ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಿವೆ. ಈ ನಡುವೆ ಕೇಂದ್ರ ಸ್ಥಾನ ಬಿಟ್ಟು ಬೇರೆಯ ತಾಲೂಕುಗಳಿಂದ ಓಡಾಡುತ್ತಿದ್ದಾರೆ. ಅಂತಹ ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮತ್ತು ಅಡಿಕೆ ಬೆಳೆಯ ಎಲೆಚುಕ್ಕಿ ರೋಗದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.
ಕನಿಷ್ಠ ಮಳೆಗಾಲದ ಈ ಎರಡು ತಿಂಗಳುಗಳಾದರೂ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಸೂಚನೆ ನೀಡುವುದಾಗಿ ತಿಳಿಸಿದರು.
ಆರಗ ಜ್ಞಾನೇಂದ್ರ ಅವರು “ಕಳೆದ ಸಾಲಿನಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣ ಕುರಿತಾದ ಸಂಶೋಧನೆಗೆ ರೂ. 10 ಕೋಟಿ ಅನುದಾನ ಇರಿಸಲಾಗಿದ್ದು ಈ ಬಾರಿ ಕೈಬಿಡಲಾಗಿದೆ. ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯದೆ ಹೋದರೆ ಹಾಗೂ ಔಷಧಿ ಸಿಂಪಡಿಸಲು ಕ್ರಮ ವಹಿಸದಿದ್ದರೆ ಅಡಿಕೆ ತೋಟಕ್ಕೆ ತೋಟವೇ ನಾಶವಾಗುತ್ತದೆ. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಕಾಲೇಜಿನಲ್ಲಿ ಸಂಶೋಧನೆಗೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಈ ಕುರಿತು ವೈಯಕ್ತಿಕವಾಗಿ ಗಮನಹರಿಸುವುದಾಗಿ ಭರವಸೆ ನೀಡಿದರು.
READ | ಶಿವಮೊಗ್ಗದಲ್ಲಿ ವಾಡಿಕೆಯಷ್ಟೂ ಆಗಿಲ್ಲ ಮಳೆ, ಯಾವ ತಾಲೂಕಿನಲ್ಲಿ ಎಷ್ಟು ವರ್ಷಧಾರೆ?
ಯಾರು ಏನೆಂದರು?
ಡಿಡಿಪಿಐ ಅವರು ಪ್ರತಿಕ್ರಿಯಿಸಿ 24 ಶಾಲೆಗಳನ್ನು ಕೆಡವಲು ಪಿಡಬ್ಲ್ಯುಡಿ ಅನುಮೋದನೆ ನೀಡಿದೆ. ಇನ್ನೂ 423 ಶಾಲೆಗಳ ದೃಢೀಕರಣ ಆಗಬೇಕಿದೆ.
– ಸಿ.ಆರ್.ಪರಮೇಶ್ವರಪ್ಪ, ಡಿಡಿಪಿಐರಾಜ್ಯದಲ್ಲಿ 2500 ರಿಂದ 3000 ಶಾಲೆಗಳಲ್ಲಿ ಕೇವಲ 10 ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 300 ಶಾಲೆಗಳಲ್ಲಿ ಸೊನ್ನೆ ಶಿಕ್ಷಕರಿದ್ದಾರೆ. ಇದೀಗ ಶಿಕ್ಷಕರ ಕೊರತೆ ನೀಗಿಸಲಾಗುತ್ತಿದೆ. 15 ಸಾವಿರ ಶಿಕ್ಷಕರು ಬರುತ್ತಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ. 4-5 ಕಿ.ಮೀ ಅಥವಾ ಕಡಿಮೆ ಅಂತರದಲ್ಲಿ ಅತಿ ಕಡಿಮೆ ಅಂದರೆ 3 ರಿಂದ 4 ಮತ್ತು 8-10 ವಿದ್ಯಾರ್ಥಿಗಳಿರುವ ಶಾಲೆಗಳನ್ನು ಒಂದೆಡೆ ಸೇರಿಸಿ ಶಾಲೆ ನಡೆಸಿದರೆ ಅತ್ಯಂತ ಉಪಯುಕ್ತವಾಗುತ್ತದೆ. ಈ ಕುರಿತು ಡಿಡಿಪಿಐ, ಬಿಇಒ ಅವರು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ, ಪಟ್ಟಿಮಾಡಿ ವರದಿ ನೀಡಬೇಕು. ಈ ರೀತಿಯ 4-5 ಶಾಲೆಗಳನ್ನು ಒಂದೇ ಕಡೆ ಸುಸಜ್ಜಿತವಾದ ಶಾಲೆ ವ್ಯವಸ್ಥೆ ಮಾಡಿದಲ್ಲಿ ಮಕ್ಕಳಿಗೂ ಉತ್ತಮ ಶಾಲಾ ವಾತಾವರಣ ಲಭ್ಯವಾಗುತ್ತದೆ. ಈ ರೀತಿಯ ಶಾಲೆಗೆ ತೆರಳಲು ಮಕ್ಕಳಿಗೆ ಸರ್ಕಾರದ ವತಿಯಿಂದ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು.
– ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು
READ | ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಸೆಲ್ಫಿಗೆ ಬ್ರೇಕ್
ಸಭೆಯಲ್ಲಿ ಟಾಪ್ 3 ವಿಚಾರಗಳು
- ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರಗಳನ್ನು ಒದಗಿಸಬೇಕು. ವಿಳಂಬ ಮಾಡುವಂತಿಲ್ಲ. ಮಲೆನಾಡು ಭಾಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ, ಕೆಲವೆಡೆ ರಸ್ತೆ, ಸೇತುವೆ, ಬೆಳೆ ಹಾನಿ ಹೀಗೆ ಕೆಲವೆಡೆ ಮೂಲಭೂತ ಸೌಕರ್ಯಗಳಿಗೆ ಹಾನಿ ಸಂಭವಿಸಿದ್ದು ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಎಚ್ಚರಿಕೆಯಿಂದಿದ್ದು ಶೀಘ್ರವಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕು.
- ಹಳೆಯ ಶಾಲೆ ಕೆಡುವುದು ಮತ್ತು ಮರಗಳನ್ನು ಕಟಾವು ಮಾಡುವುದು ಅತಿ ಮುಖ್ಯ. ಇದು ತುಂಬಾ ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ಡಿಡಿಪಿಐ ಅವರು ಶಿಥಿಲಾವಸ್ಥೆಯಲ್ಲಿರುವ ಶಾಲೆ ಕೆಡವಲು ಕ್ರಮ ಕೈಗೊಳ್ಳಬೇಕು. ಹಾಗೂ ಈ ಕುರಿತು ಪಿಡಬ್ಲ್ಯುಡಿ ಮತ್ತು ಪಿಆರ್ಇಡಿ ಅವರು ಶುಕ್ರವಾರದೊಳಗೆ ವರದಿ ನೀಡಬೇಕು.
- ಭದ್ರಾ ಪ್ರಾಜೆಕ್ಟ್ ಅಧಿಕಾರಿ ಮಾತನಾಡಿ, ಪ್ರಸ್ತುತ ಜಲಾಶಯಲದಲಿ 152.9 ಅಡಿ ನೀಡಿದ್ದು, 162 ಅಡಿ ಬಂದ ಮೇಲೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ವಹಿಸಲಾಗುವುದು. ಭದ್ರಾ ಜಲಾಶಯ ಒಂದೆಡೆ ಬಿದಿರು ಮೆಳೆ ಬೆಳೆದು ನೀರು ಲೀಕೇಜ್ ಆಗುತ್ತಿದ್ದು, 10 ರಿಂದ 12 ಟಿಎಂಸಿ ನೀರು ವ್ಯರ್ಥವಾಗುತ್ತದೆ ಅರಣ್ಯ ಇಲಾಖೆಯವರು ಇದನ್ನು ಸರಿಪಡಿಸಬೇಕು. ಬಿದಿರು ಕಡಿದು ಲೀಕೇಜ್ ಸರಿಪಡಿಸದಿದ್ದರೆ ಜಲಾಶಯಕ್ಕೆ ಸಮಸ್ಯೆಯಾಗುತ್ತದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮಳೆಹಾನಿ ಪ್ರದೇಶಗಳಿಗೆ ಭೇಟಿ
ಸಭೆಯ ನಂತರ ಸಚಿವರು ಶಿವಮೊಗ್ಗದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಹೊಸಮನೆ ರಾಜಾಕಾಲುವೆ ಕಾಮಗಾರಿ, ದುರ್ಗಿಗುಡಿ ಸವಾರ್ಲೈನ್ ರಸ್ತೆಯಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗೆ ಭೇಟಿ ನೀಡಿದರು. ರಿಪ್ಪನ್ಪೇಟೆಯ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ, ರಿಪ್ಪನ್ಪೇಟೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿದರು. ಈ ವೇಳೆ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಡಿಸಿ, ಎಸ್ಪಿ, ಸಿಇಓ, ಎಸಿ ಇತರೆ ಅಧಿಕಾರಿಗಳು ಹಾಜರಿದ್ದರು.
Helmet operation | ಶಿವಮೊಗ್ಗದಲ್ಲಿ ನಾಳೆಯಿಂದ ಹಾಫ್ ಹೆಲ್ಮೆಟ್ ಹಾಕುವಂತಿಲ್ಲ, ಕಾರಣವೇನು ?