ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಂತ್ರಜ್ಞಾನ ಬೆಳೆದಂತೆ ಎಲ್ಲರನ್ನೂ ಮುಜುಗರಕ್ಕೀಡು ಮಾಡುವ ಘಟನೆಗಳು ನಿರಂತರ ಸುದ್ದಿಯಾಗುತ್ತಲೇ ಇದೆ. ಅದರಲ್ಲೂ ಫೇಸ್ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ತೇಜೋವಧೆ ಮಾಡುತ್ತಿರುವ ಘಟನೆಗಳಿಗೆ ಲೆಕ್ಕವೇ ಇಲ್ಲ. ಇಂತಹದ್ದೇ ಒಂದು ಘಟನೆ ಶಿವಮೊಗ್ಗದಲ್ಲೂ ನಡೆದಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ, ಮಾಡಲಾದ ಆರೋಪಗಳೇನು?
ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೆಸರಿನಲ್ಲಿ ನಕಲಿ ಫೇಸ್ಬುಕ್ ಗ್ರೂಪ್ ಸೃಷ್ಟಿಸಲಾಗಿದೆ. ಅಷ್ಟಕ್ಕೇ ನಿಲ್ಲದ ಕಿಡಿಗೇಡಿಗಳು ಗ್ರೂಪಿನಲ್ಲಿ ಸಚಿವರ ಹಾಗೂ ಪಕ್ಷಕ್ಕೆ ವಿರುದ್ಧವಾದ ಫೋಸ್ಟ್ ಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ನ.27ರಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ ಮಂಜುನಾಥ್ ದೂರು ನೀಡಿದ್ದಾರೆ. ಪೊಲೀಸರೂ ಇದ್ದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
READ | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ
ಏನು ಗ್ರೂಪ್? ದೂರಿನಲ್ಲಿರುವ ಆರೋಪಗಳೇನು?
- ‘ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ ಎಂಬ ಹೆಸರಿನ ನಕಲಿ ಫೇಸ್ಬುಕ್ ಗ್ರೂಪ್ ಸೃಷ್ಟಿಸಲಾಗಿದೆ. ಅದರಲ್ಲಿ ಮಧು ಅವರ ಚಿತ್ರವನ್ನೂ ಹಾಕಲಾಗಿದೆ. ವಿಶೇಷವೆಂದರೆ, ಅದರಲ್ಲಿ 58K ಫಾಲೋವರ್ಸ್ ಸಹ ಇದ್ದಾರೆ. ಈ ಗ್ರೂಪಿನಲ್ಲಿ ವ್ಯಕ್ತಿಯೊಬ್ಬರು ಕಾಂಗ್ರೆಸ್ ವಿರುದ್ಧದ ಪೋಸ್ಟ್ವೊಂದನ್ನು ಹಾಕಿದ್ದಾರೆ.
- ಈ ಫೋಸ್ಟ್ ನಲ್ಲಿ ‘ಯೇ ಹೈ ಅಚ್ಚೇ ದಿನ್ ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್ನ ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ರು, ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ’ ಎಂದು ಬರೆದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇರುವ ಪೋಟೊ ಹಾಕಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
- ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್ಗಳನ್ನು ‘ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ಎಂಬ ಪೇಸ್ಬುಕ್ ಗ್ರೂಪ್ ಗೆ ಟ್ಯಾಗ್ ಮಾಡಲಾಗಿದೆ ಎಂದು ದೂರಲಾಗಿದೆ.