ಸುದ್ದಿ ಕಣಜ.ಕಾಂ | KARNATAKA | AGRICULTURE
ಶಿವಮೊಗ್ಗ: ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆ
ಮಾರುಕಟ್ಟೆ ವೃದ್ಧಿಸಲು ಪ್ರತಿ ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆಗಳನ್ನು ತೆರೆಯಲು ಯೋಜನೆ ತಯಾರಿಸಲಾಗುತ್ತಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.
ತಾಲ್ಲೂಕಿನ ಕಾಚಿನಕಟ್ಟೆ ಗ್ರಾಮದ ಮಂಜುನಾಥ ಎಂಬ ರೇಷ್ಮೆ ಬೆಳಗಾರರ ರೇಷ್ಮೆ ತಾಕಿಗೆ ಭೇಟಿ ನೀಡಿ ಪರಿಶೀಲಿಸಿ, ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು.
READ | ರೇಷ್ಮೆ ಬೆಳೆಗಾರರಿಗೆ ಶೀಘ್ರವೇ ಸಿಗಲಿದೆ ವಿಐಪಿ ಪಾಸ್, ಏನಿದರ ಪ್ರಯೋಜನ?
ನಮ್ಮ ರಾಜ್ಯದ ರೇಷ್ಮೆ ಅತ್ಯಂತ ನೈಜವಾದ ಕಾರಣ ಜಗತ್ ಪ್ರಸಿದ್ಧವಾಗಿದೆ. ಇದಕ್ಕೆ ಸರಿಸಾಟಿ ಮತ್ತೊಂದಿಲ್ಲ. ಮುಂದೆ ₹10 ಲಕ್ಷಕ್ಕೆ ಒಂದು ಸೀರೆ ಮಾರಾಟ ಮಾಡುವ ಯೋಚನೆ ಕೂಡ ಇದೆ ಎಂದರು.
ಶೀಘ್ರವೇ ಸಹಾಯವಾಣಿ
ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಸಹಕರಿಸಲು ಶೀಘ್ರದಲ್ಲೇ ಸಹಾಯವಾಣಿ ತೆರೆಯಲಾಗುವುದು. ಯಾವುದೇ ಕಾರಣಕ್ಕೂ ಮಾರುಕಟ್ಟೆ ಸೊರಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
509 ಎಕರೆಯಲ್ಲಿ ಹಿಪ್ಪುನೇರಳೆ
ಇಲಾಖೆ ಜಂಟಿ ನಿರ್ದೇಶಕ ಭೈರಪ್ಪ ಮಾತನಾಡಿ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ ಮತ್ತು ಸೊರಬದ ಒಟ್ಟು 509 ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 321 ರೇಷ್ಮೆ ಬೆಳೆಗಾರರು ಇದ್ದಾರೆ ಎಂದರು.
86 ರೇಷ್ಮೆ ಗ್ರಾಮಗಳು ಇದ್ದು 1.168 ಚಾಕಿಯಾದ ಮೊಟ್ಟೆಗಳು ಇವೆ.ಪ್ರಸಕ್ತ ಸಾಲಿನಲ್ಲಿ 87.3 ಟನ್ ರೇಷ್ಮೆ ಗೂಡು ಉತ್ಪಾದನೆಯಾಗಿದ್ದು ರೂ.42.5 ಲಕ್ಷ ಸಹಾಯಧನವನ್ನು 279 ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಚಿನಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶ್ವೇತಾ ಮಹೇಶ್, ರೈತರಾದ ದಾಸಪ್ಪ, ನಾಗೇಶ್, ರೇಷ್ಮೆ ಉಪ ನಿರ್ದೇಶಕ ಮುರಳೀಧರ್, ವಿಜ್ಞಾನಿಗಳಾದ ತಿಮ್ಮಾರೆಡ್ಡಿ, ಡಾ.ರಾಧಾಕೃಷ್ಣ ಉಪಸ್ಥಿತರಿದ್ದರು.
https://www.suddikanaja.com/2021/01/28/areca-nut-added-in-drugs-category-blunder-by-krishi-marata-vahini/