ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣ ಸಮೀಪದ ಮೆಸ್ಕಾಂ ಕಚೇರಿಯ ಮೇಲೆ ಕಲ್ಲು ತೂರಾಟ ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರಗೇಶ್ (52) ಎಂಬುವವರು ವಿರುದ್ಧ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ಜನರನ್ನು ದಿಕ್ಕು ತಪ್ಪಿಸುತ್ತಿದೆ. ವಿದ್ಯುತ್ ದರ ಹೆಚ್ಚಾದರೆ ಕೈಗಾರಿಕೆಗಳ ಗತಿ ಏನು? ಬಿಜೆಪಿ ಸರ್ಕಾರದ ಮೇಲೆ ತಪ್ಪು ಹೊರಿಸುತ್ತಾರೆ. ವಿದ್ಯುತ್ ಕಂಪನಿಗಳು ದರ ಏರಿಸುವಂತೆ ಸರ್ಕಾರದ ಮುಂದಿಟ್ಟಾಗ ಬಿಜೆಪಿ ಸರ್ಕಾರ ಅದನ್ನು ನಿರಾಕರಿಸಿತ್ತು. ಅಧಿಕಾರಕ್ಕೆ ಬರಲು ಗ್ಯಾರಂಟಿಗಳ ಸುಳ್ಳು ಹೇಳಿ ಅದನ್ನು ಜಾರಿಗೆ ತರಲಾಗದೆ ಈಗ ವಿದ್ಯುತ್ ದರ ಏರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಕುತಂತ್ರದ ರಾಜಕಾರಣ ಮಾಡುತ್ತಿದೆ.
– ಎಸ್.ಎನ್.ಚನ್ನಬಸಪ್ಪ, ಶಾಸಕ
ದೂರಿನಲ್ಲಿ ಏನಿದೆ?
ಪ್ರತಿಭಟನೆ ವೇಳೆ ಮೆಸ್ಕಾಂ ಕಚೇರಿಯ ಮೇಲೆ ಕಲ್ಲು ತೂರಾಟ ಮಾಡಿದ್ದಕ್ಕೆ ಅಧಿಕಾರಿ ದೂರು ನೀಡಿದ್ದು, ಅದರಲ್ಲಿ ಸಾರ್ವಜನಿಕ ಆಸ್ತಿ ಹಾನಿ ಮಾಡಿರುವುದಾಗಿ ಆರೋಪಿಸಲಾಗಿದೆ.
READ | ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ? ರಕ್ತದ ಮಹತ್ವವೇನು? ರಕ್ತದಾನ ಪ್ರಯೋಜನಗಳೇನು?
ಘಟನೆಯ ವಿವರ
ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಆಕ್ರೋಶಕ್ಕೆ ತಿರುಗಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಆಗ ಕಲ್ಲು ತೂರಾಟ ನಡೆದಿದೆ.
ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರೂ ಕಚೇರಿಯ ಆವರಣಕ್ಕೆ ನುಗ್ಗಿದ ಉದ್ರಿಕ್ತರ ಗುಂಪು ಕಚೇರಿಯೊಳಗಿನ ಸೂಚನಾ ಫಲಕದ ಗಾಜನ್ನು ಒಡೆದುಹಾಕಿದ್ದಾರೆ. ಗಾಜಿಗೆ ಕಲ್ಲು ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣವೇ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧನ ಬಳಿಕೆ ತೀವ್ರಗೊಂಡ ಆಕ್ರೋಶ
ವಶಪಡೆದ ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತೆ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಬಂಧಿತನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೆಇಬಿ ವೃತ್ತದಲ್ಲಿ ಧರಣಿ ಕುಳಿತರು. ಶಾಸಕ ಚನ್ನಬಸಪ್ಪ ಸೇರಿದಂತೆ ಹಲವರನ್ನು ಪೊಲೀಸರು ಈ ಸಂದರ್ಭದಲ್ಲಿ ವಶಕ್ಕೆ ಪಡೆದರು.
ಶಾಸಕ ಎಸ್.ರುದ್ರೇಗೌಡ ಮಾತನಾಡಿ, ಹೊಸ ಸರ್ಕಾರ ಬಂದು ಒಂದು ತಿಂಗಳಲ್ಲಿಯೇ ಬೀದಿಗಿಳಿಯುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರವಾಗಿದೆ ಎಂದಿ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ಎಂ.ಎಲ್.ಸಿ ಡಿ.ಎಸ್.ಅರುಣ್ ಮಾತನಾಡಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ ನಾಯಕ್, ಪಾಲಿಕೆ ಸದಸ್ಯರಾದ ಇ. ವಿಶ್ವಾಸ್, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ಮಂಜುನಾಥ್, ಸುನೀತಾ ಅಣ್ಣಪ್ಪ, ವಿಶ್ವನಾಥ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಬಳ್ಳೇಕೆರೆ ಸಂತೋಷ್ ಉಪಸ್ಥಿತರಿದ್ದರು.
PSI Transfer | ಶಿವಮೊಗ್ಗದ ವಿವಿಧ ಠಾಣೆಗಳ ಪಿಎಸ್ಐಗಳ ವರ್ಗಾವಣೆ, ಯಾರಿಗೆ ಯಾವ ಠಾಣೆ? ಇಲ್ಲಿದೆ ಪಟ್ಟಿ