ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಿಕೆ ಮತ್ತು ಬೆಳೆಗಾರರು ನಾನಾ ಸಮಸ್ಯೆಗಳಲ್ಲಿದ್ದು, ಸರ್ಕಾರ ಸ್ಪಂದಿಸಬೇಕು ಎಂದು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ್ ಕೊಡಸೆ ಹಕ್ಕೊತ್ತಾಯ ಮಂಡಿಸಿದರು.
ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡಿಕೆ, ತೆಂಗಿಗೆ ಬಂದಿರುವ ಹಳದಿ ರೋಗ, ಎಲೆಚುಕ್ಕೆ ರೋಗ ನಿಯಂತ್ರಿಸದಿದ್ದರೆ ಈ ಬೆಳೆಗಳ ಮೇಲೆ ಅವಲಂಬಿತವಾಗಿರುವ ರೈತರು ಕುಟುಂಬಗಳು ಸಂಕಷ್ಟಕ್ಕೀಡಾಗುತ್ತವೆ. ಮಲೆನಾಡಿನ ಮಣ್ಣು ಮತ್ತು ಹವಾಗುಣ ಅಡಿಕೆ ಬೆಳೆಗೆ ಪ್ರಶಸ್ತವಾಗಿದೆ. ಕೃಷಿ ಕೆಲಸಗಾರರ ಅಭಾವ, ಅಡಕೆ ಧಾರಣೆ ಹೆಚ್ಚಳದಿಂದ ಗದ್ದೆಗಳನ್ನು ಕೂಡ ಅಡಿಕೆ ತೋಟವಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಒಂದುವೇಳೆ, ಅಡಿಕೆ ಧಾರಣೆಯಲ್ಲಿ ಏರುಪೇರಾದರೆ ಜಿಲ್ಲೆಯ ಆರ್ಥಿಕತೆ ತಲ್ಲಣಿಸುತ್ತದೆ. ಅಡಿಕೆಯ ಔಷಧೀಯ ಗುಣಗಳು, ಪರ್ಯಾಯ ಬಳಕೆಯ ಗುಣಗಳ ಕುರಿತು ಸಂಶೋಧನೆ ನಡೆಸಬೇಕು. ಅಡಿಕೆ ಚಹ ಸಂಶೋಧನೆ ಮಾಡಿದ ನಿವೇದನ್ ನೆಂಪೆ (Nivedan Nempe) ಅವರ ಉದ್ಯಮಕ್ಕೆ ಉತ್ತೇಜನದ ಅಗತ್ಯವಿದೆ. ಅಡಿಕೆ ಚೊಗರು ನೈಸರ್ಗಿಕ ಬಳಕೆ ಮಾಡುವಲ್ಲಿ ಹೆಗ್ಗೋಡಿನ ಚರಕ ಸಂಸ್ಥೆ ಯಶಸ್ವಿಯಾಗಿದೆ. ಜವಳಿ ಉದ್ಯಮದಲ್ಲಿ ಚೊಗರು ಬಳಕೆ, ಅಡಿಕೆ ಚೊಗರನ್ನು ಪುಡಿ ರೂಪದಲ್ಲಿ ಸಂಗ್ರಹಿಸುವ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದು ಹೇಳಿದರು.
READ | ಮರಾಠ ಸಮಾಜದ ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ
ಸಿಎಂಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಿ
ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ, ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ, ದಾವಣಗೆರೆ ವಿವಿಯಲ್ಲಿ ಜೆ.ಎಚ್.ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ, ಸಂಶೋಧನೆಗೆ ನಡೆಸಬೇಕು ಎಂದರು.
ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ನೀಡಿ
ಹಿರೇಭಾಸ್ಕರ, ಲಿಂಗನಮಕ್ಕಿ, ತಲಕಳಲೆ ಜಲಾಶಯಗಳಿಂದ ಮುಳುಗಡೆಯಾದ ಸಂತ್ರಸ್ತರ ಸಾವಿರಾರು ಕುಟುಂಬಗಳಿಗೆ ಮೂರು ತಲೆಮಾರು ಕಳೆದರೂ ಇದುವರೆಗೆ ನೆಲೆ ಸಿಕ್ಕಿಲ್ಲ. ಅಭಯಾರಣ್ಯದ ಘೋಷಣೆ, ಕಂದಾಯ ಭೂಮಿಯ ಅಲಭ್ಯತೆ, ಸಂತ್ರಸ್ತ ಕುಟುಂಬಗಳನ್ನು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ಇರಿಸಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಈ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.
ಶಾಂತವೇರಿ ಅವರ ಜನ್ಮದಿನ ಅದ್ಧೂರಿಯಾಗಿ ಆಚರಿಸಿ
ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಗೌರವಯುತ ಬಾಳ್ವೆಯನ್ನು ಒದಗಿಸಿದ ಭೂ ಸುಧಾರಣೆ ಹೋರಾಟಕ್ಕೆ ಅಡಿಪಾಯ ಹಾಕಿದ್ದು ವಡ್ನಾಳ ಗಣಪತಿಯಪ್ಪ ಮತ್ತು ಗೋಪಾಲಗೌಡರು. ಮಾರ್ಚ್ 14ರಂದು ಶಾಂತವೇರಿ ಗೋಪಾಲಗೌಡ ಅವರ ನೂರನೆ ವರ್ಷದ ಹುಟ್ಟುಹಬ್ಬ. ರೈತರು, ಭೂ ಸುಧಾರಣೆ ಫಾಲನುಭವಿಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಡಾ. ಗುಂಡಾ ಜೋಯ್ಸ್ ಧ್ವಜ ಹಸ್ತಾಂತರ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿ ನಾ.ಡಿಸೋಜ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ತಾಲ್ಲೂಕು ಕಸಾಪ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ರಾಘವೇಂದ್ರ ಸೇರಿದಂತೆ ಹಲವರು ಇದ್ದರು.
https://suddikanaja.com/2023/02/01/four-news-kannada-movie-production/