ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಹೊಳೆಹೊನ್ನೂರು (Holehonnur) ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಗಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳತನ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
READ |ಪೊಲೀಸರ ಮೊಬೈಲಿನಲ್ಲಿ ವಿಡಿಯೋ ಪ್ರತ್ಯಕ್ಷ, ಖಾಸಗಿ ಬಸ್ ಚಾಲಕನಿಗೆ ಬಿತ್ತು ದಂಡ
ಹೊನ್ನಾಳಿಯ ಬುಳ್ಳಾಪುರ ಗ್ರಾಮದ ರಘು ಅಲಿಯಾಸ್ ಚಿನ್ನು ಅಲಿಯಾಸ್ ಡಿ.ಜೆ(26), ಶಿವಮೊಗ್ಗ ತಾಲೂಕು ತರಗನಹಳ್ಳಿ ಗ್ರಾಮದ ಮಣಿಕಂಠ ಅಲಿಯಾಸ್ ಮಣಿ(26) ಬಂಧಿತ ಆರೋಪಿಗಳು. ಇವರ ಬಳಿಯಿಂದ ಹೊಳೆಹೊನ್ನೂರು ಠಾಣೆಯ 3, ಶಿವಮೊಗ್ಗ ಗ್ರಾಮಾಂತರ ಠಾಣೆಯ 1, ಹಾವೇರಿ ರಟ್ಟೆಹಳ್ಳಿ ಠಾಣೆಯ 3, ದಾವಣಗೆರೆ ಹೊನ್ನಾಳಿ ಠಾಣೆಯ 1, ಚನ್ನಗಿರಿ ಠಾಣೆಯ 1, ಸಂತೆಬೆನ್ನೂರು ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 12 ದೇವಸ್ಥಾನ ಕಳ್ಳತನ ಪ್ರಕರಣಗಳು ಮತ್ತು ಚಿಕ್ಕಮಗಳೂರು ತರೀಕೆರೆ ಠಾಣೆಯ 1 ಬೈಕ್ ಕಳ್ಳತನ ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ₹32,000 ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಹಾಗೂ ಅಂದಾಜು ₹40,000 ಮೌಲ್ಯದ 2 ದ್ವಿ ಚಕ್ರ ವಾಹನ ಸೇರಿದಂತೆ ಒಟ್ಟು ₹72,000 ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರ ಯಶಸ್ವಿ ಕಾರ್ಯಾಚರಣೆ
ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯಾರೋ ಕಳ್ಳರು ಮುರಿದು ಹುಂಡಿಯಲ್ಲಿದ್ದ ಹಣ ಮತ್ತು ಬಂಗಾರ, ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಸಾಮಗ್ರಿಗಳು ಮತ್ತು ಆರೋಪಿತರ ಪತ್ತೆಗೆ ಎಸ್.ಪಿ. ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಭದ್ರಾವತಿ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಠಾಣಾ ನಿರೀಕ್ಷಕ ಆರ್.ಎಲ್.ಲಕ್ಷ್ಮೀಪತಿ ನೇತೃತ್ವದಲ್ಲಿ, ಪಿ.ಎಸ್.ಐ ಸುರೇಶ್, ರಮೇಶ್ ಹಾಗೂ ಸಿಬ್ಬಂದಿ ಲಿಂಗೇಗೌಡ, ಮಂಜುನಾಥ, ವಿಶ್ವನಾಥ್, ಚಂದ್ರಶೇಖರ್, ಮೆಹಬೂಬ್ ಬಿಲ್ಲಳ್ಳಿ ಸುದರ್ಶನ್ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.