ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ ಹಾಗೂ ಸೊರಬದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸೊರಬದ ಡಾ.ರಾಜ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಎಸ್.ಬಂಗಾರಪ್ಪ ಅವರು ಹಲವು ಪ್ರಮುಖ ಎರಡು ವುಚಾರಗಳನ್ನು ಘೋಷಿಸಿದ್ದಾರೆ.
- ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 500-600 ಕರ್ನಾಟಕ ಪಬ್ಲಿಕ್ ಸ್ಕೂಲ್ (karnataka public school) ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
- ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಮಾದರಿ ಶಾಲೆಗಳನ್ನು ಆರಂಭಿಸಿ, ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಶಾಲೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸಕ್ತ ಮಕ್ಕಳನ್ನು ದಾಖಲು ಮಾಡಿಕೊಂಡು ತರಗತಿಗಳಿಗೆ ಕರೆತರುವ ಹಾಗೂ ತರಗತಿ ಮುಗಿದ ನಂತರ ಬಿಟ್ಟು ಬರಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯರ ಸಹಕಾರವನ್ನು ಪಡೆಯಲಾಗುವುದು.
ದ್ವಿತೀಯ ಪೂರಕ ಪರೀಕ್ಷೆ ಫಲವಾಗಿ 41 ಸಾವಿರ ಪಾಸ್
ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ಕರೆತರಲು ವಿನೂತನ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಈ ವಿಶೇಷ ಪ್ರಯತ್ನದ ಫಲವಾಗಿ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ನೇ ಬಾರಿಗೆ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಿದ ಪರಿಣಾಮವಾಗಿ ಪರೀಕ್ಷೆಗೆ ಹಾಜರಾದ ಸುಮಾರು 119000 ಮಕ್ಕಳ ಪೈಕಿ 41000 ಮಕ್ಕಳು ಉತ್ತೀರ್ಣರಾಗಿ ಶಿಕ್ಷಣದ ಮುಖ್ಯವಾಹಿನಿಗೆ ಬರುವಂತೆ ಆಗಿದೆ ಎಂದರು.
READ | ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧ ಬೇಡ, ವಿಶ್ವ ಹಿಂದೂ ಪರಿಷತ್ ಬೇಡಿಕೆಗಳೇನು? ಎಸ್.ಪಿ ಹೇಳಿದ್ದೇನು?
ಈ ರೀತಿ ಅವಕಾಶ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಶಾಲಾ ದಾಖಲಾತಿಗೆ ಸೂಚಿಸಲಾಗಿದೆ. ಅಲ್ಲದೆ ಈಗಾಗಲೇ ಪೂರ್ಣಗೊಂಡ ಪಾಠಗಳ ಪುನರಾವರ್ತನೆ ಮಾಡಲು ಸೂಚಿಸಲಾಗಿದೆ ಎಂದರು.
3 ಸಾವಿರ ಶಿಕ್ಷಕರ ವರ್ಗಾವಣೆ
ಪ್ರಸಕ್ತ ಸಾಲಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸುಮಾರು 30000ಕ್ಕೂ ಹೆಚ್ಚಿನ ಶಿಕ್ಷಕರ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಇತಿಹಾಸ ಎನಿಸಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು 43000 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಕಾನೂನು ತೊಡಕಿನಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿಗೆ ನ್ಯಾಯಾಲಯದ ಆದೇಶ ಹೊರ ಬರುತ್ತಿದ್ದಂತೆ ಆಯ್ಕೆ ಆದ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗುವುದು. ಆಯ್ಕೆಯಾದ ಶಿಕ್ಷಕರು ತಾಳ್ಮೆಯಿಂದ ಇರುವಂತೆ ಮನವಿ ಮಾಡಿದರು.