ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ (degree college guest lecture) ಬೇಡಿಕೆಗಳಿಗೆ ಸ್ಪಂದಿಸಬೇಕು. ಮತ್ತೊಮ್ಮೆ ಸಭೆ ಕರೆದು ಚರ್ಚಿಸಬೇಕು. ಉಪನ್ಯಾಸಕರು ಸಹ ಮುಷ್ಕರಕ್ಕಿಂತ ಸಮಾಧಾನ ಕಂಡುಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ಮನವಿ ಮಾಡಿದರು.
READ | ಕುಡಿಯುವ ನೀರಿನ ಪೈಪ್ ಲೈನ್ ಕಿತ್ತೊಗೆದ ಕಿಡಿಗೇಡಿಗಳು
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಘೋಷಿಸಿರುವ ಆಶ್ವಾಸನೆಗಳು ಸಮಾಧಾನಕರವೇ ಹೊರತು ತೃಪ್ತಿದಾಯಕವಲ್ಲ. ಮತ್ತೊಮ್ಮೆ ಪರಿಶೀಲಿಸಬೇಕು ಎಂದು ವಿನಮೃತೆಯಿಂದ ಕೋರಿದರು.
ಮುಷ್ಕರ ನಿರತ ಅತಿಥಿ ಉಪನ್ಯಾಸಕರು ಜ.1 ರಿಂದ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆಯುವುದಾಗಿ ಸಚಿವರು ಹೇಳಿದ್ದಾರೆ. ಇಂತಹ ಕಠಿಣ ನಿಲುವು ತಳೆಯದೆ ಮತ್ತೊಮ್ಮೆ ಮಾತುಕತೆ ನಡೆಸಬೇಕು. ಮುಷ್ಕರ ನಿರತರು ಕೂಡ ಹಠ ಬಿಟ್ಟು ಮಾತುಕತೆಗೆ ಮುಂದಾಗುವಂತೆ ಸಲಹೆ ನೀಡಿದರು.
ಸರ್ಕಾರಕ್ಕೆ ಅತಿಥಿ ಉಪನ್ಯಾಸಕರ ಬೇಡಿಕೆಗಳೇನು?
- ನೀಡಿರುವ ಆಶ್ವಾಸನೆಗಳು ಅತಿಥಿ ಉಪನ್ಯಾಸಕರಿಗೆ ತಲುಪಬೇಕಾದರೆ ಸೇವಾ ಭದ್ರತೆ ಅಗತ್ಯ. ಮೊದಲು ಆ ಕೆಲಸ ಸರ್ಕಾರ ಮಾಡಬೇಕು.
- ಈಗ ನೀಡುತ್ತಿರುವ ಹತ್ತು ತಿಂಗಳ ವೇತನದ ಬದಲಾಗಿ 12 ತಿಂಗಳ ವೇತನ ನೀಡಬೇಕು.
- ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು.
- 60 ವರ್ಷದವರೆಗೆ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುವುದಿಲ್ಲ ಎಂಬ ಭರವಸೆ ಸರ್ಕಾರ ನೀಡಬೇಕು.
- ಇಡುಗಂಟು ₹5 ಲಕ್ಷಕ್ಕೆ ಮಿತಿಗೊಳಿಸಿದ್ದು, ಇದಕ್ಕೆ ವೈಜ್ಞಾನಿಕ, ತಾಂತ್ರಿಕ ನೆಲೆಕಟ್ಟು ಇಲ್ಲ. ಕೂಡಲೇ ಸರಿಪಡಿಸಬೇಕು.
ಸರ್ಕಾರದ ನಿರ್ಧಾರ ಸಮಾಧಾನ ತಂದಿಲ್ಲ
ರಾಜ್ಯ ಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಶಿವಮೊಗ್ಗ ಮಾತನಾಡಿ, ಸರ್ಕಾರ ಸಭೆಯಲ್ಲಿ ನೀಡಿರುವ ಆಶ್ವಾನಸೆ ಮತ್ತು ತೆಗೆದುಕೊಂಡ ನಿರ್ಧಾರಗಳು ಸಮಾಧಾನ ತಂದಿಲ್ಲ ಎಂದರು.
ಪ್ರತಿ ವರ್ಷ ನಮ್ಮನ್ನು ಎರಡು ತಿಂಗಳ ಕಾಲ ಸೇವೆಯಿಂದ ತೆಗೆದುಹಾಕಲಾಗುತ್ತದೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಹುದು, ತೆಗೆದುಕೊಳ್ಳದೇ ಇರಬಹುದು. ಆಗಾದಾಗ 10 ವರ್ಷ ಸೇವೆ ಸಲ್ಲಿಸುವುದು ಹೇಗೆ? ಎಂದು ಪ್ರಶ್ನಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ಸುರಯಾ ಬೇಗಂ, ಅನುದಾನ ಶಿಕ್ಷಣ ಸಂಸ್ಥೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ ಇದ್ದರು.