ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತೀರ್ಥಹಳ್ಳಿ ತಾಲ್ಲೂಕು ಕಟ್ಟೆಹಕ್ಕಲಿನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು, ನಿರ್ಮಿಸಿರುವ ಮಲೆನಾಡು ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ಪರಿಸರ ಕಾಳಜಿಯ ಜಲಪಾತ ಚಲನಚಿತ್ರ ಇದೇ ಅಕ್ಟೋಬರ್ 13ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು, ಶಿವಮೊಗ್ಗದ ಭಾರತ್ ಸಿನಿಮಾಸ್ ಮತ್ತು ತೀರ್ಥಹಳ್ಳಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಕೂಡಾ ಪ್ರದರ್ಶಿತಗೊಳ್ಳಲಿದೆ ಎಂದು ನಿರ್ದೇಶಕ ರಮೇಶ್ ಬೇಗಾರ್ (Ramesh Begar) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಪರಿಪೂರ್ಣ ಮಲೆನಾಡು ಶೈಲಿಯ ಚಿತ್ರವಾಗಿದೆ. ಸ್ಥಳೀಯ ಪ್ರತಿಭೆಗಳ ಮಹಾವೇದಿಕೆಯಾಗಿದೆ ಎಂದರು.
READ | ಚಿತ್ರದುರ್ಗ- ಶಿವಮೊಗ್ಗ ಮಾರ್ಗ ಬದಲಾವಣೆ, ಪರ್ಯಾಯ ಮಾರ್ಗ ಅಧಿಸೂಚನೆ
ಮಲೆನಾಡಿನ ಪರಿಸರ ನಾಶಕ್ಕೆ ಕಾರಣವಾದ ವಿವಿಧ ವಿಚಾರವನ್ನು ಫ್ಯಾಮಿಲಿ ಡ್ರಾಮದ ಶೈಲಿಯಲ್ಲಿ ಹೇಳುವ ವಿಶಿಷ್ಟ ಸಿನಿಮಾ ಇದಾಗಿದೆ. ಶಶೀರ ಶೃಂಗೇರಿ-ಛಾಯಾಗ್ರಹಣ, ಅವಿನಾಶ್ ಶೃಂಗೇರಿ- ಸಂಕಲನ, ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನವನ್ನು ಚಿತ್ರ ಹೊಂದಿದೆ.
ಪ್ರಸಿದ್ಧ ನಟ ಪ್ರಮೋದ್ ಶೆಟ್ಟಿ ಅವರು ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿ ಪೂರ್ವ ಸಿನಿಮಾ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು, ಶೃಂಗೇರಿಯ ರಂಗಪ್ರತಿಭೆ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬಿ.ಎಲ್.ರವಿಕುಮಾರ್, ಎ.ಎಸ್.ನಯನ, ನಟರಾಜ್ ತೋರಣ ಗದೆ, ಎಂ.ಆರ್.ಸುರೇಶ್, ರೇಖಾ ಪ್ರೇಮ್ ಕುಮಾರ್, ಚಂದ್ರಶೇಖರ್ ತುಂಬರಮನೆ, ಸ್ವಾತಿ ಶಶಿ ಭೂಷಣ್, ಸುನೀತಾ ನವೀನ್, ವೈಶಾಲಿ ಮೊದಲಾದ ರಂಗಭೂಮಿ ಕಲಾವಿದರು ಬಣ್ಣ ಹಚ್ಚಿದ್ದಾರೆ ಎಂದರು.
ಚಿತ್ರದ ಪರಿಸರ ಗೀತೆಯೊಂದನ್ನು ಪ್ರಸಿದ್ಧ ಗಾಯಕ ವಿಜಯಪ್ರಕಾಶ್ ಹಾಡಿದ್ದು, ವನಿತಾ ವೆಂಕಟೇಶ್ ಮತ್ತು ಮಧುರ ಕವಿಲುಕೊಡಿಗೆ ಸಾಹಿತ್ಯವಿದೆ.
ಮಲೆನಾಡು ಅಸ್ಮಿತೆಯನ್ನು ಚಲನಚಿತ್ರ ಮಾಧ್ಯಮದಲ್ಲಿ ಸಾರುವ ನಿಟ್ಟಿನಲ್ಲಿ ಈ ಚಿತ್ರ ಒಂದು ಮೈಲಿಗಲ್ಲಾಗುವ ಎಲ್ಲ ಲಕ್ಷಣವನ್ನು ಚಿತ್ರದ ಟ್ರೇಲರ್ ಮತ್ತು ಹಾಡುಗಳು ನೀಡುತ್ತಿವೆ ಎಂದು ತಿಳಿಸಿದರು.
ನಾಯಕ ನಟ ರಜನೀಶ್, ನಟಿ ನಾಗಶ್ರೀ ಬೇಗಾರ್ ಸೇರಿದಂತೆ ಹಲವರಿದ್ದರು.
Fire accident | ತೀರ್ಥಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ, ಒಬ್ಬನ ಸ್ಥಿತಿ ಗಂಭೀರ, ಇಡೀ ಗ್ರಾಮವೇ ದಂಗು