ಸುದ್ದಿ ಕಣಜ.ಕಾಂ ಶಿವಮೊಗ್ಗ
000: ಶರಾವತಿ ಸಂತ್ರಸ್ತರಿಗೆ (Sharavathi) ಪರಿಹಾರ ಒದಗಿಸಲು ತಜ್ಞರ ಸಮಿತಿ ರಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರದಿಂದ ಈ ಕುರಿತು ಸೆಟಲ್ಮೆಂಟ್ ಮಾಡಲು ‘ಸೆಟಲ್ಮೆಂಟ್ ಆಫೀಸರ್’ ನೇಮಕ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
READ | ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸುವ ಬಗ್ಗೆ ಕೈಗೊಂಡ ನಿರ್ಧಾರವೇನು?
ಶೇ.50 ಕಂದಾಯ ಭೂಮಿ ಇದ್ದರೆ, ಶೇ.50 ಅರಣ್ಯ ಭೂಮಿ, ಈ ರೀತಿ ಸಮಸ್ಯೆಗಳಿವೆ. ಭೂಮಿ ಸರ್ವೇ ಕಾರ್ಯ ತ್ವರಿತವಾಗಿ ಆಗಬೇಕಿದೆ. ಅದಕ್ಕೆ ಲೈಸನ್ಸ್ಡ್ ಸರ್ವೇಯರ್ ಅಗತ್ಯವಿದೆ ಎಂದು ಜಿಲ್ಲಾಧಿಕರಿಗಳು ತಿಳಿಸಿದ್ದು, ಭೂಮಾಪನ ಇಲಾಖೆ ಆಯುಕ್ತರು ಅಕ್ಕಪಕ್ಕದ ಜಿಲ್ಲೆಯ ಸರ್ವೇಯರ್ ಅಥವಾ ನೇಮಕಾತಿ ಹೊಂದಿದ ಸರ್ವೇಯರ್ ಗಳನ್ನು ನಿಯೋಜಿಸುವಂತೆ ಹಾಗೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ತಿಳಿಸಿದರು.
ಆರ್.ಟಿಸಿ ಮಿಸ್ ಮ್ಯಾಚ್ 5,313 ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಅರಣ್ಯಕ್ಕೆ ಸಂಬಂಧಿಸಿದ ಸುಮಾರು 2000 ಜಠಿಲ ಪ್ರಕರಣಗಳಿವೆ ಎಂದು ಡಿಸಿ ಯವರು ತಿಳಿಸಿದ್ದಾರೆ. ಇನ್ನುಳಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಗ್ರಾಮ ಲೆಕ್ಕಿಗರ ನೇಮಕಾತಿ ಆದಾಗಿನಿಂದ ಅವರಿಗೆ ತರಬೇತಿ ನೀಡಿಲ್ಲ. ಗುಣಮಟ್ಟದ ಮತ್ತು ತ್ವರಿತ ಸೇವೆ ನೀಡಲು ಅನುವಾಗುವಂತೆ ಅವರಿಗೆ ತರಬೇತಿ ನೀಡಬೇಕು. ಡಿಸಿ, ಎಸಿ, ತಹಶೀಲ್ದಾರ್ ಅವರು ತಾವು ನಡೆಸುವ ಕೋರ್ಟ್ ಗಳಲ್ಲಿ ನೀಡುವ ಆದೇಶಗಳ ಗುಣಮಟ್ಟ ಸುಧಾರಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಜ್ಞರನ್ನೊಳಗೊಂಡು ಒಂದು ಅರ್ಧ ದಿನದ ಕಾರ್ಯಾಗಾರ ಏರ್ಪಡಿಸಬೇಕು. ಜನರಿಗೆ ಅನುಕೂಲವಾಗುವಂತೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು.
