ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಟ ಕಿಚ್ಚ ಸುದೀಪ್ ವಿರುದ್ಧ ಶಿವಮೊಗ್ಗದ ವಕೀಲ ಕೆ.ಪಿ.ಶ್ರೀಪಾಲ್ ಅವರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲಿಸುವುದಾಗಿ ಘೋಷಣೆ ಮಾಡುತ್ತಿದ್ದಂತೆಯೇ ಅವರ ಸ್ವಂತ ಊರಿನಿಂದಲೇ ಆಯೋಗಕ್ಕೆ ದೂರು ನೀಡಲಾಗಿದೆ.
“ಸುದೀಪ್ ಅವರು ರಾಜಕೀಯ ಪಕ್ಷದ ಪರವಾಗಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿರುವ ಸಿನಿಮಾ, ಟಿವಿ ಕಾರ್ಯಕ್ರಮಗಳು, ಜಾಹೀರಾತುಗಳ ಮೇಲೆ ನಿರ್ಬಂಧ ಹೇರಬೇಕು” ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
“ಸುದೀಪ್ ನಟನೆಯ ಚಿತ್ರ, ಜಾಹೀರಾತು ಮತ್ತು ಶೋಗಳನ್ನು ಪ್ರದರ್ಶಿಸುವುದರಿಂದ ಮತದಾರರ ಮೇಲೆ ಪ್ರಭಾವ ಬೀರಬಹುದು. ಅದಕ್ಕಾಗಿ ನಿರ್ಬಂಧಿಸಬೇಕು” ಎಂದು ಕೋರಲಾಗಿದೆ.
READ | 11 ಅಲ್ಲ 12ನೇಯವರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡಲು ನಾವು ರೆಡಿ, ಆಯನೂರು ಪರ ಕೆ.ಬಿ.ಪ್ರಸನ್ನ ಕುಮಾರ್ ಬ್ಯಾಟಿಂಗ್
ಆಯೋಗ ಹೇಳಿದ್ದೇನು?
ಶ್ರೀಪಾಲ್ ಅವರ ದೂರಿಗೆ ಚುನಾವಣೆ ಆಯೋಗವು ಉತ್ತರ ನೀಡಿದ್ದು, “ತಾವು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಲಾಗಿದ್ದು, ಮನವಿಯಲ್ಲಿನ ಅಂಶವು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಅವರ ಕಚೇರಿಯ ಕಾರ್ಯವ್ಯಾಪ್ತಿಗೆ ಒಳಪಡುವುದರಿಂದ ತಾವು ಕಚೇರಿಗೆಸಲ್ಲಿಸಿರುವ ಮನವಿಯನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ತಿಳಿಸಲು ನಿರ್ದೇಶಿಸಲ್ಪಟ್ಟಿದೆ” ಎಂದು ತಿಳಿಸಲಾಗಿದೆ.