ಸುದ್ದಿ ಕಣಜ.ಕಾಂ
ಹೊಸನಗರ: ಗಾಂಜಾ ಗಿಡಗಳನ್ನು ಬೆಳದಿದ್ದ ವ್ಯಕ್ತಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಮುಸ್ತಾಫ ಹುಸೇನ್ ಸೈಯದ್ ಅಜೀಜ್ ಅವರು ಮೂರು ವರ್ಷ ಕಠಿಣ ಸಜೆ ಮತ್ತು 50,000 ದಂಡ ವಿಧಿಸಿ ಆದೇಶಿಸಿದ್ದಾರೆ.
ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ವರ್ಷ ಸಾದಾ ಸಜೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವಟೂರು ಗ್ರಾಮದ ಮಂಜುನಾಥ ಆಚಾರಿ(67) ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ.
ಗಾಂಜಾ ಗಿಡಗಳನ್ನು ಬೆಳೆದ ಬಗ್ಗೆ ಖಚಿತ ಮಾಹಿತಿಯ ಅನ್ವಯ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆ ಪಿಐ ಸಂಗನಾಥ್ ಅವರು ಸಿಬ್ಬಂದಿಯೊಡನೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪಿ.ಎಸ್.ಐ ರಾಹತ್ ಅಲಿ ಪ್ರಕರಣದ ತನಿಖೆ ಪೂರೈಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿ ಅವರು ಸಾಕ್ಷಿ ವಿಚಾರಣೆ ಮಾಡಿದ್ದು ನಂತರ ಸರ್ಕಾರಿ ಅಭಿಯೋಜಕಿ ಪಿ.ಒ.ಪುಷ್ಪ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯು ಪೂರ್ಣಗೊಂಡಿದ್ದು ಫೆಬ್ರವರಿ 11ರಂದು ಆರೋಪಿ ಮಂಜುನಾಥ್ ಆಚಾರಿ ಅವರಿಗೆ ತೀರ್ಪು ನೀಡಿ ಶಿಕ್ಷೆ ವಿಧಿಸಿದೆ.