ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾತ್ಯಾಯಿನಿ ಕೋಂ ದಿ.ಎಲ್.ವಿ. ರಮಾಕಾಂತ್ ಮತ್ತು ಮಕ್ಕಳಾದ ಆರ್.ಭರತ್ ಮತ್ತು ರಚನಾ ಇವರು ವಿಮಾ ಪರಿಹಾರ ನೀಡದ ಪಿಎನ್ಬಿ ಮೆಟ್ಲೈಫ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ.
READ | ನೈರುತ್ಯ ರೈಲ್ವೆ ಸಮಯ ಪ್ರಜ್ಞೆಯಲ್ಲಿ ದೇಶದಲ್ಲೇ ನಂ.2
ದಿ.ವಿ.ರಮಾಕಾಂತ್ ಇವರ ನಿಧನ ನಂತರ ವಿಮಾ ಕಂಪೆನಿ ವಿಮೆ ನೀಡದ ಕಾರಣ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿರುತ್ತದೆ. ದಿ.ವಿ.ರಮಾಕಾಂತ್ ಅವರು 2021ರ ಫೆಬ್ರವರಿಯಲ್ಲಿ ಗೃಹ ನಿರ್ಮಾಣಕ್ಕಾಗಿ ಶಿವಮೊಗ್ಗದ ಸವಳಂಗ ರಸ್ತೆಯ ಕರ್ನಾಟಕ ಬ್ಯಾಂಕ್ನಲ್ಲಿ ₹54,60,000 ಮತ್ತು ಗೋಪಿ ಸರ್ಕಲ್ ಬಳಿಯ ಕರ್ನಾಟಕ ಬ್ಯಾಂಕ್ನಲ್ಲಿ ₹20,00,000 ಗಳನ್ನು ಪ್ರತ್ಯೇಕವಾಗಿ ಸಾಲ ಪಡೆದಿದ್ದು, ಬ್ಯಾಂಕ್ನವರ ಸಲಹೆಯಂತೆ ನೀಡಿರುವ ಸಾಲಗಳಿಗೆ ಗುಂಪು ವಿಮೆ ಪಿಎನ್ಬಿ ವಿಮಾ ಕಂಪೆನಿಯಿಂದ ಪಡೆಯಲಾಗಿತ್ತು. ರಮಾಕಾಂತ್ ನಿಧನ ಪೂರ್ವದಲ್ಲಿ ಮೊದಲ ಸಾಲ ತೀರಿಸಲಾಗಿತ್ತು. ಎರಡನೇ ಸಾಲದಲ್ಲಿ ಸ್ವಲ್ಪ ಮೊತ್ತ ಪಾವತಿಸಿದ್ದರು.
ವಿಮಾ ಕಂಪೆನಿ ಷರತ್ತಿನನ್ವಯ ವಿಮಾ ಮೊತ್ತವನ್ನು ಪಾವತಿಸಿರುವುದಿಲ್ಲ. ಮೃತರು ತಮಗಿದ್ದ ಕ್ಷಯರೋಗದ ಬಗ್ಗೆ ಮಾಹಿತಿ ಮರೆಮಾಚಿದ್ದರೆಂಬ ಕಾರಣ ನೀಡಿ ವಿಮಾ ಕ್ಲೈಂಗಳನ್ನು ಸಂಸ್ಥೆ ನಿರಾಕರಿಸಿತ್ತು.
ಪ್ರಕರಣದ ವಿಚಾರಣೆ ಕೈಗೊಂಡ ಆಯೋಗ
ಆಯೋಗವು ಪ್ರಕರಣಗಳನ್ನು ವಿಚಾರಣೆ ನಡೆಸಿ ರಮಾಕಾಂತ್ ನಿಧನವು ಹೃದಯ ಸಂಬಂಧಿ ಕಾಯಿಲೆಯಿಂದ ಸಂಭವಿಸಿದ್ದು ಎದುರುದಾರ ಇನ್ಶೂರೆನ್ಸ್ ಕಂಪೆನಿ ವಿಮಾ ಪರಿಹಾರ ಒದಗಿಸುವಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ದೃಢಪಟ್ಟಿದೆ ಎಂದು ಅಭಿಪ್ರಾಯಿಸಿದೆ.
ಯಾವುದಕ್ಕೆ ಎಷ್ಟು ದಂಡ?
ಪಿಎನ್ಬಿ ಮೆಟ್ಲೈಫ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ಅನುಕ್ರಮವಾಗಿ ವಿಮಾ ಮೊತ್ತ ₹45,47,675 ಮತ್ತು ₹16,65,815 ಗಳನ್ನು ವಾರ್ಷಿಕ ಶೇ.7 ರಂತೆ ಬಡ್ಡಿ ಸಹಿತವಾಗಿ ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಬೇಕು. ತಪ್ಪಿದಲ್ಲಿ ಪಾವತಿ ದಿನಾಂಕದವರೆಗೆ ವಾರ್ಷಿಕ ಶೇ.10 ರಂತೆ ಬಡ್ಡಿ ಸಹಿತವಾಗಿ ಪಾವತಿಸಬೇಕು. ಹಾಗೂ ವಿಮಾ ನಿರಾಕರಣೆ ಕಾರಣದಿಂದ ಉಂಟಾದ ಮಾನಸಿಕ ಹಿಂಸೆಗೆ ಅನುಕ್ರಮವಾಗಿ ₹50,000 ಮತ್ತು ₹15,000 ಹಾಗೂ ವ್ಯಾಜ್ಯ ವೆಚ್ಚವಾಗಿ ಪ್ರಕರಣವಾರು ತಲಾ ₹10,000 ಗಳನ್ನು ಆದೇಶ ದಿನಾಂಕದಿಂದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ಪಾವತಿ ದಿನಾಂಕದವರೆಗೆ ವಾರ್ಷಿಕ ಶೇ.7 ರಂತೆ ಬಡ್ಡಿ ಸಹಿತವಾಗಿ ಪಾವತಿಸಲು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಆದೇಶಿಸಿದೆ.