ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಳೆದ 2-3 ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಕಿಂಗ್’ಪಿನ್ ಹೊಸಮನೆ ನಿವಾಸಿ ಸತೀಶ್(28) ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಬಳಿಯಿಂದ ₹25.46 ಲಕ್ಷ ಹಣ ಸೀಜ್ ಮಾಡಲಾಗಿದೆ. ಈತ ಭದ್ರಾವತಿ ಮತ್ತು ಶಿವಮೊಗ್ಗ ನಗರದಲ್ಲಿ ಬೆಟ್ಟಿಂಗ್ ದಂಧೆ ಕಂಟ್ರೋಲ್ ಮಾಡುತ್ತಿದ್ದ ಎಂದು ತಿಳಿಸಿದರು.
READ | ಆಯನೂರು ಮಂಜುನಾಥ್ ಇಂದು ರಾಜೀನಾಮೆ ಸಲ್ಲಿಕೆ, ಮುಂದಿನ ನಡೆಯ ಬಗ್ಗೆ ಕುತೂಹಲ
ಎರಡು ಪ್ರಕರಣಗಳಲ್ಲಿ ₹25.46 ಲಕ್ಷ ವಶ
ಏ.15ರಂದು ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸತೀಶ್ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿ ಅವರ ಬಳಿಯಿಂದ ₹7.20 ಲಕ್ಷ ಹಣ, ಮೂರು ಮೊಬೈಲ್, 1 ಮೊಪೆಡ್ ಬೈಕ್ ವಶಕ್ಕೆ ಪಡೆದಿದ್ದರು.
ಮಾರನೇ ದಿನ ಏ.16ರಂದು ಕಾರ್ತಿಕ್ ಎಂಬುವವನು ಸತೀಶ್ ವಿರುದ್ಧ ಬೆಟ್ಟಿಂಗ್ ಹೆಸರಿನಲ್ಲಿ ₹3 ಲಕ್ಷ ಪಡೆದು ಬೆಟ್ಟಿಂಗ್ ನಲ್ಲಿಹಣ ಹೋಗಿದೆ ಎಂದು ಹೇಳಿ ಮೋಸ ಮಾಡಿರುವುದಾಗಿ ದೂರು ನೀಡಿದ್ದಾನೆ. ಸತೀಶ್ ಬೆಟ್ಟಿಂಗ್ ಸೈಟ್’ಗಳಲ್ಲಿ ಹೂಡಿಕೆ ಮಾಡಿದ್ದ ಒಟ್ಟು ₹18,26,336 ನಗದು ಮತ್ತು 2 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡೂ ಪ್ರಕರಣ ಸೇರಿ ಒಟ್ಟು ₹25,46,336 ನಗದು ಸೇರಿದಂತೆ ಮೊಬೈಲ್ ಬೈಕ್ ಗಳನ್ನು ಸೀಜ್ ಮಾಡಲಾಗಿದೆ.
ತನಿಖೆ ಕೈಗೊಂಡ ಡಿವೈಎಸ್ಪಿ ಡಿ.ಟಿ.ಪ್ರಭು, ಬಾಲರಾಜು ನೇತೃತ್ವದ ತಂಡದ ಕಾರ್ಯಕ್ಕೆ ಎಸ್ಪಿ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಪ್ರಶಂಸಾ ಪತ್ರ ಸಹ ನೀಡುವುದಾಗಿ ತಿಳಿಸಿದರು.
ಬಟ್ಟಿಂಗ್ ದಂಧೆ ಕಂಡುಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆ, 112 ತುರ್ತು ಸಹಾಯವಾಣಿ, ಕಂಟ್ರೋಲ್ ರೂಂ 948080300, 08182-261413ಗೆ ಮಾಹಿತಿ ನೀಡುವಂತೆ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಸಿಇಎನ್ ಪೊಲೀಸ್ ಠಾಣೆ ಪಿಐ ಸಂತೋಷ್ ಪಾಟೀಲ್, ಡಿವೈಎಸ್ಪಿ ಬಾಲರಾಜು, ಡಿ.ಟಿ.ಪ್ರಭು ಉಪಸ್ಥಿತರಿದ್ದರು.