ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ನಿ ಕಮಲಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 33,74,800 ರೂ. ನಗದು ಸೇರಿದಂತೆ 2 ಬೈಕ್, ಒಂದು ಕಾರು ಹಾಗೂ 7 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ (G.K.Mithun Kumar) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಕಾರು ಚಾಲಕನಾಗಿದ್ದ ಹುಣಸೋಡು (Hunasodu) ತಾಂಡಾದ ಹನುಮಂತನಾಯ್ಕ(22), ಗುಂಡಪ್ಪಶೆಡ್ ನಿವಾಸಿ ವಿ.ಪ್ರದೀಪ್ ಅಲಿಯಾಸ್ ಮೊದಲಿಯಾರ (21), ಅನುಪಿನಕಟ್ಟೆ ತಾಂಡಾದ ಸಿ.ಅಪ್ಪುನಾಯ್ಕ ಅಲಿಯಾಸ್ ಅಪ್ಪು(21), ಅನುಪಿನಕಟ್ಟೆಯ ಪ್ರಭು ನಾಯ್ಕ್ ಅಲಿಯಾಸ್ ಸೈಕ್(26), ಗುಂಡಪ್ಪಶೆಡ್’ನ ವಿ.ಸತೀಶ್(26), ಅನುಪಿನಕಟ್ಟೆ ತಾಂಡಾದ ವೈ.ರಾಜು ತೀತಾ(24) ಬಂಧಿತ ಆರೋಪಿಗಳು. ಈ ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬ 7ನೇ ಆರೋಪಿಯನ್ನು ಕೂಡ ಗುರುವಾರ ಬಂಧಿಸಲಾಗಿದೆ ಎಂದು ತಿಳಿಸಿದರು.
READ | ನೀರಾವರಿ ಇಲಾಖೆ ಇಇ ಪತ್ನಿ ಅನುಮಾನಾಸ್ಪದ ಸಾವು
ಮಗನ ವಿದ್ಯಾಭ್ಯಾಸಕ್ಕೆ ತಂದಿಟ್ಟಿದ್ದ ಹಣ
ಇಂಜಿನಿಯರ್ ಮಲ್ಲಿಕಾರ್ಜುನ್ ಅವರು ತಮ್ಮ ಮಗನ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಕಟ್ಟುವ ಸಲುವಾಗಿ 35 ಲಕ್ಷ ರೂ. ಕೈ ಸಾಲ ಪಡೆದು ಮನೆಯಲ್ಲಿ ತಂದಿಟ್ಟಿದ್ದರು. ಈ ಎಲ್ಲ ಹಣವನ್ನು ಚಾಲಕ ಹನುಮಂತ್ ನಾಯ್ಕ ಮೂಲಕವೇ ಸ್ನೇಹಿತರ ಬಳಿಯಿಂದ ತರಿಸಿ ಮನೆಯಲ್ಲಿಟ್ಟಿದ್ದರು. ಹೀಗಾಗಿ ಈ ಹಣ ಲಪಟಾಯಿಸುವ ಉದ್ದೇಶದಿಂದ ಹನುಮಂತನಾಯ್ಕ ಸ್ನೇಹಿತರೊಂದಿಗೆ ಸೇರಿ ತಂತ್ರ ರೂಪಿಸಿದ್ದ ಎಂದರು.
ಮೊದಲ ಪ್ರಯತ್ನ ವಿಫಲ
ಮಲ್ಲಿಕಾರ್ಜುನ್ ಅವರು ಗೋವಾಕ್ಕೆ ತೆರಳಿದ ಸಂದರ್ಭ ನೋಡಿಕೊಂಡ ಆರೋಪಿ ಹನುಮಂತ್ ನಾಯ್ಕ ತನ್ನ ಸೋದರನಿಗೆ ಅಪಘಾತವಾಗಿದ್ದು, ಆತನ ಚಿಕಿತ್ಸೆಗೆ 2 ಸಾವಿರ ಹಣ ಬೇಕೆಂದು ಜೂ.16 ರ ರಾತ್ರಿ ಮಲ್ಲಿಕಾರ್ಜುನ ಅವರ ಮನೆಗೆ ಹೋಗಿ ಕಮಲಮ್ಮನವರ ಬಳಿ ಕೇಳಿದ್ದಾರೆ. ಹೋಗುವಾಗಲೇ ಖಾಸಗಿ ಆಹಾರ ಪೂರೈಸುವ ಕಂಪನಿಯೊಂದರ ಟೀ ಶರ್ಟ್ ಖರೀದಿಸಿ ಮೂವರೂ ಧರಿಸಿಕೊಂಡು ಮನೆಯ ಬಳಿ ಹೋಗಿ ಚಿಕಿತ್ಸೆಗೆ ಹಣ ಕೇಳಿದ್ದಾರೆ. ಆ ಹೊತ್ತಿಗೆ ಕಮಲಮ್ಮನವರ ಪತಿ ಫೋನ್ ಮಾಡಿದ್ದಾರೆ. ಎದುರುಗಡೆ ಮನೆಯವರು ಜನರ ಸದ್ದು ಕೇಳಿ ಬಾಗಿಲು ತೆರೆದಿದ್ದಾರೆ. ಹೀಗಾಗಿ, ದರೋಡೆ ಉದ್ದೇಶದಿಂದ ಬಂದವರು ವಾಪಸ್ ಹೋಗಿದ್ದಾರೆ ಎಂದು ಎಸ್.ಪಿ. ತಿಳಿಸಿದ್ದಾರೆ.
