ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಕೊಲೆ ಪ್ರಕರಣ ಸಂಬಂಧ ಗಾಜನೂರು ಮೂಲದ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು 20,000 ರೂಪಾಯಿ ದಂಡ, ದಂಡವನ್ನು ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳುಗಳ ಸಾದಾ ಕಾರವಾಸ ಶಿಕ್ಷೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಗಾಜನೂರಿನ ದುರ್ಗ ಅಲಿಯಾಸ್ ದುರ್ಗಪ್ಪ(29), ಉಮೇಶ್ (30), ಸುರೇಂದ್ರ ಅಲಿಯಾಸ್ ಸುರೇಶ್ ಅಲಿಯಾಸ್ ಸೂರಿ(30), ಶಂಕರ್ ಅಲಿಯಾಸ್ ಶಿವಶಂಕರ್ (24) ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ.
2013ರಲ್ಲಿ ನಡೆದಿತ್ತು ಕೊಲೆ
ಗಾಜನೂರಿನ ಇಂದಿರಾನಗರದ ರಾಘವೇಂದ್ರ(28) ಹಾಗೂ ಗಾಜನೂರಿನ ದುರ್ಗಪ್ಪ ಅವರು ಸ್ನೇಹಿತರಾಗಿದ್ದು. ಇಬ್ಬರಿಗೂ ಹಣಕಾಸಿನ ವಿಚಾರವಾಗಿ ವೈಯಕ್ತಿಕ ದ್ವೇಷವಿದ್ದು, ಈ ಹಿನ್ನೆಲೆಯಲ್ಲಿ 2013ರ ಮೇ 29ರಂದು ರಾತ್ರಿ ರಾಘವೇಂದ್ರ ಗಾಜಾನೂರಿನ ಇಂದಿರಾನಗರ ಚಾನಲ್ ಏರಿಯ ಮೇಲೆ ನಡೆದುಕೊಂಡು ಬರುತ್ತಿರುವಾಗ ಕೊಲೆ ಮಾಡಬೇಕೆಂಬ ಉದ್ದೇಶದಿಂದ ದುರ್ಗಪ್ಪನು ತನ್ನೊಂದಿಗೆ ಗಾಜನೂರಿನ ಇಂದಿರಾನಗರದ ವಾಸಿಗಳಾದ ಉಮೇಶ್, ಸುರೇಂದ್ರ, ಶಿವಶಂಕರ್, ಲೋಕೆಶಪ್ಪ ಜೊತೆಯಲ್ಲಿ ಕರೆದುಕೊಂಡು ಬಂದು ಅಡ್ಡಗಟ್ಟಿ, ಎಡಕುತ್ತಿಗೆಗೆ, ಕಿವಿಯ ಕೆಳಭಾಗಕ್ಕೆ ಮತ್ತು ಎರಡು ಕಾಲುಗಳಿಗೆ ಹರಿತವಾದ ಆಯುಧಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದ. ಪರಿಣಾಮ ರಾಘವೇಂದ್ರನು ಮೃತಪಟ್ಟಿದ್ದರು.
ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಗುನ್ನೆ ಪ್ರಕರಣ ದಾಖಲಿಸಿಕೊಂಡು ಆಗಿನ ಶಿವಮೊಗ್ಗ ಡಿವೈಎಸ್ಪಿ ರಾಮನಾಯ್ಕ್ 2013ರ ಜೂನ್ 28ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಶಿವಪ್ರಸಾದ್ ಗುರುವಾರ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪುಷ್ಪ ವಾದ ಮಂಡಿಸಿದ್ದರು.