ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲಾ ಗ್ರಾಹಕರ ನ್ಯಾಯಾಲಯವು ಅರ್ಜಿದಾರ ಕೆ.ಎಸ್.ಬದ್ರೀಶ್ ಅವರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ವಿಮಾ ಪಾಲಿಸಿ ಷರತ್ತು ನಿಬಂಧನೆಗಳನ್ನು ಅವಲೋಕಿಸಿ ಅರ್ಜಿದಾರರು ಎರಡು ವರ್ಷಗಳ ಕಾಲ ವಿಮಾ ಕಂತನ್ನು ಪಾವತಿಸಿರುವುದರಿಂದ ಪಾಲಿಸಿಯ ಪ್ರಯೋಜನಗಳನ್ನು ಸರಂಡರ್ ಮೊತ್ತದೊಂದಿಗೆ ಪಡೆಯಲು ಅರ್ಹರಿರುತ್ತಾರೆಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರರು ಪಾಲಿಸಿ ಸರಂಡರ್ ಮೊತ್ತವನ್ನು ಶೇ.9 ಬಡ್ಡಿ ಸಮೇತ ಹಾಗೂ ₹30,000 ಗಳನ್ನು ಮಾನಸಿಕ ಹಿಂಸೆ, ಹಾನಿಗೆ ಸಂಬಂಧಿಸಿದಂತೆ ಮತ್ತು ₹10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಮೊತ್ತವೆಂದು ಅರ್ಜಿದಾರರಿಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.
READ | ಎಸ್ಎಸ್ಎಲ್ಸಿ, ಪಿಯುಸಿ ವೇಳಾಪಟ್ಟಿ ದಿನಾಂಕ ನಿಗದಿ, ಯಾವ ದಿನ ಯಾವ ಪರೀಕ್ಷೆ ನಡೆಯಲಿದೆ?
ಏನಿದು ಪ್ರಕರಣ?
ಕೆ.ಎಸ್.ಬದ್ರೀಶ್ ಎಂಬುವವರು ಎದುರುದಾರ ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂ.ಲಿ ಮುಖ್ಯ ಕಚೇರಿ ಮುಂಬೈ ಹಾಗೂ ಶಾಖಾ ಕಚೇರಿ ದಾವಣಗೆರೆ ವಿರುದ್ದ ಸೇವಾ ನ್ಯೂನ್ಯತೆ ಬಗ್ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಪರಿಹಾರ ಕೋರಿ ದಾಖಲಿಸಿದ್ದ ಪ್ರಕರಣದಲ್ಲಿ ಆಯೋಗವು ಎದುರುದಾರ ಕಂಪನಿಯು ಅರ್ಜಿದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಅರ್ಜಿದಾರ ಕೆ.ಎಸ್. ಬದ್ರೀಶ್ ಅವರು ಎದುರುದಾರಲ್ಲಿ ಫ್ಯೂಚರ್ ಪರ್ಫೆಕ್ಟ್ ವಿಮಾ ಪಾಲಿಸಿ ಪಡೆದಿರುತ್ತಾರೆ. ಪಾಲಿಸಿ ಕಂತು ₹1,56,750 ಗಳಾಗಿದ್ದು, 2020 ರಿಂದ 2022 ರವರೆಗೆ ಐದು ಕಂತು ಮೊತ್ತ ₹7,75,400 ನ್ನು ಪಾವತಿಸಿರುತ್ತಾರೆ. ಆದರೆ ಕೋವಿಡ್ 19 ಸಂಕಷ್ಟದಿಂದ ನಂತರದ ವಿಮಾ ಕಂತುಗಳನ್ನು ಕಟ್ಟಲು ಸಾಧ್ಯವಾಗದ ಕಾರಣ ವಿಮಾ ಪಾಲಿಸಿ ರದ್ದುಗೊಳಿಸಿ ಈವರೆಗೆ ಪಾವತಿಸಿದ ಕಂತುಗಳನ್ನು ಪಾಲಿಸಿ ಪ್ರಯೋಜನದೊಂದಿಗೆ ಮರುಪಾವತಿಸುವಂತೆ ಕೋರಿರುತ್ತಾರೆ. ವಿಮಾ ಕಂಪೆನಿ ಪಾಲಿಸಿ ನಿಬಂಧನೆ ಪ್ರಕಾರ ವಿಮಾ ಕಂತು ಪಾವತಿಸಿಲ್ಲದ ಕಾರಣ ಪ್ರಯೋಜನ ಪಡೆಯಲು ಅನರ್ಹವೆಂದು ತಿಳಿಸಿರುತ್ತಾರೆ.