ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸೈನ್ಸ್ ಮೈದಾನದಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 1000 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
READ | ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನೆರಡು ನಾನ್ ಏಸಿ ಬಸ್ ಆರಂಭ, ಯಾವ ಮಾರ್ಗದಲ್ಲಿ ಸಂಚಾರ, ಯಾವಾಗಿಂದ ಸೇವೆ ಲಭ್ಯ?
ಮೇಳದಲ್ಲಿ ಒಟ್ಟು 5738 ಅಭ್ಯರ್ಥಿಗಳು ನೋಂದಣಿಯಾಗಿದ್ದು, 3756 ಅಭ್ಯರ್ಥಿಗಳು ಹಾಜರಾಗಿರುತ್ತಾರೆ. ಪ್ರಸ್ತುತ 78 ಅಭ್ಯರ್ಥಿಗಳ ಆದೇಶಪತ್ರ ಸಿದ್ದವಾಗಿದ್ದು, ಸಚಿವರು 20 ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರವನ್ನು ವಿತರಿಸಿದರು. 767 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಆಗಿದ್ದು, ಸುಮಾರು 1000 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ.
40 ಲಕ್ಷಕ್ಕೂ ಹೆಚ್ಚು ಜನರು ಇಂಜಿನಿಯರಿಂಗ್ ಕೋರ್ಸ್ ಮುಗಿಸಿ ಮುಂದೇನು ಮಾಡಬೇಕೆಂಬ ಯೋಚನೆ ಮಾಡಬೇಕಾದ ಸ್ಥಿತಿ ನಮ್ಮಲ್ಲಿದೆ. ಹಿಂದೆಲ್ಲ ಇಂಜಿನಿಯರಿಂಗ್ ಮತ್ತು ಡಾಕ್ಟರ್ ಕೋರ್ಸ್ ಗೆ ಮಾತ್ರ ಹೆಚ್ಚಿನ ಮಾನ್ಯತೆ ಇತ್ತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಯಲ್ಲಿ ಕೌಶಲ್ಯವನ್ನು ಅಭಿವೃದ್ದಿ ಪಡಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅನೇಕ ಅವಕಾಶಗಳು ತೆರೆಯಲ್ಪಟ್ಟಿವೆ. ರಾಜ್ಯ ಸರ್ಕಾರದಿಂದ ಯಶಸ್ವಿ ಉದ್ಯೋಗ ಮೇಳಗಳು ಜರುಗುತ್ತಿವೆ. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಾರೆ. ಶಿವಮೊಗ್ಗದಲ್ಲಿಯೇ ಇವರಿಗೆ ಉದ್ಯೋಗ ನೀಡುವಂತಹ, ಸೇವಾ ನಿಲುವುಳ್ಳ ಕಂಪನೆಗಳು ಬರಬೇಕು.
– ಡಿ.ಎಸ್. ಅರುಣ್, ವಿಧಾನ ಪರಿಷತ್ ಸದಸ್ಯ
ಜನವರಿಯಿಂದ ಯುವನಿಧಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ (Madhu S. Bangarappa) ಮಾತನಾಡಿ, ಓದು ಮುಗಿಸಿ, ತಕ್ಷಣ ಕೆಲಸ ಸಿಗದೆ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಜನವರಿಯಿಂದ ಇದನ್ನು ಜಾರಿಗೆ ತರಲಾಗುವುದು. ಡಿಪೆÇ್ಲಮಾ ಮುಗಿಸಿದವರಿಗೆ 1500 ರೂ. ಹಾಗೂ ಪದವಿ ಮುಗಿಸಿದವರಿಗೆ 3000 ರೂ. ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.
80 ಕಂಪನಿಗಳು ಭಾಗಿ
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶಕ ನಾಗೇಂದ್ರ ಎಫ್.ಹೊನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೌಶಲ್ಯ ಅಭಿವೃದ್ದಿ ಪಡಿಸುವ ಸಲುವಾಗಿ ರಾಜ್ಯದಲ್ಲಿ 275 ಐಟಿಐಗಳು, ಜಿಟಿಟಿಸಿ, ಡಿಪೆÇ್ಲಮಾ, ಪಾಲಿಟೆಕ್ನಿಕ್ ಕಾಲೇಜುಗಳು ಇವೆ. ಕೌಶಲ್ಯವಿದ್ದರೆ ಸ್ವಂತ ಉದ್ಯೋಗ ಸಹ ಮಾಡಬಹುದು. ಇಂದಿನ ಉದ್ಯೋಗ ಮೇಳದಲ್ಲಿ ಸುಮಾರು 82 ಕಂಪನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು 10 ಸಾವಿರ ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಸರ್ಕಾರ ಹೊಸ ತಂತ್ರಜ್ಞಾನ ಹೊಂದಿರುವ ಉನ್ನತ ಮಟ್ಟದ ತರಬೇತಿಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಕೌಶಲ್ಯಾಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಸುರೇಶ್ ಇತರರು ಉಪಸ್ಥಿತರಿದ್ದರು. ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ ಸ್ವಾಗತಿಸಿದರು.