ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ(shimoga airport)ವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ (BY Raghavdendra) ತಿಳಿಸಿದರು.
READ | ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ, ಯಾವಾಗ ಎಷ್ಟಿತ್ತು ಎಂಐಪಿ?
ಫೆ. 27 ರಂದು ವಿಮಾನ ನಿಲ್ದಾಣದ ಉದ್ಘಾಟನೆ, ಜೊತೆಗೆ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ(Shikaripura-Ranebennur railway line) ದ ಶಂಕುಸ್ಥಾಪನೆ ಕೂಡ ನೆರವೇರಲಿದೆ. ಅಂದು ಒಟ್ಟು ₹1789 ಕೋಟಿಗಳ ಕಾಮಗಾರಿ ಉದ್ಘಾಟನೆಗೊಳ್ಳಲಿದೆ. ಜೊತೆಗೆ ₹3377 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ ಎಂದರು.
ವಿಮಾನ ನಿಲ್ದಾಣದ ಉದ್ಘಾಟನೆಗೆ ಸಾರ್ವಜನಿಕರು ಕೂಡ ಪಾಲ್ಗೊಳ್ಳಲು ಅವಕಾಶ ಇದೆ. ಸೋಗಾನೆ (Sogane) ವಿಮಾನ ನಿಲ್ದಾಣದ ಪ್ರದೇಶದಲ್ಲಿಯೇ ಸಮಾರಂಭ ನಡೆಯಲಿದೆ. ಸುಮಾರು 2 ಲಕ್ಷ ಜನರು ಅಂದು ಸೇರುವ ನಿರೀಕ್ಷೆ ಇದೆ. ಅಲ್ಲಿಯೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ ಎಂದರು.
VIDEO REPORT
- ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಎರಡು ಹಂತದಲ್ಲಿ ಇದಕ್ಕಾಗಿ ಭೂಸ್ವಾಧೀನ ನಡೆದಿದೆ. ಶಿವಮೊಗ್ಗದಿಂದ ಶಿಕಾರಿಪುರವರೆಗೆ ಭೂಸ್ವಾಧೀನ ಮುಗಿದಿದೆ. 68 ಕೋಟಿ ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಲಾಗಿದೆ. 612 ಕೋಟಿ ವೆಚ್ಚದಲ್ಲಿ ಮೊದಲ ಹಂತದ ರೈಲ್ವೆ ಮಾರ್ಗ ಕಾಮಗಾರಿ ಆರಂಭವಾಗಲಿದೆ ಎಂದರು.
- ಕೋಟೆಗಂಗೂರು -ರಾಮನಗರ -ಮಲ್ಲಾಪುರ -ಕೊರಲಹಳ್ಳಿ -ಶಿಕಾರಿಪುರ -ಮಾಸೂರು -ಹಲಗೇರಿ ಮೂಲಕ ರಾಣೆಬೆನ್ನೂರು ತಲುಪಲಿದೆ. ಅಲ್ಲಿಂದ ಹುಬ್ಬಳ್ಳಿ ಮೂಲಕ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಸಂಪರ್ಕ ಹೊಂದಲು ಸುಲಭವಾಗಲಿದೆ. ದಕ್ಷಿಣ- ಉತ್ತರ ಭಾರತಗಳ ನಡುವೆ ಈ ರೈಲ್ವೆ ಮಾರ್ಗ ಸೇತುವೆ ಆಗಲಿದೆ ಎಂದರು.
- ಕೋಟೆಗಂಗೂರಿನಲ್ಲಿ ₹76 ಕೋಟಿ ವೆಚ್ಚದಲ್ಲಿ ಕೋಚಿಂಗ್ ಡಿಪೋ (Coaching depo) ಸ್ಥಾಪನೆ ಆಗಲಿದೆ. ಅಲ್ಲಿಯೇ ₹21 ಕೋಟಿ ವೆಚ್ಚದಲ್ಲಿ ಟರ್ಮಿನಲ್ ಡಿಪೋ (Terminal depo) ಆರಂಭವಾಗಲಿದೆ. ಇವುಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ₹1000 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ.
- ಹೊಸನಗರ- ಮಾವಿನಕಟ್ಟೆ- ಆಡುಗೋಡಿ ₹313.56 ಕೋಟಿ, ಬೈಂದೂರು- ನಾಗೋಡಿ ಅಗಲೀಕರಣ ₹395 ಕೋಟಿ, ಶಿಕಾರಿಪುರ ಬೈಪಾಸ್ ₹56 ಕೋಟಿ, ತೀರ್ಥಹಳ್ಳಿ- ಮೇಗರವಳ್ಳಿ- ಆಗುಂಬೆ ₹96.20 ಕೋಟಿ, ಭಾರತೀಪುರ ರಸ್ತೆ ₹56 ಕೋಟಿ, ಹೊಳೆಹೊನ್ನೂರು ಭದ್ರಾ ಸೇತುವೆ ₹4.60 ಕೋಟಿ ವೆಚ್ಚವಾಗಲಿದೆ.
- ಅದೇ ದಿನ ವಿದ್ಯಾನಗರ ಮೇಲು ಸೇತುವೆಯನ್ನು ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತ ಮಾಡುವ ಗುರಿ ಹೊಂದಲಾಗಿದೆ. ಸ್ಮಾರ್ಟ್ ಸಿಟಿಯ 44 ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ.
- ಜಲಜೀವನ ಮಿಷನ್ ಯೋಜನೆಯಲ್ಲಿ 2,25,700 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿಂದೆ ಕೇವಲ 94,359 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 134 ಕೋಟಿ ರೂ. ಕಾಮಗಾರಿ ಲೋಕಾರ್ಪಣೆ ಆಗಲಿದೆ. ಅದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ನರೇಂದ್ರ ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮಾ ಮಾಡಲಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ಎಸ್.ಜ್ಯೋತಿಪ್ರಕಾಶ್, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಕೆ.ವಿ.ಅಣ್ಣಪ್ಪ, ಶಿವರಾಜ್, ಚಂದ್ರಶೇಖರ್ ಉಪಸ್ಥಿತರಿದ್ದರು.