ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸುಸ್ಥಿತಿಯಲ್ಲಿದ್ದ ಅಡಿಕೆ ಬೆಲೆಯು ಭೂತಾನ್ ಅಡಿಕೆ ಆಮದು ಬಳಿಕ ಕ್ವಿಂಟಾಲಿಗೆ 15-20 ಸಾವಿರ ರೂ. ಇಳಿಕೆಯಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಎಂದು ಮಲೆನಾಡು ಪ್ರದೇಶ ಸಂತ್ರಸ್ತರ ಕೆಪಿಸಿಸಿ ಅಧ್ಯಯನ ಸಮಿತಿ ಸಂಚಾಲಕ ರಮೇಶ್ ಹೆಗ್ಡೆ ಆರೋಪಿಸಿದರು.
READ | ಶಿವಮೊಗ್ಗದಲ್ಲಿ ಮ್ಯಾಂದೊಸ್ ಎಫೆಕ್ಟ್, ನಿರಂತರ ಮಳೆ, ಎಲ್ಲಿ ಎಷ್ಟು ಮಳೆಯಾಗಿದೆ?
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅಡಿಕೆ ಬೆಳೆಗಾರರ ಹಿತ ಕಾಪಾಡುವ ಭರವಸೆ ನೀಡಿದ್ದರು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅವರ ಹಿತವನ್ನು ಬಲಿಕೊಡುವ ಕೆಲಸ ನಡೆದಿದೆ ಎಂದು ಟೀಕಿಸಿದರು.
ಪ್ರತಿ ಕ್ವಿಂಟಾಲಿಗೆ 59 ಸಾವಿರ ರೂ. ಇದ್ದ ಬೆಲೆಯು ಈಗ 39 ಸಾವಿರಕ್ಕೆ ತಲುಪಿದೆ. ಭೂತಾನ್’ನಿಂದ ಆಮದು ಸುಂಕ ವಿಧಿಸದೇ ಅಡಿಕೆಯನ್ನು ಆಮದು ಕೊಳ್ಳಲಾಗಿದೆ. ಆಗ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳೀಯ ಅಡಿಕೆ ಬೆಳೆಗಾರರ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದರು. ಹೀಗಾಗಿ, ಇದರ ನೈತಿಕ ಹೊಣೆಯನ್ನು ಆಗರ ಅವರೇ ಹೊರಬೇಕು ಎಂದು ಆಗ್ರಹಿಸಿದರು.
ತ್ರಿ ಸ್ಟಾರ್ ಆರಗ ಕೂಡಲೇ ರಾಜೀನಾಮೆ ನೀಡಲಿ
ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯವರೇ ಆದ ಆರಗ ಅವರು ಗೃಹ ಸಚಿವ, ಅಡಿಕೆ ಕಾರ್ಯಪಡೆ ಮತ್ತು ಬಿಜೆಪಿಯಲ್ಲಿ ಅಡಿಕೆ ಪ್ರಕೋಷ್ಠದ ಅಧ್ಯಕ್ಷರೂ ಆಗಿದ್ದಾರೆ. ತ್ರಿ ಸ್ಟಾರ್ ಹೊಂದಿದ್ದರೂ ಅದರಿಂದ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಲೆನಾಡಿನ ರೈತರು ಎಲೆಚುಕ್ಕೆ ರೋಗದಿಂದಾಗಿ ಕಂಗಾಲಾಗಿದ್ದಾರೆ. ಮಳೆ ಸುರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ. ಇಂತಹ ಸ್ಥಿತಿಯಲ್ಲೂ ತೋಟಗಾರಿಕೆ ಸಚಿವ ಮುನಿರತ್ನ ಅವರು ಭೇಟಿ ನೀಡಿ ರೈತರಿಗೆ ಸಾಂತ್ವನ ನೀಡಿಲ್ಲ. ಹೀಗಾಗಿ, ಇವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
READ | ತಾಳಗುಪ್ಪ- ಮೈಸೂರು ರೈಲಿಗೆ ಸಿಲುಕಿದ ಪ್ರಯಾಣಿಕ, ಸಿಸಿಟಿವಿಯಲ್ಲಿ ಮೈಜುಮ್ಮೆನ್ನುವ ದೃಶ್ಯ ಸೆರೆ
ರಮೇಶ್ ಹೆಗ್ಡೆ ಪ್ರಶ್ನೆ
- ಅಮಿತ್ ಶಾ ಅವರು 500 ಕೋಟಿ ರೂ. ವೆಚ್ಚದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾನ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ, ಆಶ್ವಾಸನೆ ಇದುವರೆಗೆ ಈಡೇರಿಲ್ಲ. ರಾಜ್ಯದ ಅಡಿಕೆ ಬೆಳೆಯುವ ಪ್ರದೇಶಗಳನ್ನು ಪ್ರತಿನಿಧಿಸುವ ಸಂಸದರಿಗೆ ತಾಕತ್ತು ಇದ್ದರೇ ಅಮಿತ್ ಶಾ ಅವರ ಮನವೊಲೈಸಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲಿ.
- ಅಡಿಕೆ ಟಾಸ್ಕ್ ಫೋರ್ಸ್’ಗೆ 10 ಕೋಟಿ ರೂ. ಅನುದಾನ ನೀಡಲಾಗಿತ್ತು. ಆ ಅನುದಾನ ಏನಾಯ್ತು? ಎಲ್ಲಿ ಖರ್ಚು ಮಾಡಿದ್ದೀರಿ? ಎಲೆ ಚುಕ್ಕೆ ರೋಗಕ್ಕೆ ಕೈಗೊಂಡ ಕ್ರಮಗಳೇನು?
- ಅಡಿಕೆ ಕ್ಯಾನ್ಸರ್’ಕಾರಕ ಅಲ್ಲ ಎಂಬುವುದನ್ನು ಸಾಬೀತುಪಡಿಸುವುದಕ್ಕಾಗಿ ಕೇಂದ್ರ ಸರ್ಕಾರ ಏಕೆ ಇದುವರೆಗೆ ಅಫಿಡೇವಿಟ್ ಸಲ್ಲಿಸಿಲ್ಲ?
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ಪ್ರಮುಖರಾದ ದೀಪಕ್ ಸಿಂಗ್, ವಿಜಯಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
https://suddikanaja.com/2022/12/09/today-arecanut-rate-in-karnataka-156/