ಸುದ್ದಿ ಕಣಜ.ಕಾಂ | KARNTAKA | ONION PRICE
ಶಿವಮೊಗ್ಗ/ದಾವಣಗೆರೆ: ಕೊರೊನಾ ಸಂದರ್ಭದಲ್ಲಿ ಈರುಳ್ಳಿ ಬೆಲೆಯು ಗ್ರಾಹಕರಲ್ಲಿ ಕಣ್ಣೀರು ಬರಿಸಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈರುಳ್ಳಿಗೆ ಕೊಳೆ ರೋಗ ತಗುಲಿದ್ದು, ಗುಣಮಟ್ಟ ಕುಸಿದಿದೆ.
ಇದರಿಂದಾಗಿ, ಸ್ಥಳೀಯ ಈರುಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿವೆ. ದಾವಣಗೆರೆ, ದೊಡ್ಡಬಳ್ಳಾಪುರ, ತುಮಕೂರು ಭಾಗದಲ್ಲಿ ಬೆಳೆಯಲಾದ ಈರುಳ್ಳಿಯು ಕ್ವಿಂಟಾಲಿಗೆ 800 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಕ್ವಿಂಟಾಲ್ ಈರುಳ್ಳಿಗೆ ಎಲ್ಲಿ ಎಷ್ಟು ಬೆಲೆ?
ಕೃಷಿ ಮಾರಾಟ ಮಂಡಳಿಯ ಮಾಹಿತಿ ಪ್ರಕಾರ, ಸೆಪ್ಟೆಂಬರ್ 18ರಂದು ಅರಸಿಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿಗೆ ಕನಿಷ್ಠ 564, ಗರಿಷ್ಠ 564 ರೂಪಾಯಿ ಬೆಲೆ ನಿಗದಿಯಾಗಿದೆ. ಬೆಂಗಳೂರಿನಲ್ಲಿ 700 ರೂ. (ಕನಿಷ್ಠ), 1000 ರೂ.(ಗರಿಷ್ಠ), ಬೆಳಗಾವಿ 1,400 (ಕನಿಷ್ಠ), 2,200 (ಗರಿಷ್ಠ), ದಾವಣಗೆರೆ 100 ರೂ. (ಕನಿಷ್ಠ), 900 ರೂ. (ಗರಿಷ್ಠ), 17ರಂದು ದಾಖಲಾದ ಬೆಲೆಯಂತೆ, ಹುಬ್ಬಳಿಯಲ್ಲಿ 200 (ಕನಿಷ್ಠ), 900 ರೂ. (ಗರಿಷ್ಠ), ಶಿವಮೊಗ್ಗದಲ್ಲಿ 1,600 ರೂ. (ಕನಿಷ್ಠ), 2,400 ರೂ. (ಗರಿಷ್ಠ) ಬೆಲೆ ದಾಖಲಾಗಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಈರುಳ್ಳಿ ಸರಾಸರಿ ಬೆಲೆಯು 2,030 ರೂ. ದಾಖಲಾಗಿದೆ. ಅತ್ಯಧಿಕ ದರ 2,600 ರೂ. ನಿಗದಿಯಾಗಿತ್ತು. ಪ್ರಸ್ತುತ ರಾಜ್ಯದ ಮಾರುಕಟ್ಟೆಯಲ್ಲಿ ತೆಲಗಿ, ಪೂನಾ, ಬಳ್ಳಾರಿ ಕೆಂಪು, ಸ್ಥಳೀಯ ಈರುಳ್ಳಿ ಲಭ್ಯವಿದೆ.
ಕೃಷಿಕರಿಂದ 1 ರೂ. ಕೊಟ್ಟರೂ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಮಾತ್ರ ಇಳಿಕೆಯಾಗಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 30 ರೂ.ವರೆಗೆ ಬೆಲೆ ಇದೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ರೈತರಿಗೆ ಈರುಳ್ಳಿ ಕಣ್ಣೀರು ಬರಿಸುತ್ತಿದೆ. ಅಕಾಲಿಕ ಮಳೆ, ಕೊಳೆ ರೋಗ ಇತ್ಯಾದಿಗಳಿಂದಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಈರುಳ್ಳಿ ಬೆಳೆಗಾರರು ಆಗ್ರಹಿಸಿದ್ದಾರೆ.
https://www.suddikanaja.com/2021/05/18/real-star-upendra-purchase-onion-from-farmer/