ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಒಲಿದಿದೆ. ಅವರು ನೈಋತ್ಯ ಪದವೀಧರ ಕ್ಷೇತ್ರದಿಂದ ಚುನಾವಣಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಪದವೀಧರ ಕ್ಷೇತ್ರಕ್ಕೆ ಕಾಂಪಕ್ಷದ ಮುಖಂಡ, ಪದವೀಧರ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಎಸ್.ಪಿ. ದಿನೇಶ್ ಸಹ ಟಿಕೆಟ್ ಫೈಟ್ ನಲ್ಲಿದ್ದರು. ಆದರೆ, ಪಕ್ಷ ಆಯನೂರು ಅವರಿಗೆ ಮಣೆ ಹಾಸಿದೆ. ಈ ಮೂಲಕ ಕಾಂಗ್ರೆಸ್ ನಿಂದ ಆಯನೂರು ಸ್ಪರ್ಧೆ ಖಚಿತವಾಗಿದೆ. ಇನ್ನೂ ಬಿಜೆಪಿಯಿಂದ ಹಲವರ ಹೆಸರುಗಳು ಹರಿದಾಡುತ್ತಿದ್ದು ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ.
READ | ಹತ್ತು ತಿಂಗಳ ಬಳಿಕ ಬಿಜೆಪಿ ವೇದಿಕೆಯ ಕಾರ್ಯಕ್ರಮದಲ್ಲಿ ಕುಮಾರ ಬಂಗಾರಪ್ಪ ಪ್ರತ್ಯಕ್ಷ
- ನಾಲ್ಕೂ ಮನೆ ಪ್ರತಿನಿಧಿಸಿ ಗೆದ್ದವರು: ಆಯನೂರು ಮಂಜುನಾಥ್ ಅವರು ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ ನಾಲ್ಕೂ ಮನೆಗಳನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಪ್ರಖರ ವಾಗ್ಮಿ, ಅಘಾದ ರಾಜಕೀಯ ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಪದವೀಧರ ಕ್ಷೇತ್ರದಿಂದಲೇ ಗೆದ್ದು ವಿಧಾನ ಪರಿಷತ್ತನ್ನು ಪ್ರವೇಶಿಸಿದ್ದರು. ಹೀಗಾಗಿ, ಬಿಜೆಪಿಯಿಂದ ಯಾರಿಗೇ ಟಿಕೆಟ್ ನೀಡಿದರೂ ಚುನಾವಣಾಕಣ ರಂಗೇರುವುದು ಖಚಿತ.
- ಬಿಜೆಪಿಯಿಂದ ಹೊರಬಂದಿದ್ದರು: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರದ್ಧವೇ ತೊಡೆತಟ್ಟಿದ್ದರು. ರಾಜಕೀಯ ಅನುಭವ ಮತ್ತು ಪಕ್ಷದಲ್ಲಿ ಸಲ್ಲಿಸಿದ ಸೇವೆಯ ಆಧಾರದ ಮೇಲೆ ಶಿವಮೊಗ್ಗ ನಗರದ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಕೊನೆಯ ಗಳಿಗೆಯಲ್ಲಿ ಟಿಕೆಟ್ ಚನ್ನಬಸಪ್ಪ ಅವರ ಪಾಲಾಗಿದ್ದೇ ಆಯನೂರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಸೋಲುಣಬೇಕಾಯಿತು.
- ಯಡಿಯೂರಪ್ಪ ಅವರ ಗರಡಿಯಲ್ಲಿ ಬೆಳೆದವರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗರಡಿಯಲ್ಲಿ ಇವರು ಬೆಳೆದಿದ್ದಿದ್ದಾರೆ. ಹೀಗೆಂದು ಖುದ್ದು ಆಯನೂರು ಅವರೇ ಹಲವು ಸಲ ಹೇಳಿಕೊಂಡಿದ್ದೂ ಇದೆ. ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಇವರು ಹೊಂದಿದ್ದಾರೆ.