ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಮೋಸ ಮಾಡಿದ ಇಬ್ಬರು ಆರೋಪಿಗಳನ್ನು ಆನವಟ್ಟಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆನವಟ್ಟಿಯ ತಿಮ್ಲಾಪುರ ಗ್ರಾಮದ ಕೆ.ರಾಮಪ್ಪ(44), ಶಿಕಾರಿಪುರ ಬನ್ನೂರು ಗ್ರಾಮದ ತಿಮ್ಮಪ್ಪ(65) ಬಂಧಿತರು. ಇವರಿಂದ 4.22 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ವಾಸಿಯೊಬ್ಬರಿಗೆ ದೂರವಾಣಿ ಮುಖಾಂತರ ತಮ್ಮನ್ನು ರಘು ಮತ್ತು ಕೃಷ್ಣಪ್ಪ ಎಂದು ಪರಿಚಯ ಮಾಡಿಕೊಂಡಿದ್ದಾರೆ. ತಮ್ಮ ಗ್ರಾಮದ ಪರಿಚಯಸ್ಥರೊಬ್ಬರು ಮನೆಯ ಪಾಯವನ್ನು ತೆಗೆಯುವ ಸಮಯದಲ್ಲಿ ಬಂಗಾರದ ನಾಣ್ಯಗಳು ದೊರೆತಿದ್ದು, ಅವರಿಗೆ ತುರ್ತು ಹಣದ ಅವಶ್ಯಕತೆ ಇರುವುದರಿಂದ ಕಡಿಮೆ ಬೆಲೆಗೆ ಆ ಬಂಗಾರದ ನಾಣ್ಯಗಳನ್ನು ಕೊಡಿಸುತ್ತೇನೆಂದು ನಂಬಿಸಿದ್ದಾರೆ.
ಜನವರಿ 4ರಂದು ಆನವಟ್ಟಿ ಬಸ್ ನಿಲ್ದಾಣ ಹತ್ತಿರ ಬರುವಂತೆ ಸೂಚಿಸಿ ಬಂಗಾರದ ನಾಣ್ಯಗಳೆಂದು ಹೇಳಿ ನೀಡಿ 5 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ನಂತರ ಸದರಿ ನಾಣ್ಯಗಳನ್ನು ಪರೀಕ್ಷೆ ಮಾಡಿಸಿದಾಗ ಅವರು ನಮಗೆ ನಕಲಿ ನಾಣ್ಯಗಳನ್ನು ನೀಡಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
https://www.suddikanaja.com/2021/11/16/fraud-by-a-person-and-gave-fake-gold-coins/