ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ಅವರು ರಾಜಕೀಯ ಪ್ರವೇಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ರಾಜಕೀಯ ಪ್ರವೇಶಿಸುವುದಿಲ್ಲ. ಈಗಾಗಲೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದೇನೆ. ರಾಜ್ಯದಲ್ಲಿರುವ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ, ರಾಜ್ಯದ 224 ಕ್ಷೇತ್ರಗಳ ನೌಕರರು ನನಗೆ ಸೇರಿದವರಾಗಿದ್ದಾರೆ. ನೌಕರರ ಪರವಾಗಿ ಸದಾ ಹೋರಾಡುತ್ತೇನೆ’ ಎಂದು ತಿಳಿಸಿದರು.
READ | ಆಭರಣ ಪ್ರಿಯರಿಗೆ ಶುಭಸುದ್ದಿ, ಚಿನ್ನದ ಬೆಲೆಯಲ್ಲಿ ಕುಸಿತ
ಫೆ.4ರಂದು ಸರ್ಕಾರಿ ನೌಕರರ ಸಮ್ಮೇಳನ
ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಫೆಬ್ರವರಿ 4 ರಂದು ನಗರದ ಎನ್ಇಎಸ್ ಮೈದಾನದಲ್ಲಿ ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸರ್ಕಾರಿ ನೌಕರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಫ್ಯಾಮಿಲಿ ಮಾರ್ಟ್ ಅನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಖ್ಯಾತ ವಾಗ್ಮಿ ಡಾ.ಗುರುರಾಜ ಕರಜಗಿ ಅವರು ಪ್ರಜಾಸ್ನೇಹಿ ಆಡಳಿತದ ಬಗ್ಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಬಳಿಕ ಕೆಲಸದ ಒತ್ತಡಕ್ಕೆ ನಗೆ ಮದ್ದು ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ನಡೆಸಿಕೊಡಲಿದ್ದಾರೆ. ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
7-8 ಸಾವಿರ ನೌಕರರ ಭಾಗಿ
ಕಾರ್ಯಕ್ರಮದಲ್ಲಿ ತಾಲೂಕಿನ 7 ರಿಂದ 8 ಸಾವಿರ ನೌಕರರು ಭಾಗವಹಿಸಲಿದ್ದಾರೆ. ಅವರುಗಳಿಗೆ ಒಒಡಿ ಸೌಲಭ್ಯವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
READ | ಶಿವಮೊಗ್ಗ ವಿಮಾನ ನಿಲ್ದಾಣ ಎಂಟ್ರಿ ನಿಷೇಧ, ಕಾರಣವೇನು?
ಸರ್ಕಾರಿ ನೌಕರರ ಭವನದ ಪಕ್ಕದಲ್ಲಿಯೇ ಸರ್ಕಾರಿ ನೌಕರರಿಗೋಸ್ಕರ ನೌಕರರ ಫ್ಯಾಮಿಲಿ ಮಾರ್ಟ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಶೇ.10 ರಿಂದ 60ರವರೆಗೆ ರಿಯಾಯಿತಿ ಸಿಗಲಿದೆ. ಸುಮಾರು 4 ಕೋಟಿ ರೂ. ವೆಚ್ಚ ಮಾಡಿ ಇದನ್ನು ಸಿದಟಛಿಪಡಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಇದನ್ನು ನಿರ್ವಹಿಸಲಿದೆ ಎಂದರು.
ನೌಕರ ಸಂಘದ ಆರ್.ಮೋಹನ್ಕುಮಾರ್, ಕೃಷ್ಣಮೂರ್ತಿ, ಪಾಪಣ್ಣ, ಮಾರುತಿ, ಅರುಣ್ ಕುಮಾರ್ ಉಪಸ್ಥಿತರಿದ್ದರು.
https://suddikanaja.com/2023/01/26/fruit-flower-exhibition-at-shivamoggaa/