ಸುದ್ದಿ ಕಣಜ.ಕಾಂ | KARNATAKA | RAITA SANGHA
ಶಿವಮೊಗ್ಗ: ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ (kodihalli chandrashekhar) ಅವರನ್ನು ವಜಾಗೊಳಿಸಿದ್ದು, ಆ ಸ್ಥಾನಕ್ಕೆ ಎಚ್.ಆರ್.ಬಸವರಾಜಪ್ಪ (HR Basavarajappa) ಅವರನ್ನು ಆಯ್ಕೆ ಮಾಡಲಾಗಿದೆ.
READ | ಎಸಿಬಿ ಬಲೆಗೆ ಬಿದ್ದ ಮಹಾನಗರ ಪಾಲಿಕೆ ಕಂಪ್ಯೂಟರ್ ಆಪರೇಟರ್
ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಬಸವರಾಜಪ್ಪ ಪ್ರಕಟಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹೊರಗಿಟ್ಟು ಸಂಘಟನೆ ಬಲಪಡಿಸಲಾಗಿವುದು. ರೈತ ಸಂಘದ ಪದಾಧಿಕಾರಿ ಭ್ರಷ್ಟಾಚಾರದ ವಿಚಾರ ಖಾಸಗಿ ಸುದ್ದಿವಾಹಿನಿಯೊಂದರ ಸ್ಟಿಂಗ್ ಆಪರೇಷನ್ ನಿಂದ ಬೆಳಕಿಗೆ ಬಂದಿದೆ.
ಇದೇ ಮೊದಲ ಬಾರಿಗೆ ರೈತಸಂಘದ ಅಧ್ಯಕ್ಷರೊಬ್ಬರನ್ನು ವಜಾ ಮಾಡಲಾಗಿದೆ. ಸತ್ಯಶೋಧನಾ ಸಮಿತಿ ತನಿಖೆ ನಂತರ ಆರೋಪ ಸಾಬೀತಾದರೆ ಸಂಘಟನೆಯಿಂದಲೇ ಅವರನ್ನು ಉಚ್ಛಾಟನೆ ಮಾಡಲಾಗುವುದು.
ಎಚ್.ಆರ್.ಬಸವರಾಜಪ್ಪ, ನೂತನ ಅಧ್ಯಕ್ಷರು, ರಾಜ್ಯ ರೈತ ಸಂಘ
ಸತ್ಯಶೋಧನಾ ಸಮಿತಿ ರಚನೆ
ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯ ಶೋಧನಾ ಸಮಿತಿ ರಚನೆ ಮಾಡಲಾಗಿದೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿ ರೈತ ಸಂಘಟನೆ ಬೆಳೆಸಲಾಗುವುದು. ಮೂಲ ಸ್ಥಾಪಕರಾದ ಎಚ್.ಎಸ್. ರುದ್ರಪ್ಪ, ಡಾ. ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ಪ್ರೊ.ನಂಜುಂಡಸ್ವಾಮಿ ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ಈ ಹಿಂದಿನಂತೆಯೇ ಸಂಘಟನೆ ನಡೆಯಲಿದೆ. ಇನ್ನು ಮುಂದೆ ನಮ್ಮ ಯಾವುದೇ ಬ್ಯಾನರ್ ಗಳಲ್ಲಿ ಅಧ್ಯಕ್ಷರ ಫೋಟೋ ಇರುವುದಿಲ್ಲ. ಸಂಘಟನೆ ಸ್ಥಾಪಿಸಿದ ಹಿರಿಯರ ಫೋಟೋ ಮಾತ್ರ ಬಳಸುತ್ತೇವೆ ಎಂದರು.
ಮುಖಂಡರಾದ ಡಾ. ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಶಶಿಕಾಂತ್ ಪಡಸಲಗಿ, ಸಿದ್ಧವೀರಪ್ಪ, ಕುರುವ ಗಣೇಶ್, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ಧವೀರಪ್ಪ, ಸುಭಾಷ್, ಬಸವನಗೌಡ ಪಾಟೀಲ್, ದುಗ್ಗಪ್ಪಗೌಡ ಉಪಸ್ಥಿತರಿದ್ದರು.
https://suddikanaja.com/2021/09/11/kodihalli-swamiji-predictions-about-two-years/