ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಈದ್ ಮಿಲಾದ್ ಮೆರವಣಿಗೆ (Eid Milad Procession) ಸಂದರ್ಭದಲ್ಲಿ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ರಾಗಿಗುಡ್ಡ ಮತ್ತು ಶಾಂತಿನಗರದಲ್ಲಿ ಏಕಾಏಕಿ ಕಲ್ಲು ತೂರಾಟ ನಡೆದು ಹಲವು ಮನೆಗಳು, ವಾಹನಗಳು ಮತ್ತು ಎಂಟಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಗಲಭೆ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
READ | ತೀರ್ಥಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ, ಒಬ್ಬನ ಸ್ಥಿತಿ ಗಂಭೀರ, ಇಡೀ ಗ್ರಾಮವೇ ದಂಗು
ಏನಿದು ಕಲ್ಲು ತೂರಾಟ ಪ್ರಕರಣ?
ಅಕ್ಟೋಬರ್ 1 ರಂದು ಈದ್ ಮಿಲಾದ್ ಮೆರವಣಿಗೆಗೆ ಇಡೀ ನಗರವನ್ನು ಅಲಂಕರಿಸಲಾಗಿತ್ತು. ವಿವಿಧೆಡೆ ಮೆರವಣಿಗೆಗಳು ಸಹ ನಡೆಯುತ್ತಿದ್ದವು. ಅದೇ ರೀತಿ ರಾಗಿಗುಡ್ಡದಿಂದ ಮೆರವಣಿಗೆ ಹೊರಟಿತ್ತು. ಆಗ ಕಲ್ಲು ತೂರಾಟ ನಡೆದಿದ್ದು, ತಕ್ಷಣ ಎಸ್.ಪಿ. ಜಿ.ಕೆ. ಮಿಥುನ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದರು. ಅವರ ಮೇಲೆಯೂ ಹಿಗ್ಗಾಮುಗ್ಗಾ ಕಲ್ಲು ತೂರಾಟ ನಡೆದಿತ್ತು. ಈ ಗಲಾಟೆಯಲ್ಲಿ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಪರಿಸ್ಥಿತಿಯನ್ನು ತಹಬದಿಗೆ ತರಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ರಾಗಿಗುಡ್ಡ ಭಾಗದಲ್ಲಿ ಮಾತ್ರ ಅನ್ವಯವಾಗುವಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದರು.