ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲಿದೆ.
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಜನವರಿ 7, 8 ಮತ್ತು 9ರಂದು ನಗರದ ಡಿ.ವಿ.ಎಸ್. ಕಾಲೇಜಿನಲ್ಲಿ ಹಾಗೂ ಉದ್ಘಾಟನಾ ಕಾರ್ಯಕ್ರಮ ಜ. 7ರಂದು ಬೆಳಗ್ಗೆ 10.30 ಗಂಟೆಗೆ ಕುವೆಂಪು ಮಂದಿರದಲ್ಲಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
ಮಾಧ್ಯಮಗೋಷ್ಠಿಯನ್ನುದ್ದೇಶಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲಾದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಸ್ಥಾನ ಪಡೆದ 1,375ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ರೀತಿಯ 23 ವೈಯಕ್ತಿಕ ವಿಭಾಗಗಳಲ್ಲಿ ಹಾಗೂ 3 ಸಾಮೂಹಿಕ ವಿಭಾಗದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜನವರಿ 7ರಂದು ಬೆಳಗ್ಗೆ 10.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸಿ.ನಾರಾಯಣಗೌಡ ಅವರು ಉದ್ಘಾಟಿಸುವರು. ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರುವರು. ಶಾಸಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ.
– ಡಾ.ಆರ್.ಸೆಲ್ವಮಣಿ, ಡಿಸಿ
ವಿಜೇತರಿಗೆಷ್ಟು ಬಹುಮಾನ?
ವೈಯಕ್ತಿಕ ವಿಭಾಗ- ಪ್ರಥಮ ಸ್ಥಾನಕ್ಕೆ ₹6,000, ದ್ವಿತೀಯ ಸ್ಥಾನ ₹4,000 ಹಾಗೂ ತೃತೀಯ ಸ್ಥಾನ ₹2,000 ಹಾಗೂ 5 ಜನಕ್ಕೆ ತಲಾ ₹1,000 ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಸಾಮೂಹಿಕ ವಿಭಾಗ- ಪ್ರಥಮ ಸ್ಥಾನ ₹3,000, ದ್ವಿತೀಯ ಸ್ಥಾನ ₹2,000, ತೃತೀಯ ಸ್ಥಾನ ₹1,000 ಅಲ್ಲದೇ 2 ತಂಡಕ್ಕೆ ಪ್ರತಿ ಸ್ಪರ್ಧಿಗೆ ₹500 ಗಳ ಪ್ರೋತ್ಸಾಹಧನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
- ಪ್ರತಿ ಸ್ಪರ್ಧೆಗೆ ಮೂರು ಜನ ತಜ್ಞರನ್ನೊಳಗೊಂಡ ತೀರ್ಪುಗಾರರನ್ನು ನಿಯೋಜಿಸಲಾಗುವುದು. ಅವರಲ್ಲಿ 2 ಹೊರ ಜಿಲ್ಲೆಯ ಹಾಗೂ ಓರ್ವರು ಸ್ಥಳೀಯ ತೀರ್ಪುಗಾರರು ಇರಲಿದ್ದಾರೆ.
- ನಿರ್ವಹಣೆಗಾಗಿ ವಿವಿಧ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಅದರ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ.
- ರಾಜ್ಯದ ಬೇರೆ- ಬೇರೆ ಜಿಲ್ಲೆಗಳಿಂದ ಆಗಮಿಸುವ ಸ್ಪರ್ಧಾಳುಗಳಿಗೆ, ತೀರ್ಪುಗಾರರಿಗೆ ಮತ್ತು ಮೇಲ್ವಿಚಾರಕರಿಗೆ 21 ಸಮುದಾಯ ಭವನ ಹಾಗೂ ಶಾಲೆಗಳನ್ನು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ.
- ವಿದ್ಯಾರ್ಥಿಗಳು ತಂಗುವ ಸ್ಥಳದಿಂದ ಸ್ಪರ್ಧೆ ನಡೆಯುವ ಸ್ಥಳಕ್ಕೆ ಆಗಮಿಸಲು ಹಾಗೂ ತೆರಳಲು 27 ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು.
- ಪ್ರತಿದಿನ ಸಂಜೆ ಆಗಮಿಸುವ ಮಕ್ಕಳು, ಮೇಲ್ವಿಚಾರಕರು ಹಾಗೂ ಸಾರ್ವಜನಿಕರಿಗಾಗಿ ಆಹ್ವಾನಿತ ಕಲಾವಿದರುಗಳಿಂದ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 7ರಂದು ಸಂಜೆ 6.30ಕ್ಕೆ ಮ್ಯಾಜಿಕ್ ವಿಸ್ಮಯ ಕಾರ್ಯಕ್ರಮ ನಡೆಯಲಿದೆ
- ನೋಂದಣಿಗಾಗಿ 8 ಕೌಂಟರ್ಗಳ ವ್ಯವಸ್ಥೆ. ಅಗತ್ಯ ಮಾಹಿತಿ ಒದಗಿಸಲು 5 ಜಿಲ್ಲೆಗಳಿಗೆ ಒಬ್ಬರಂತೆ ಸಂಪರ್ಕಾಧಿಕಾರಿಗಳ ನಿಯೋಜನೆ.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಎಂ.ಡಿ.ಪ್ರಕಾಶ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಲೋಕೇಶ್ವರಪ್ಪ, ರಾಮಪ್ಪಗೌಡ ಹಲವರಿದ್ದರು.
https://suddikanaja.com/2023/01/05/home-minister-araga-jnanendra-help/