ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣ ಸಮೀಪದ ಪಾರ್ಕಿಂಗ್ ಜಾಗದಲ್ಲಿ ಇತ್ತೀಚೆಗೆ ಸಿಕ್ಕಿದ್ದ ಕಬ್ಬಿಣದ ಬಾಕ್ಸ್ ಹಿಂದಿನ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಬಾಕ್ಸ್ ನಲ್ಲಿದ್ದ ಉಪ್ಪಿನ ರಹಸ್ಯವೇನು?
ಪ್ರಕರಣದ ಬಗ್ಗೆ ಮಾಧ್ಯದವರಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಈ ಪ್ರಕರಣ ಸಂಬಂಧಿಸಿದಂತೆ ತಿಪಟೂರಿನ ಗಾಂಧಿ ನಗರದ ನಸ್ರುಲ್ಲಾ(55) ಮತ್ತು ಭೋವಿ ಕಾಲೋನಿಯ ಜಬಿಉಲ್ಲಾ(35) ಎಂಬುವವರನ್ನು ಬಂಧಿಸಿ, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
READ | ಸುಂದರವಾಗಿ ಗಮನ ಸೆಳೆಯುತ್ತಿರುವ ಕಾಶಿಪುರ ರೈಲ್ವೆ ಓವರ್ ಬ್ರಿಡ್ಜ್
ತಿಪಟೂರಿನ ಗಿರೀಶ್ ಎಂಬಾತನಿಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈತ ಮತ್ತು ಗೋವಾದ ರಾಜೇಶ್ ಜಾಧವ್ ಎಂಬುವವರಿಗೆ ಎರಡು ಕಬ್ಬಿಣದ ಪೆಟ್ಟಿಗೆಗಳಲ್ಲಿ ಎರಡು ಕೋಟಿ ರೂ. ಕೊಡುವುದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಹಣ ಖರ್ಚಾಗುತ್ತದೆ ಎಂದು ಹೇಳಿ ಇಬ್ಬರ ಬಳಿಯೂ ಹಣ ಪಡೆದಿದ್ದಾರೆ. ರಾಜೇಶ್ ಬಳಿ ಖಾಲಿ ಚೆಕ್ ಸಹ ಪಡೆಯಲಾಗಿದೆ. ಆದರೆ, ರಾಜೇಶ್ ನಕಲಿ ಚೆಕ್ ನೀಡಿರುತ್ತಾನೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳು ಕಡಿಮೆ ಬಡ್ಡಿಗೆ ಹಣ ನೀಡುವ ವ್ಯವಹಾರ ಮಾಡುವುದಲ್ಲದೇ ಅವರಿಂದ ಖಾಲಿ ಚೆಕ್ ಪಡೆದು ಹಣ ವಂಚನೆ ಸಹ ಮಾಡುತ್ತಿದ್ದಾರೆ. ಈ ಸಲವೂ ಅದೇ ಸ್ಟ್ರಾಟರ್ಜಿ ಬಳಸಿದ್ದಾರೆ. ಆದರೆ, ದುರಾದೃಷ್ಟವಷಾತ್ ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಇಟ್ಟಿದ್ದ ಪೆಟ್ಟಿಗೆಗಳಲ್ಲಿ ಸ್ಫೋಟಕ ಇರಬಹುದು ಎಂಬ ವಿಚಾರ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದೇ ಪೊಲೀಸರು ಅದರೆಡೆಗೆ ಪೂರ್ಣ ಗಮನಹರಿಸಿದ್ದಾರೆ. ಸಿಸಿ ಕ್ಯಾಮೆರಾ ಜಾಡು ಹಿಡಿದು ಹೊರಟಾಗ ನಸ್ರುಲ್ಲಾ ಮತ್ತು ಜಬಿಉಲ್ಲಾ ಸಿಕ್ಕಿದ್ದಾರೆ.
ಗಿರೀಶ್ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪ
ಗಿರೀಶ್ ಎಂಬಾತನಿಗೆ 1 ಕೋಟಿ ರೂ. ಕೊಡುವುದಾಗಿ ಹೇಳಿ ಆತನಿಂದ 2 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇದೇ ರೀತಿ ತಿಪಟೂರಿನಲ್ಲಿ ವೈದ್ಯರೊಬ್ಬರಿಗೆ ಮೋಸ ಮಾಡಿರುವುದಾಗಿ ಬೆಳಕಿಗೆ ಬಂದಿದೆ ಎಂದು ಎಸ್.ಪಿ ಮಾಹಿತಿ ನೀಡಿದರು.