ ಗಮನಕ್ಕೆ ತರಬೇಕು. ಯಾವುದೇ ಕಾರಣ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು.
– ಜಿ.ಕೆ.ಮಿಥುನ್ ಕುಮಾರ್, ಎಸ್ಪಿ
READ | ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ, ಹಣಕಾಸು ಅಧಿಕಾರಿ ವರ್ಗಾವಣೆ
ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
- ಹಲ್ಲೆ ಯತ್ನ ಪ್ರಕರಣದ ಮುಖ್ಯ ಆರೋಪಿ ಸಮೀರ್ ತಂಗಿಯನ್ನು ಸುನೀಲ್ ಚುಡಾಯಿಸುತ್ತಿದ್ದ ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ.
- ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್ ಗೆ ಈ ಹಿಂದೆ ಸಮೀರ್ ಎಚ್ಚರಿಕೆ ನೀಡಿದ್ದ. ಆದರೆ ಸುನೀಲ್ ನಿನ್ನ ತಂಗಿಯ ನಂಬರ್ ಕೊಡು ಅಂತ ಸಮೀರ್’ನನ್ನೇ ಕೇಳಿದ್ದ. ಇದಲ್ಲದೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಚುಡಾಯಿಸುವುದನ್ನು ಮುಂದುವರಿಸಿದ್ದ ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ.
- ಸೋಮವಾರ ಬೈಕ್’ನಲ್ಲಿ ಬರುತ್ತಿದ್ದ ಸಮೀರ್ ನನ್ನು ಸುನೀಲ್ ರೇಗಿಸಿದ್ದ. ಇದರಿಂದ ಕೋಪಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
- ಸಮೀರ್ ಕುರಿಗಾಹಿ ಯುವಕನಾಗಿದ್ದು, ಎಂದಿನಂತೆ ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಮಚ್ಚನ್ನು ಇಟ್ಟುಕೊಂಡಿದ್ದ. ಸುನೀಲ್ ರೇಗಿಸಿದ್ದರಿಂದ ಅದೇ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾನೆ.
- ಪ್ರಕರಣಕ್ಕೆ ಸಂಬಂಧಿಸಿ ಸಮೀರ್’ನ ಇಬ್ಬರು ಸ್ನೇಹಿತರನ್ನು ಸಹ ವಶಕ್ಕೆ ಪಡೆದಿದ್ದು, ಇಲ್ಲಿ ಅವರ ಪಾತ್ರವೇನು ಎನ್ನುವುದರ ಬಗ್ಗೆ ತನಿಖೆ ನಡೆದಿದೆ.
ಹಿಂದೂಪರ ಸಂಘಟನೆಗಳಿಂದ ಸಾಗರ ಬಂದ್
ಸುನೀಲ್ ಮೇಲಿನ ಹಲ್ಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಸಂಘ ಪರಿವಾರದ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗಿನಿಂದಲೂ ಸಾಗರದ ಬಹುತೇಕ ಭಾಗಗಳು ಬಂದ್ ಆಗಿದ್ದವು. ಸಾಗರದ ಜತೆಗೆ ತಾಳಗುಪ್ಪದಲ್ಲೂ ಬಂದ್ಗೆ ಬೆಂಬಲ ಸಿಕ್ಕಿದೆ.
ಸಾಗರದ ಬೀದಿಗಳಲ್ಲಿ ಬಂದ್ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.