ಜೂ.17ರಂದು ಮತ್ತೆ ಕಾರಿನಲ್ಲಿ ಬಂದಿದ್ದ ಹನುಮಂತ್ ನಾಯ್ಕ ಸ್ನೇಹಿತರು ಹಣ ಕೇಳಿದ್ದಾರೆ.ಕೊಡಲು ಹಿಂದೇಟು ಹಾಕಿದಾಗ ಕುಡಿಯಲು ನೀರು ಕೇಳಿದ್ದಾರೆ. ತರಲು ಹೋದಾಗ ಮನೆಯೊಳಗೆ ಪ್ರವೇಶಿಸಿದ್ದಾರೆ. ಕಮಲಮ್ಮನವರ ಬಾಯಿ ಮುಚ್ಚಲಾಗಿದೆ. ಅವರು ಪ್ರತಿರೋಧ ಒಡ್ಡಿದಾಗ ಕಬ್ಬಿಣದ ಚೂಪಾದ ರಾಡಿನಿಂದ ಕುತ್ತಿಗೆಗೆ ಹೊಡೆದು ಸಾಯಿಸಿದ್ದಾರೆ. ಬಳಿಕ ಹಣ ತೆಗೆದುಕೊಂಡು ಎಲ್ಲರೂ ಪರಾರಿಯಾಗಿದ್ದಾರೆ. ಈ ಎಲ್ಲ ವಿಚಾರಗಳು ತನಿಖೆ ವೇಳೆ ಆರೋಪಿಗು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
READ | ಶಿವಮೊಗ್ಗದಿಂದ ನಾಲ್ಕು ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ, ಯಾವ ಮಾರ್ಗಗಳಲ್ಲಿ ಸಂಚಾರ?
ಹಣ ಸಿಕ್ಕಿದ್ದೇ ಎಲ್ಲರೂ ಎಸ್ಕೇಪ್
ದರೋಡೆ ಮಾಡಿದ ಹಣವನ್ನು ಸಮಾನವಾಗಿ ಹಂಚಿಕೊಂಡಿದ್ದೇ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದರು. ಹೋಟೆಲ್ನಲ್ಲಿ ಉಳಿದು, ಹೊಸ ಮೊಬೈಲ್ಗಳನ್ನು ಖರೀದಿ ಮಾಡಿದ್ದರು. ಅವರೆಲ್ಲರನ್ನು ಬೇರೆ ಬೇರೆ ಕಡೆಯಿಂದ ಬಂಧಿಸಲಾಗಿದೆ.
ಸಿಕ್ಕಿದ್ದೆಷ್ಟು ಹಣ?
35 ಲಕ್ಷ ರೂ.ನಲ್ಲಿ 33,74,800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೆ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, 7ಮೊಬೈಲ್, 3ಬೈಕ್, ಕೊಲೆ ಮಾಡಿದ ಆಯುಧ ಸೇರಿದಂತೆ ಸುಮಾರು 41,14,800 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್.ಪಿ. ತಿಳಿಸಿದರು.
ತಂಡದ ಕಾರ್ಯಕ್ಕೆ ಎಸ್.ಪಿ. ಪ್ರಶಂಸೆ
ತುಂಗಾನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಗುವುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್, ಪಿಎಸ್ಐ ಕುಮಾರ್, ರಘುವೀರ್, ಸಿಬ್ಬಂದಿ ಕಿರಣ್, ರಾಜು, ಅರುಣ್ಕುಮಾರ್, ಅಶೋಕ್, ಮೋಹನ್, ಕೇಶವ್ ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್ ನಾಯ್ಕ್ ಮತ್ತಿತರರು ಇದ್ದರು.
ಪತ್ನಿ ಸಾವಿನ ಬೆನ್ನಲ್ಲೇ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ನಿಧನ, ದೇಶವೇ ಕಂಬನಿ