ಸುದ್ದಿ ಕಣಜ.ಕಾಂ ಸಾಗರ
SAGAR: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯು ಮಂಗಳವಾರದಿಂದ ಪ್ರಾರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕಂಚಿಗಾರ್ ಸಮಾಜದ ವತಿಯಿಂದ ಶ್ರೀ ಮಾರಿಕಾಂಬ ದೇವಿಗೆ ಬಾಗಿನ ಸಮರ್ಪಿಸಲಾಯಿತು. ನಂತರ ದೇವರ ಗರ್ಭಗುಡಿಗೆ ಬಾಗಿನ ತರಲಾಯಿತು. ನಗರದ ಅಶೋಕ ರಸ್ತೆಯಲ್ಲಿ ಇರುವ ಗೋವಿಂದಪ್ಪ ಅವರ ಮನೆಯಿಂದ ಉತ್ಸವ ಮೂರ್ತಿಗೆ ಸೀರೆ ತರಲಾಯಿತು.
READ | ಸಾಗರ ಮಾರಿಕಾಂಬಾ ಜಾತ್ರಾ ಮಹೋತ್ಸವ ಹಿನ್ನೆಲೆ ವಾಹನ ನಿಲುಗಡೆ ನಿಷೇಧ, ಯಾವ್ಯಾವ ರಸ್ತೆಗಳಲ್ಲಿ ನಿಯಮ ಅನ್ವಯ?
ದೇವಸ್ಥಾನ ಸುಪರ್ದಿಗೆ 672 ಗ್ರಾಂ ಬಂಗಾರದ ತಾಳಿ
ಅಮ್ಮನವರ ಉತ್ಸವ ಮೂರ್ತಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆ ಮತ್ತು ದೈವಜ್ಞ ಬ್ರಾಹ್ಮಣ ಸಮಾಜ ಒಟ್ಟಾಗಿ ಸೇರಿ 672 ಗ್ರಾಂ ಬಂಗಾರದ ತಾಳಿಯನ್ನು ದೇವಸ್ಥಾನದ ಸುಪರ್ದಿಗೆ ವಹಿಸಲಾಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ ಅಮ್ಮನವರ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಪಾಲಿಶ್ ಮಾಡಿ ದೇವಸ್ಥಾನಕ್ಕೆ ಹಿಂದಿರುಗಿಸಲಾಯಿತು.
ಗುಡಿಗಾರ್ ಸಮಾಜದ ಮುಖಂಡ ದಿ. ಗುಡಿಗಾರ್ ದೇವಪ್ಪ ಅವರ ಮನೆಯಿಂದ ಅಮ್ಮನವರಿಗೆ ಬಾಸಿಂಗ ತರಲಾಯಿತು. ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯು ಎಲ್ಲ ಸಮಾಜದ ಪಾಲ್ಗೊಳ್ಳುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಜರುಗಲಿದೆ.
ಪ್ರತಿ ದಿನವು ಶ್ರೀ ಮಾರಿಕಾಂಬ ದೇವರ ಸನ್ನಿಧಿಯಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೂ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯಲಿದೆ.
ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಅತ್ಯಂತ ಅದ್ಧೂರಿಯಾಗಿ ಒಂಬತ್ತು ದಿನಗಳ ಕಾಲ ಧಾರ್ಮಿಕ ಪೂಜಾ ವಿಧಿ ವಿಧಾನಗಳು, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವೈಶಿಷ್ಯತೆಗಳೊಂದಿಗೆ ಸಾಗರದ ಶ್ರೀ ಮಾರಿಕಾಂಬ ಜಾತ್ರೆಯು ಜರುಗಲಿದೆ. ಜಾನಪದ ಕಲಾತಂಡಗಳು ರಾಜಬೀದಿ ಉತ್ಸವದಲ್ಲಿ ಪಾಲ್ಗೊಳ್ಳಲಿವೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್, ವಿ.ಶಂಕರ್, ರಾಮಪ್ಪ, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ, ವಿವಿಧ ಸಮಿತಿ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.
https://suddikanaja.com/2023/02/03/science-museum-at-sahyadri-college-shivamogga/