ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿಲಿ ದೇಶ(chile country)ದಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡ ಮಾದರಿಯ ಘಟನೆಗಳು ಪಶ್ಚಿಮಘಟ್ಟದ ಸಾಲುಗಳಲ್ಲೂ ಕಳೆದ ಎರಡು ವರ್ಷಗಳಿಂದ ಅಲ್ಲಲ್ಲಿ ಆರಂಭವಾಗಿವೆ. ಹೀಗಾಗಿ, ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಪರಿಸರವಾದಿ, ಪ್ರಜಾವಾಣಿ ಪತ್ರಿಕೆಯ ಅಂಕಣಕಾರ ನಾಗೇಶ್ ಹೆಗಡೆ ಎಚ್ಚರಿಕೆ ನೀಡಿದರು.
ಕಮಲಾ ನೆಹರೂ ಕಾಲೇಜಿನಲ್ಲಿ ಬಹುಮುಖಿಯಿಂದ ‘ಜಾಗತಿಕ ತಾಪಮಾನ’ ಕುರಿತು ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತಿಕ ತಾಪಮಾನದಲ್ಲಿ ಏರಿಕೆಯಾಗಿರುವುದರಿಂದ ಕಾಡುಗಳಲ್ಲಿ ಶಾಖ ಹೆಚ್ಚಿ ಮರಗಳಲ್ಲಿ ತಾನಾಗೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಪಶ್ಚಿಮಘಟ್ಟದಲ್ಲಿ ಎರಡು ವರ್ಷಗಳ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ, ಎಲ್ಲರೂ ಜಾಗೃತರಾಗಬೇಕಿದೆ ಎಂದರು.
ಸರಾಸರಿ ತಾಪಮಾನದಲ್ಲಿ 1.1 ಡಿಗ್ರಿ ಏರಿಕೆ
ಜಾಗತಿಕ ತಾಪಮಾನದಲ್ಲಿ ಸರಾಸರಿ 1.1 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಇದನ್ನು ಈಗಲೇ ತಹಬದಿಗೆ ತರದಿದ್ದರೆ ಇನ್ನೂ 10-12 ವರ್ಷಗಳಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಷ್ಯನ ಅತಿಯಾದ ವ್ಯಾಮೋಹ
ಜಾಗತಿಕ ಮಟ್ಟದಲ್ಲಿ ಎಲ್ಲ ರಾಷ್ಟ್ರಗಳು ಪೆಟ್ರೋಲ್, ಡೀಸೆಲ್ ಮೇಲೆ ಅತಿಯಾಗಿ ಅಲವಂಭಿಸಿವೆ. ಇದಿಲ್ಲದೇ ದಿನವೇ ಆರಂಭವಾಗುವುದಿಲ್ಲ. ಪ್ರಕೃತಿ ನೀಡಿರುವ ಈ ಪೆಟ್ರೋಲಿಯಂಗಳನ್ನು ಎಗ್ಗಿಲ್ಲದೇ ತೆಗೆದು ಸಾಗಿಸಲಾಗುತ್ತಿದೆ. ಪರಿಣಾಮ, ಇಂಗಾಲದ ಡೈಆಕ್ಸೈಡ್ ಪ್ರಮಾಣ ಏರಿಕೆಯಾಗಿದೆ. ಭೂಮಿಯ ಮೇಲ್ದರಿನ ಮೇಲೆ ಇಂಗಾಲದ ಪೊದರು ಉಂಟಾಗಿ ಶಾಖ ಹೆಚ್ಚಿದೆ ಎಂದರು.
ಪ್ರಮುಖರಾದ ಪ್ರೊ.ಎಲ್.ಕೆ.ಶ್ರೀಪತಿ, ಕಾಂತೇಶ್ ಕದರಮಂಡಲಿ ಸೇರಿದಂತೆ ಪರಿಸರಾಸಕ್ತರು ಉಪಸ್ಥಿತರಿದ್ದರು.