ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನಿಂದ ವಿಮಾನ ಹಾರಾಟಕ್ಕೆ ದಿಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿಮಾನ ಹಾರಾಟಕ್ಕೆ ದಿನಾಂಕ ಸಹ ನಿಗದಿಯಾಗಿದೆ.
ಆಗಸ್ಟ್ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣ(shivamogga airport)ದಿಂದ ಲೋಕದ ಹಕ್ಕಿಯು ಹಾರಾಟ ಮಾಡಲಿದ್ದು, ಬಹುನಿರೀಕ್ಷೆಯ ದಿನ ಸನ್ನಿಹಿಸಿದೆ. ಮೊದಲ ವಿಮಾನ ಬೆಂಗಳೂರಿಗೆ ಪ್ರಯಾಣಿಸಲಿದೆ. ಪ್ರತಿ ದಿನ ಬೆಳಗ್ಗೆ 9ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಟು ಶಿವಮೊಗ್ಗಕ್ಕೆ 10.30ಕ್ಕೆ ಆಗಮಿಸಲಿದೆ. ಇಲ್ಲಿಂದ 12ಕ್ಕೆ ಹೊರಟು ಬೆಂಗಳೂರಿಗೆ 1.30ಕ್ಕೆ ತಲುಪಲಿದೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಐಟಿಎ ಕೋಡ್, ಏನಿದರ ಪ್ರಯೋಜನ?
ಈ ಕುರಿತು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ(BY Raghavendra), ‘ಶಿವಮೊಗ್ಗ ವಿಮಾನದಿಂದ ಎಲ್ಲರಿಗೂ ಲಾಭವಾಗಲಿದೆ. ಶಿವಮೊಗ್ಗದಿಂದ ಹಲವರು ದೆಹಲಿಗೆ ಸಂಚರಿಸುತ್ತಾರೆ. ಪ್ರವಾಸೋದ್ಯಮ, ಕೈಗಾರಿಕಾ ವಲಯ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಈಗಾಗಲೇ ನಾವು ಇಂಡಿಗೋ ಸಂಸ್ಥೆಗೆ ಸಬ್ಸಿಡಿ ನೀಡಿದ್ದೇವೆ. ಆ.11 ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ಇಂಟರ್ ನ್ಯಾಷನಲ್ ಕೋಡ್ ಆರ್.ಕ್ಯೂ.ವೈ. ನೀಡಲಾಗಿದೆ’ ಎಂದು ತಿಳಿಸಿದರು.
ವಿಕಾಸತೀರ್ಥ ರ್ಯಾಲಿ ಪ್ರಯುಕ್ತ ಸ್ಥಳ ವೀಕ್ಷಣೆ
ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಸುಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಸೂಚನೆಯಂತೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಹೆಚ್ಚಿಸಲು ಎಲ್ಲ ಸಂಸದರು ವಿಕಾಸತೀರ್ಥ ರ್ಯಾಲಿ ಅಂಗವಾಗಿ ಸ್ಥಳ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ರಾಘವೇಂದ್ರ ಹೇಳಿದರು.
ನಗರದ ವಿದ್ಯಾನಗರದ ರೈಲ್ವೇ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಮಾತನಾಡಿದರು.
ದಾಖಲೆ ಅವಧಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಬೈಪಾಸ್ ರೋಡ್, ಶಿವಮೊಗ್ಗ ರಿಂಗ್ ರೋಡ್ ಕಾಮಗಾರಿ ಮುಂದುವರಿಸಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಈಗಾಗಲೇ ಭೇಟಿ ಮಾಡಿ ವಿನಂತಿಸಿದ್ದೇನೆ. ಶಿವಮೊಗ್ಗ -ಸವಳಂಗ -ದಾವಣಗೆರೆ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಹೆದ್ದಾರಿ ಮೇಲ್ದರ್ಜೆಗೇರಿಸಲು ಒತ್ತಾಯಿಸಿದ್ದೇನೆ. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಸಂಬಂಧಪಟ್ಟ ಸಚಿವರ ಬಳಿ ಚರ್ಚೆ ನಡೆಸಿದ್ದೇನೆ. ಹಣಕಾಸು ಸಚಿವರಿಗೂ ಮನವಿ ಮಾಡಿದ್ದು, ಸೇಲ್ ಅಧ್ಯಕ್ಷರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ.
– ಬಿ.ವೈ.ರಾಘವೇಂದ್ರ, ಸಂಸದ
₹44 ಕೋಟಿ ವೃತ್ತಾಕಾರದ ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ರೈಲ್ವೆ ಟ್ರ್ಯಾಕ್ ಕ್ರಾಸಿಂಗ್ ನಲ್ಲಿ ಮೇಲ್ಕವಚ ಎತ್ತಿ ಇಡುವ ಕೆಲಸ ಬಾಕಿ ಇದೆ. ಆ.15ಕ್ಕೆ ನಾಗರಿಕರಿಗೆ ಇದು ಕೊಡುಗೆಯಾಗಿ ಸಮರ್ಪಣೆಯಾಗಲಿದೆ ಎಂದರು.
ಭದ್ರಾವತಿ ಕಡದಕಟ್ಟೆ ರೈಲ್ವೇ ಲೆವೆಲ್ ಕ್ರಾಸಿಂಗ್ ಹಂತ ಹಂತವಾಗಿ ಲೋಕಾರ್ಪಣೆಯಾಗಲಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ರೈಲ್ವೇ ಜಿಎಂ ಅವರೊಂದಿಗೆ ಸಭೆ ನಡೆಸಲಾಗಿದೆ. ಡಿಸೆಂಬರ್ ಒಳಗೆ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳು ಪೂರ್ಣವಾಗಲಿವೆ ಎಂದು ಹೇಳಿದರು.
₹20 ಕೋಟಿ ವೆಚ್ಚದಲ್ಲಿ ನಿರ್ಮಾಣ
ಬೈಪಾಸ್ ರಸ್ತೆಯಲ್ಲಿ ತುಂಗಾ ಸೇತುವೆ ₹20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಆಗಸ್ಟ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಹಾಸ್ಯ ಮಾಡುತ್ತಿರುವವರು ಚರ್ಚೆಗೆ ಬರಲಿ ಪಟ್ಟಿ ನೀಡುತ್ತೇನೆ ಎಂದು ಸವಾಲು ಹಾಕಿದರು.
ರೈಲ್ವೆ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಯಾಗಿವೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. 10 ಜಿಲ್ಲೆಗಳಿಗೆ ಇದು ಸಂಪರ್ಕ ಕಲ್ಪಿಸಲಿದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Water scarcity | ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಕೊರತೆ, ಎಲ್ಲಿ ಎಷ್ಟು ಕೊಳವೆ ಬಾವಿ ಕೊರೆಯಲಾಗಿದೆ?