ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ಗೌರಿ, ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಮನೆ ಮತ್ತು ಬಡಾವಣೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮೋದಕ ಪ್ರಿಯನಿಗೆ ವಿಶೇಷ ಖಾದ್ಯ ತಯಾರಿಸಿ ನೈವೇದ್ಯ ತೋರಲಾಗುತ್ತಿದೆ. ಗಣಪತಿ ಪೆಂಡಾಲ್ ಗಳಲ್ಲಿ ಸಾರ್ವಜನಿಕರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಗಣಪತಿ ದೇವಸ್ಥಾನಗಳಲ್ಲೂ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷ ಅಲಂಕಾರ ಮಾಡಲಾಗಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತರು ಪೆಂಡಾಲ್ ಗಣೇಶನನ್ನು ಭಕ್ತಿಭಾವದಿಂದ ಪೂಜಿಸುತ್ತಿದ್ದಾರೆ. ರವೀಂದ್ರ ನಗರದಲ್ಲಿ ವಿಶೇಷ ಪೂಜೆ ಜರುಗಿತು.
READ | ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ತಿಳಿಯಲೇಬೇಕಾದ 8 ಅಂಶಗಳು
ಚಂದ್ರಯಾನ ಸೇರಿದಂತೆ ವಿವಿಧ ಮೂರ್ತಿಗಳ ಪ್ರತಿಷ್ಠಾಪನೆ
ಪ್ರತಿ ಹಬ್ಬದಲ್ಲೂ ಗಣೇಶ ಹಲವು ವಿಶೇಷಗಳನ್ನು ಹೊತ್ತು ತರುತ್ತಾನೆ. ಅದನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಈ ಸಲ ಚಂದ್ರಯಾನ-3 ಯಶಸ್ವಿಯಾಗಿರುವುದರಿಂದ ಮೂರ್ತಿಯ ಹಿಂಭಾಗದಲ್ಲಿ ಚಂದ್ರ ಮತ್ತು ರಾಕೆಟ್ ಮಾಡಲಾಗಿದೆ. ಈ ರೀತಿಯಲ್ಲಿ ಭಿನ್ನಭಿನ್ನವಾದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಸಂಜೆಯ ನಂತರ ಸಾರ್ವಜನಿಕರು ಸಹ ಹಲವೆಡೆ ಪ್ರತಿಷ್ಠಾಪಿಸಿರುವ ಪೆಂಡಾಲ್ ಗಣೇಶನನ ದರ್ಶನ ಪಡೆಯುವುದಕ್ಕಾಗಿ ಆಗಮಿಸುವ ದೃಶ್ಯಗಳು ಕಂಡುಬಂದವು. ಸೈನ್ಸ್ ಮೈದಾನದಿಂದ ಗಣಪತಿಯನ್ನು ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಲಾಗಿದೆ.
ಹಿಂದೂ ಸಂಘಟನೆ ಮಹಾಮಂಡಳದ ಗಣಪತಿ ಪ್ರತಿಷ್ಠಾಪನೆ
ಹಿಂದೂ ಸಂಘಟನೆ ಮಹಾಮಂಡಳದ ಗಣಪತಿಯನ್ನು ಸೋಮವಾರ ಪ್ರತಿಷ್ಠಾಪಿಸಲಾಗಿದೆ. 79ನೇ ವರ್ಷ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಕುಂಬಾರ ಬೀದಿಯಿಂದ ಗಣಪತಿ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಕೋಟೆ ರಸ್ತೆ ಮೂಲಕ ತಂದು ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ವಿಶೇಷ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ಸಹ ನಡೆಯಲಿದೆ.
ಸೆ.28ರಂದು ಅನಂತ ಚತುರ್ದಶಿದಂದು ಪ್ರತಿ ವರ್ಷದಂತೆ ರಾಜಬೀದಿದೊಂದಿಗೆ ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡಲಾಗುವುದು.
ಗಣೇಶ ಪ್ರತಿಷ್ಠಾಪನೆ ಪೂರ್ವದ ಮೆರವಣಿಗೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಸಏರಿದಂತೆ ಹಲವರು ಉಪಸ್ಥಿತರಿದ್ದರು.