ಸುದ್ದಿ ಕಣಜ.ಕಾಂ | KARNATAKA | PROTEST
ಶಿವಮೊಗ್ಗ: ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಶಾಸನಬದ್ಧವಾಗಿ ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೂಡಲೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಏಪ್ರಿಲ್ 21ರಂದು ಮಧ್ಯಾಹ್ನ 12 ಗಂಟೆಗೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಎಚ್.ಆರ್.ಬಸವರಾಜಪ್ಪ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತರ ರಾಜಕೀಯ ತೀರ್ಮಾನ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು, ಮಹಿಳೆಯರು ಆಗಮಿಸಬೇಕು ಎಂದು ಮನವಿ ಮಾಡಿದರು.
READ | ಶಿವಮೊಗ್ಗದಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ಏರಿಕೆ, ಇಂದಿನ ದರವೆಷ್ಟು?
ಕರ್ನಾಟಕ ಸರ್ಕಾರ ವಾಪಸ್ ಪಡೆಯುವಲ್ಲಿ ವಿಳಂಬ ತಂತ್ರಗಳನ್ನು ನಡೆಸುತ್ತಿದೆ. ಇದನ್ನು ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ಬೆಂಗಳೂರು ವಿಧಾನಸಭೆ ಅಧಿವೇಶನದಲ್ಲಿ ವಾಪಾಸ್ ಪಡೆಯುವ ಮಾತುಗಳನ್ನಾಡಿದ್ದರು. ಆದರೆ ಇಲ್ಲಿಯವರೆಗೂ ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ. ಯಾವುದೇ ಚರ್ಚೆ ನಿರ್ಧಾರಗಳನ್ನು ಸಹ ಮಾಡಿಲ್ಲ. ಕರ್ನಾಟಕದ ಬಿಜೆಪಿ ಸರ್ಕಾರ ರೈತ ವಿರೋಧಿ ಧೋರಣೆ ಮುಂದುವರೆಸುತ್ತಿದೆ ಎಂದು ಆರೋಪಿಸಿದರು.
ರಾಗಿ, ಭತ್ತ, ತೊಗರಿ, ಗೋಧಿ, ಜೋಳ ಖರೀದಿ ಕೇಂದ್ರಗಳನ್ನು ಮುಚ್ಚಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ. ಹಾಗಾಗಿ ರೈತರು ಬೆಳೆದ ಫಸಲನ್ನು ಮಾರಾಟ ಮಾಡಲಾಗದೆ ಅರ್ಧ ಬೆಲೆಗೆ ಮಾರುತ್ತಿದ್ದಾರೆ. ಈ ಹಿಂದೆ ರೈತರಿಗೆ ರಾಷ್ಟ್ರೀಯ ವಿಪತ್ತಿನ ಕೆಳಗಡೆ ಕೊಡಬೇಕಾದ ನಷ್ಟದ ಹಣವನ್ನು ರೈತರಿಗೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಗರ್ ಹುಕುಂ ಸಾಗುವಾಳಿದಾರರಿಗೆ ಸರ್ಕಾರ ಹಕ್ಕುಪತ್ರ ನೀಡಿಲ್ಲ. ಮಲೆನಾಡಿನ ಭಾಗಗಳಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿ ಆನೆಗಳು, ಕಾಡು ಪ್ರಾಣಿಗಳು ಹಳ್ಳಿಗಳಲ್ಲಿ ವಾಸ ಮಾಡಲು ಪ್ರಾರಂಭಿಸಿವೆ.
ಇದೇ ಸಂದರ್ಭದಲ್ಲಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್, ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿಗಳ ಬೆಲೆಯನ್ನು ದಿನೇ ದಿನೆ ಏರಿಸುತ್ತಿದೆ. ಈ ಕಾರಣದಿಂದ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದೆ. ಹೋಟೆಲ್ ಮಾಲೀಕರು ಸಹ ಬೆಲೆ ಏರಿಕೆ ಮಾಡಿದ್ದಾರೆ. ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ತಿಳಿಸಿದರು.
READ | ಹೊಟ್ಟೆಗೆ ತಿವಿದ ಕಾಡುಕೋಣ, ರೈತನಿಗೆ ಗಂಭೀರ ಗಾಯ, ಇದನ್ನು ಕಂಡು ಪ್ರಜ್ಞೆ ತಪ್ಪಿದ ಪತ್ನಿ
ಗೋದಾವರಿ-ಪೆನ್ನಾರ್ ಯೋಜನೆಯಿಂದ ಕರ್ನಾಟಕಕ್ಕೆ ಲಾಭವಿಲ್ಲ
ಕೇಂದ್ರ ಸರ್ಕಾರವು ಬಜೆಟ್ನಲ್ಲಿ ಘೋಷಿಸಿರುವಂತೆ ಗೋದಾವರಿ ಪೆನ್ನಾರ್ ನೀರಾವರಿ ಯೋಜನೆಯಿಂದ ಅಕ್ಕಪಕ್ಕದ ರಾಜ್ಯಗಳಿಗೆ ಲಾಭವಾಗುತ್ತದೆಯೇ ಹೊರತು ಕರ್ನಾಟಕಕ್ಕಲ್ಲ. ರಾಜ್ಯ ಸರ್ಕಾರ ಈ ನಿರ್ಧಾರಗಳಿಗೆ ನಾಡಿನ ರೈತರೊಂದಿಗೆ ಚರ್ಚಿಸದೆ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಗ್ರಾಮೀಣ ಭಾರತಕ್ಕೆ ಕೊಡಬೇಕಾದ ಆದ್ಯತೆ ಕಡಿತಗೊಳಿಸಿದೆ. ಗ್ರಾಮೀಣ ಕೈಗಾರಿಕೆಗೆ ಆದ್ಯತೆ ನೀಡಿಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಹಳ್ಳಿಗರ ಆರ್ಥಿಕ ಚೇತರಿಕೆಗೆ ಪೂರಕವಾದ ಬಜೆಟ್ ಆಗಲಿಲ್ಲ ಮತ್ತು ರಾಜ್ಯದಲ್ಲಿ ಹೈನುಗಾರಿಕೆ ಉತ್ತಮವಾಗಿದ್ದು ಉತ್ತಮ ಸಾಧನೆಗೆ ಕಾರಣರಾದ ರೈತರನ್ನು ಕಡೆಗಣಿಸಿದ್ದು ಖಂಡನೀಯ. ಹಾಲಿನ ದರ ಹೆಚ್ಚು ಮಾಡಲು ಸಾಧ್ಯವಾಗಿಲ್ಲ ಆದರೆ ನಷ್ಟವುಂಟು ಮಾಡಿ ಕೆಲ ಡೈರಿಗಳಲ್ಲಿ ದರದಲ್ಲಿ 5ರೂ. ಕಡಿತಗೊಳಿಸಲಾಗಿದೆ ಎಂದು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರು ಉಪಸ್ಥಿತರಿದ್ದರು.