ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ವಿಮಾನ ನಿಲ್ದಾಣ ಕಾಮಗಾರಿಗಳು ಭರದಿಂದ ಸಾಗಿದ್ದು ಮುಂದಿನ 8-10 ತಿಂಗಳ ಅವಧಿಯಲ್ಲಿ ವಿಮಾನ ಸಂಚಾರ ಕಾರ್ಯಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
https://www.suddikanaja.com/2021/02/15/shivamogga-ranebennur-railway-work-will-finish-in-2022-central-railway-minister-piyush-goyal-announced/
ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಈಗಾಗಲೇ ಶೇ.50 ರಷ್ಟು ಪೂರೈಸಿದ್ದು ಉಳಿದಂತೆ ಟರ್ಮಿನಲ್, ವಸತಿ ಗೃಹ ಮುಂತಾದ ಕಾಮಗಾರಿಗಳು ಶೀಘ್ರದಲ್ಲಿ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಹಗಲು ಮತ್ತು ರಾತ್ರಿ ಸಮಯದಲ್ಲಿಯೂ ವಿಮಾನಗಳ ಸಂಚಾರಕ್ಕೆ ಅನುಕೂಲವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸಣ್ಣ ಮತ್ತು ಭಾರಿ ಪ್ರಮಾಣದ ವಿಮಾನಗಳು ಕೂಡ ಸಂಚರಿಸುವಂತೆ ಅನುಕೂಲ ಒದಗಿಸಲಾಗಿದೆ ಎಂದರು.
ನೂತನ ಕೈಗಾರಿಕೆಗಳು, ರಕ್ಷಣಾ ಘಟಕಗಳು ಸೇರಿದಂತೆ ಅನೇಕ ವಾಣಿಜ್ಯ ಉದ್ದೇಶಗಳಿಗಾಗಿ ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ ಅಲ್ಲದೆ ನಿರೀಕ್ಷಿತ ಸಮಯದಲ್ಲಿ ವಿಮಾನ ಸಂಚಾರ ಕಾರ್ಯರಂಭಗೊಂಡು ಮಧ್ಯಕರ್ನಾಟಕದ ಕೇಂದ್ರವಾಗಿ ಶಿವಮೊಗ್ಗ ಗುರುತಿಸಿಕೊಳ್ಳಲಿದೆ. ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲು ಸರ್ಕಾರ ಅಗತ್ಯ ಅನುದಾನ ಒದಗಿಸಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಅನುದಾನದ ಕೊರತೆ ಇಲ್ಲ. ಇಲ್ಲಿನ ವಿದ್ಯುತ್ ಮಾರ್ಗದ ಬದಲಾವಣೆಗೆ 22 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು .
– ಬಿ.ವೈ.ರಾಘವೇಂದ್ರ, ಸಂಸದರು
ಅಡ್ಡಿಯಾಗಿದ್ದ ಎಲ್ಲ ಸಮಸ್ಯೆಗಳಿಗೆ ಪರಿಹಾರ | ವಿಮಾನ ನಿಲ್ದಾಣ ಕಾಮಗಾರಿಯ ಆರಂಭದಲ್ಲಿದ್ದ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ವಿಶೇಷವಾಗಿ ರೈತರ ಭೂಮಿ, ರೈತರ ಭೂಮಿಗೆ ನೀರು ಹರಿಯುವ ಕಾಲುವೆ ವ್ಯವಸ್ಥೆ, ಸಿದ್ದರ ಗುಡಿ ಮತ್ತು ಓತಿಘಟ್ಟ ಗ್ರಾಮಗಳ ಸಂಪರ್ಕಕ್ಕೆ ಪರ್ಯಾಯ ರಸ್ತೆ ಮಾರ್ಗ, ಭೂಮಾಲೀಕರಿಗೆ ನಿವೇಶನ ನೀಡುವಂತಹ ಅನೇಕ ಸಮಸ್ಯೆಗಳು ಇತ್ಯರ್ಥಗೊಂಡಿವೆ. ನಿವೇಶನಕ್ಕಾಗಿ ಆಯುರ್ವೇದ ವಿಶ್ವವಿದ್ಯಾಲಯದ 25 ಎಕರೆ ಭೂಮಿಯನ್ನು ವಶಕ್ಕೆ ಪಡೆದು ನಿವೇಶನಗಳನ್ನು ಸೃಜಿಸಿ ಹಸ್ತಾಂತರಿಸಲಾಗುವುದು.
2009 ರಲ್ಲಿ ಮಂಜೂರಾಗಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿ ಮತ್ತು ನಿರೀಕ್ಷೆಯಂತೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಮೇಯರ್ ಸುನೀತಾ ಅಣ್ಣಪ್ಪ, ಎಸ್.ದತ್ತಾತ್ರಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆ ದಾರರು ಉಪಸ್ಥಿತರಿದ್ದರು.
https://www.suddikanaja.com/2021/01/02/shivamogga-airport-work-will-compete-in-2021/