ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನ.19ರಂದು ನಗರದ ಮೆಡಿಕಲ್ ಕಾಲೇಜ್ ಎದುರಿನ ಪುಟ್ಪಾತ್ನಲ್ಲಿ ಸುಸ್ತಾಗಿ ಬಿದ್ದಿದ್ದ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.
ಮೃತನು ಸುಮಾರು 5 ಅಡಿ 10 ಇಂಚು ಎತ್ತರ, ಕಪ್ಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು, 1 ಇಂಚು ಉದ್ದದ ಕಪ್ಪುಬಿಳಿ ಮಿಶ್ರಿತ ಕುರುಚಲು ಗಡ್ಡ, ಮೃತನ ಬಲಗೈನ ಮುಂಗೈನ ಒಳಭಾಗದಲ್ಲಿ ಅಮ್ಮ ಕಾವೇರಿ ಎಂಬ ಹಚ್ಚೆ ಗುರುತು ಇರುತ್ತದೆ. ಮೃತನು ತಿಳಿ ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9611761255 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
READ | ಮೊದಲ ದಿನವೇ 400ಕ್ಕೂ ಅಧಿಕ ಜನರ ಸಂಚಾರ, ಶಿವಮೊಗ್ಗದಿಂದ ಹೈದ್ರಾಬಾದ್, ತಿರುಪತಿ, ಗೋವಾ ವಿಮಾನಕ್ಕೆ ಭರ್ಜರಿ ಬೇಡಿಕೆ
ಇಂದು ವಿದ್ಯುತ್ ವ್ಯತ್ಯಯ
SHIMOGA: ಕುಂಸಿ ಮೆಸ್ಕಾಂ ಉಪವಿಭಾಗ ಕುಂಸು, ಆಯನೂರು ಮತ್ತು ಹಾರ್ನಳ್ಳಿ ಲಿಂಕ್ ಲೈನ್ ಕಾಮಗಾರಿ ಇರುವುದರಿಂದ ನ. 23 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುಂಸಿ, ಜೋರಡಿ, ಬಾಳೆಕೊಪ್ಪ, ತುಪ್ಪೂರು, ಶೆಟ್ಟಿಕೆರೆ, ಕೋಣೆಹೊಸೂರು, ದೊಡ್ಡಿಮಟ್ಟಿ, ಕೊರಗಿ, ಹುಬ್ಬನಹಳ್ಳಿ, ಹಾರ್ನಳ್ಳಿ, ರಾಮನಗರ, ಕೆಸವಿನಕಟ್ಟೆ, ವಿಠಗೊಂಡನಕೊಪ್ಪ, ವೀರಣ್ಣನಬೆನವಳ್ಳಿ, ಮುದುವಾಲ, ಯಡವಾಲ, ದೇವಬಾಳ, ತ್ಯಾಜವಳ್ಳಿ, ಕೊನಗವಳ್ಳಿ ಮಲ್ಲಾಪುರ, ಸುತ್ತುಕೋಟೆ, ಹಿಟ್ಟೂರು, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ಚಿಕ್ಕಮತ್ಲಿ, ತಮ್ಮಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಈ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ನೀಡಿದೆ.
ಪ್ರೌಢ ಶಾಲಾ ಹಂತದ ಸ್ಪರ್ಧೆ
SHIMOGA: ಶಾಲಾ ಶಿಕ್ಷಣ ಇಲಾಖೆಯು ನೂತನ ಮತ್ತು ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ನ.28 ರಂದು ಬೆಳಗ್ಗೆ 10ಕ್ಕೆ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಹಂತದ ಜಿಲ್ಲಾ ಮಟ್ಟದ ಪ್ರಬಂಧ, ರಸಪ್ರಶ್ನೆ, ಭಿತ್ತಿ ಚಿತ್ರ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಜಿಲ್ಲೆ ಎಲ್ಲ 7 ತಾಲೂಕುಗಳಿಂದ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಒಟ್ಟು 56 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಸ್ವೀಪ್ ನೋಡಲ್ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭಾಗವಹಿಸಲಿದ್ದಾರೆ.
ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನ
SHIMOGA: 2023-24 ನೇ ಸಾಲಿನ ಮಹಿಳಾ ತರಬೇತಿ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು, ಕರ್ನಾಟಕ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವೆಬ್ಸೈಟ್ kaushlkar.com ಇಲ್ಲಿ ನೋಂದಣಿಯಾಗಿ ತರಬೇತಿ ಕೇಂದ್ರ ಮತ್ತು ಜಾಬ್ ರೋಲ್ಗಳಿಗೆ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತಾವನೆಗಳನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆಲ್ಕೊಳ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ನ.28 ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
SHIMOGA: ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನ.28 ರಂದು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಡಿ.ವಿ.ಎಸ್. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಸರ್.ಎಂ.ವಿ.ರಸ್ತೆ, ಬಸ್ವೇಶ್ವರ ವೃತ್ತ, ಶಿವಮೊಗ್ಗ ಇಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ವೈರ್ ರೋಪ್ ಇಂಡಸ್ಟ್ರೀ ಪ್ರೈ. ಲಿ. ಸಂ.29, ಕೆಐಎಡಿಬಿ ಕೈಗಾರಿಕಾ ಪ್ರದೇಶ, ಲೋಕಿಕೆರೆ ರಸ್ತೆ, ದಾವಣಗೆರೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಮಿಷನರ್ II ತಿಳಿಸಿದ್ದಾರೆ.
ಜನ ಸಂಪರ್ಕ ಸಭೆ
SHIMOGA: ಮೆಸ್ಕಾಂ ಕುಂಸಿ ಉಪವಿಭಾಗ ಕಚೇರಿಯಲ್ಲಿ ನ.28 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು ಮೆಸ್ಕಾಂ ಅಧಿಕಾರಿ ಭಾಗವಹಿಸುವರು. ಸಂಬಂಧಪಟ್ಟ ಪ್ರದೇಶದ ಗ್ರಾಹಕರು ತಮ್ಮ ಅಹವಾಲುಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ ಸಂ: 9480841340 ನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ
SHIMOGA: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಎನ್ಇಇಟಿ (NEET) ಹಾಗೂ ಜೆಇಇ (JEE) (MAINS AND ADVANCED) ಪರೀಕ್ಷಾ ಪೂರ್ವ ತರಬೇತಿಗಾಗಿ ಹಿಂದುಳಿದ ವರ್ಗಗಗಳ ಪ್ರವರ್ಗ -1,2ಎ,3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಪರೀಕ್ಷಾ ಪೂರ್ವ ತರಬೇತಿಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಕಲಬುರಗಿ ನಗರಗಳಲ್ಲಿ ಮಾತ್ರ ನೀಡಲಿದ್ದು, ಅಭ್ಯರ್ಥಿಗಳು ತರಬೇತಿಗೆ ನಿಯಮಿತವಾಗಿ ಹಾಜರಾಗಬೇಕು. ಸರ್ಕಾರ ಕಾಲಕಾಲಕ್ಕೆ ನೀಡುವ ನಿರ್ದೇಶನದಂತೆ ಈ ತರಬೇತಿಯನ್ನು ಆಫ್ಲೈನ್ ಅಥವಾ ಆನ್ಲೈನ್ ಮೂಲಕ ನೀಡಲಾಗುವುದು.
ಅಭ್ಯರ್ಥಿಗಳು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಹಿಂದುಳಿದ ವರ್ಗಗಗಳ ಪ್ರವರ್ಗ -1,2ಎ,3ಎ ಹಾಗೂ 3ಬಿ ಯ ಜಾತಿಗೆ ಸೇರಿಬೇಕು. ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಯ ರೂ. 6.00ಲಕ್ಷಗಳ ಮಿತಿಯಲ್ಲಿರಬೇಕು. ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ. ಈ ಪರೀಕ್ಷಾ ಪೂರ್ವ ತರಬೇತಿಯನ್ನು ಖಾಸಗಿ ಸಂಸ್ಥೆಗಳ ಮೂಲಕ ನೀಡಲಾಗುತ್ತಿದು, ಉಚಿತವಾಗಿದೆ. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತರಬೇತಿ ಭತ್ಯ ಹಾಗೂ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.
ಆಸಕ್ತ ವಿದ್ಯಾರ್ಥಿಗಳು https://bcwd.karnataka.gov.in ಮೂಲಕ ದಿ: 04/12/2023 ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004 ನ್ನು ಸಂಪರ್ಕಿಸುವುದು.
Arecanut tree sofa | ಅಡಿಕೆ ಮರದಿಂದ ಸೋಫಾ ಸೆಟ್, ಕಾಯಿಲೆಯಿಂದ ಹೊಳೆದ ಐಡಿಯಾ ಈಗ ಸಕ್ಸಸ್