– ಕೃಷ್ಣಬೈರೇಗೌಡ, ಕಂದಾಯ ಸಚಿವ
ಜನಪರ ಸೇವೆಯನ್ನು ನೀಡಿ
ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ತ್ವರಿತವಾಗಿ, ಜನಪರ ಸೇವೆಯನ್ನು ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು/ ಸಿಬ್ಬಂದಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಸರ್ಕಾರ ಇರುವುದು ಜನ ಜೀವನ ಸುಲಲಿತಗೊಳಿಸುವುದಕ್ಕೆ. ಜನರು ಹೆಚ್ಚಾಗಿ ಬರುವುದು ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಗೆ. ಆದ್ದರಿಂದ ಜನರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಅವರನ್ನು ಹೆಚ್ಚು ಅಲೆದಾಡಿಸದೇ ಗುಣಮಟ್ಟದ ಮತ್ತು ತ್ವರಿತ ಸೇವೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಆಡಳಿತ ಯಂತ್ರದಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ, ಅದನ್ನು ಪರಿಣಾಮಕಾರಿಯಾಗಿ ಅಧಿಕಾರಿ/ಸಿಬ್ಬಂದಿ ವರ್ಗದವರು ಅನುಷ್ಟಾನಕ್ಕೆ ತರಬೇಕೆಂದರು.
READ | ರಾಜ್ಯದಲ್ಲೇ ಮೊದಲ ಪ್ರಯತ್ನ, ಶಿವಮೊಗ್ಗದಲ್ಲಿ ಕೆ.ಎ.ದಯಾನಂದ ಐಎಎಸ್ ವಾಚನಾಲಯ, ಆಯ್ಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ವರದಿ
ಕೃಷ್ಣ ಬೈರೇಗೌಡ ನೀಡಿದ ಸೂಚನೆಗಳೇನು?
- 2019 ರಿಂದ 2022 ರವರೆಗೆ ನೆರೆಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಶುರು ಮಾಡದೇ ಇರುವ ಮನೆಗಳ ಕುರಿತು ತಹಶೀಲ್ದಾರ್ ಪರಿಶೀಲಿಸಿ, ನೋಟಿಸ್ ನೀಡಿ ಪ್ರಕರಣ ಇತ್ಯರ್ಥಪಡಿಸಬೇಕು.
- ಬಾಕಿ ಉಳಿಸಿರುವ ಶಾಲೆ-ಅಂಗನವಾಡಿ ಸಣ್ಣಪುಟ್ಟ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.
- ಜಿಲ್ಲೆಯಲ್ಲಿ 97 ಸಾವಿರ ಫಾರ್ಮ್ 57 ಅರ್ಜಿಗಳು ಬಂದಿವೆ. ಇವನ್ನು ಇತ್ಯರ್ಥಪಡಿಸಲು ಸಮಿತಿ ರಚನೆ ಮಾಡಲಾಗುವುದು. ಸದರಿ ಸಮಿತಿಯು ನಿಜವಾದ ಬಡ ಸಾಗುವಳಿದಾರರನ್ನು ಗುರುತಿಸಿ ಅವರ ಜಮೀನಿಗೆ ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸ ಆಗಬೇಕು.
ರೈತರ ಹೆಸರಿನಲ್ಲಿ ಬೇರೆಯವರು ಭೂಮಿ ಕಬಳಿಸುವಂತಾಗಬಾರದು. ಕಡೂರು ತಾಲ್ಲೂಕಿನಲ್ಲಿ ಅನರ್ಹರಿಗೆ ಸಾವಿರಾರು ಎಕರೆ ಜಮೀನು ಮಂಜೂರು ಮಾಡಿದ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ವಹಿಸಲಾಗಿದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಅರ್ಹರಿಗೆ ಅನುಕೂಲ ಮಾಡಿಕೊಡಬೇಕು.
ಸಭೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್, ಭೂಮಾಪನ ಇಲಾಖೆ ಆಯುಕ್ತರಾದ ಜೆ.ಮಂಜುನಾಥ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ ವಸಂತಕುಮಾರ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
Sharavathi | ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅಭಯ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಏನೇನು ಭರವಸೆ?