ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರಯಾಸ್ ಯೋಜನೆ ಅಡಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿವೃತ್ತಿ ದಿನವೇ ಭವಿಷ್ಯ ನಿಧಿ ಪಡೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಭವಿಷ್ಯ ನಿಧಿ ಸಹಾಯಕ ಆಯುಕ್ತ ಪಿ. ಶ್ರೀನಾಥ್ ಪದ್ಮನಾಭನ್ ಹೇಳಿದರು.
ಈ ಹಿಂದೆ ನೌಕರರು ನಿವೃತ್ತಿ ನಂತರ ಪಿಂಚಣಿಗೋಸ್ಜಕರ ಅರ್ಜಿ ಸಲ್ಲಿಸಬೇಕಿತ್ತು. ಹಣ ಕೈಸೇರಲು ಒಂದೆರಡು ತಿಂಗಳು ಕಾಯಬೇಕಿತ್ತು. ಆದರೆ, ಪ್ರಯಾಸ್ ಯೋಜನೆ ಅಡಿ ಮಾಸಿಕ ಕಂತನ್ನು ಒಂದು ತಿಂಗಳ ಮುಂಚಿತವಾಗಿ ಭವಿಷ್ಯ ನಿಧಿ ಸಂಸ್ಥೆಗೆ ಕಟ್ಟಿದ್ದಲ್ಲಿ ಅಂತಹ ಉದ್ಯೋಗಿಗಳು ಕಾರ್ಮಿಕ ಪಿಂಚಣಿಯ ಆದೇಶವನ್ನು ನಿವೃತ್ತಿಯ ದಿನವೇ ಪಡೆಯಬಹು ದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೇ.25ರಷ್ಟು ಜನರದ್ದು ಆಗಿಲ್ಲ ಆಧಾರ್ ಲಿಂಕ್: ಶೇ.25ರಷ್ಟು ಭವಿಷ್ಯ ನಿಧಿ ಸದಸ್ಯರು ಆಧಾರ್ ಕಾರ್ಡ್ ಅನ್ನು ಪಿಎಫ್ಗೆ ಲಿಂಕ್ ಮಾಡಿಲ್ಲ. ಇದರಿಂದ ಕೆಲವರಿಗೆ ನಿವೃತ್ತಿ ಸಮಯದಲ್ಲಿ ತೊಂದರೆಯಾಗಿದೆ. ಈಗ ಎಲ್ಲ ಅರ್ಜಿಗಳು ಡಿಜಿಟಲ್ ವ್ಯವಸ್ಥೆಯಾಗಿದ್ದು, ಪ್ರಾವಿಡೆಂಟ್ ಫಂಡ್ಗೆ ಒಂದೇ ಯುಎಐ (ಯೂನಿವರ್ಸಲ್ ಅಕೌಂಟ್ ನಂಬರ್) ಲಭ್ಯವಿದೆ. ಕೆಲಸ ಬೇರೆ ಬೇರೆ ಕಡೆ ಮಾಡಿದರೂ ನಿವೃತ್ತಿಯವರೆಗೆ ಒಂದೇ ಅಕೌಂಟ್ ನಂಬರ್ ಇರುವುದರಿಂದ ಆಧಾರ್ ಲಿಂಕ್ ಮಾಡಿದರೆ ಪಿಎಫ್ ಕಚೇರಿಗೆ ಬರುವ ಅಗತ್ಯ ಇಲ್ಲ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ 1.5 ಲಕ್ಷ ಪಿಎಫ್ ಸದಸ್ಯರು: ಶಿವಮೊಗ್ಗ ವಿಭಾಗದಲ್ಲಿ ಒಟ್ಟು 1.5 ಲಕ್ಷ ಭವಿಷ್ಯ ನಿಧಿ ಸದಸ್ಯರು ಇದ್ದಾರೆ. 1200 ಸಂಸ್ಥೆಗಳು ನೋಂದಣಿ ಆಗಿವೆ. 30,300 ನೌಕರರು ಭವಿಷ್ಯ ನಿಧಿ ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಆದರೆ ಪಿಂಚಣಿ ಪಡೆಯುವವರು ಪ್ರತಿ ವರ್ಷ ಕಡ್ಡಾಯವಾಗಿ ಜೀವನ ಪ್ರಮಾಣ ಪತ್ರ ಹಾಜರು ಪಡಿಸಬೇಕೆಂದು ಹೇಳಿದರು.