ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೇರು ಹುಳುಗಳು ಅಡಿಕೆ ಕೃಷಿ ಪರಿಸರದಲ್ಲಿನ ದೀರ್ಘಕಾಲಿಕ ಕೀಟಗಳಾಗಿದ್ದು, ರೈತರಿಗೆ ಇವುಗಳ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ನವುಲೆಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ನೀಡಿದ್ದಾರೆ.
https://www.suddikanaja.com/2020/12/21/health-insurance-to-memcos-members-shivamogga/
ಬೇರು ಹುಳುಗಳು ತೇವಾಂಶವಿರುವ ಮಣ್ಣಿನ ಪದರದಲ್ಲಿ ಗೋಡು ಮಣ್ಣಿನಿಂದ ಕೂಡಿದ ಹಳ್ಳದ ಪಕ್ಕದ ಮತ್ತು ಗದ್ದೆ ಜಮೀನಿನಲ್ಲಿ ಮಾಡಿದ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಹುಳುಗಳು ಭೂಮಿಯೊಳಗಿದ್ದು, ಅಡಿಕೆ ಬೇರುಗಳನ್ನು ಕತ್ತರಿಸಿ ತಿನ್ನುವುದರಿಂದ ಗಿಡಗಳು ರೋಗಗ್ರಸ್ಥವಾದಂತೆ ಕಂಡುಬರುತ್ತವೆ. ಬಾಧೆಗೀಡಾದ ಮರಗಳಲ್ಲಿ ಎಲೆಗಳು ಹಳದಿಯಾಗಿ ಗರಿ ಮತ್ತು ಗೆಣ್ಣುಗಳು ಗಿಡ್ಡವಾಗಿ ಕಾಂಡದ ತುದಿ ಮೊನಚಾಗುತ್ತದೆ. ಇಳುವರಿ ಕಡಿಮೆಯಾಗುತ್ತಾ ನಂತರದ ದಿನಗಳಲ್ಲಿ ಮರಗಳು ಸಾಯುತ್ತವೆ.
ಹತೋಟಿ ಕ್ರಮಗಳು
- ಮುಂಗಾರಿನಲ್ಲಿ ಒಂದೆರಡು ಹದ ಮಳೆ ಆದ ನಂತರ ಮುಸ್ಸಂಜೆಯಲ್ಲಿ ಭೂಮಿಯಿಂದ ಹೊರಬರುವ ದುಂಬಿಗಳನ್ನು ಹಿಡಿದು ನಾಶಪಡಿಸುವುದರಿಂದ ಸಂತತಿಯನ್ನು ಕಡಿಮೆ ಮಾಡಬಹುದು.
- ಆಗಸ್ಟ್ ಮೊದಲನೆ ವಾರದಲ್ಲಿ 2-3 ನೇ ಹಂತದ ಬೇರು ಹುಳುಗಳು ಹೆಚ್ಚಾಗಿರುವಾಗ ಕ್ಲೋರೋಪೈರಿಫಾಸ್ 20 ಇ.ಸಿಯನ್ನು ಎಕರೆಗೆ 2 ಲೀಟರ್ ನಂತೆ (200 ಲೀಟರ್ ನೀರಿಗೆ 400 ಮಿ.ಲಿ ಔಷಧಿ ಕರಗಿಸಿ) ಪ್ರತಿ ಮರಕ್ಕೆ 3-5 ಲೀ ಪ್ರಮಾಣದಲ್ಲಿ ಮರದ ಸುತ್ತ ಸುರಿಯಬೇಕು.
- ಸೆಪ್ಟೆಂಬರ್ ತಿಂಗಳಲ್ಲಿ ಸಾಧ್ಯವಿರುವ ಕಡೆ ಬಸಿಗಾಲುವೆಗಳಲ್ಲಿ 3-4 ದಿನ ಕಂಠ ಮಟ್ಟ ನೀರು ನಿಲ್ಲಿಸಿದರೆ ಹುಳುಗಳು ಭೂಮಿಯ ಮೇಲ್ಪದರಕ್ಕೆ ಬರುತ್ತದೆ. ಬಸಿಗಾಲುವೆಗಳ ಮಧ್ಯದ ಪಟದಲ್ಲಿ ಅಗೆತ ಮಾಡಿ ಹುಳುಗಳನ್ನು ಹೆಕ್ಕಿ ನಾಶಪಡಿಸಬೇಕು. ನಂತರ ಇದೇ ತಿಂಗಳ ಮೂರನೇ ವಾರದಲ್ಲಿ ಕ್ಲೋರೋಫೈರಿಪಾಸ್ 20 ಇ.ಸಿಯನ್ನು ಎಕರೆಗೆ 2 ಲೀ (200 ಲೀಟರ್ ನೀರಿಗೆ 400 ಮಿ.ಲಿ ಔಷಧಿ ಕರಗಿಸಿ) ದ್ರಾವಣ ಅಥಾವ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅನ್ನು ಎಕರೆಗೆ 700 ಮಿ.ಲೀ ಪ್ರಮಾಣದಲ್ಲಿ (200 ಲೀಟರ್ ನೀರಿಗೆ 200 ಮಿ.ಲಿ ಔಷಧಿ ಕರಗಿಸಿ) ಪ್ರತಿ ಮರಕ್ಕೆ 3-5 ಲೀಟರ್ ನಂತೆ ದ್ರಾವಣ ರೂಪದಲ್ಲಿ ಸೇರಿಸಬೇಕು.
- ಮೆಟಾರೈಜಿಯಂ ಅನಿಸೋಪ್ಲಿಯೆ ಅಥವಾ ಹೆಟರೋರಾಬ್ಟಿಸ್ 20 ಗ್ರಾಂ ಪುಡಿಯನ್ನು 1 ಲೀ ನೀರಿನಲ್ಲಿ ಬೆರೆಸಿ ಗಿಡದ ಬುಡ ಭಾಗಕ್ಕೆ ಹಾಕಬೇಕು ಹಾಗೆಯೇ ಮರವೊಂದಕ್ಕೆ 250 ಗ್ರಾಂ ಬೇವಿನ ಹಿಂಡಿ ಹಾಕಬೇಕು.
ಇದಲ್ಲದೆ ತೋಟಗಳಿಗೆ ಕಲ್ಲುಗೊಚ್ಚು ಮಣ್ಣನ್ನು ಲಭ್ಯ ಇರುವೆಡೆ ಹಾಕಬೇಕು. ಬೇರು ಹುಳುಗಳ ಸಂಪೂರ್ಣ ನಿಯಂತ್ರಣ ಕಷ್ಟ ಸಾಧ್ಯವಾದರೂ ಸಮಗ್ರ ಹತೋಟಿ ಕ್ರಮಗಳನ್ನು 3-4 ವರ್ಷ ನಿರಂತರವಾಗಿ ಅನುಸರಿಸಿದರೆ ಹಾನಿಯನ್ನು ಕಡಿಮೆ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2021/03/04/drdo-meeting-in-kuvempu-university/