ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಫೆ.13 ಇಲ್ಲವೇ 14ರಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ವೇಳೆ ಕೆಎಫ್ಡಿ (kyasanur forest disease) ನಿಯಂತ್ರಣದ ಬಗ್ಗೆ ಚರ್ಚಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.
READ | ಇಡೀ ಮೀನು ನುಂಗಿದ 11 ತಿಂಗಳ ಮಗು, ಮುಂದೇನಾಯ್ತು?
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮಂಗನ ಕಾಯಿಲೆ (ಕೆಎಫ್ಡಿ) ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದುವರೆಗೆ ಕೆಎಫ್ಡಿಯಿಂದ ಮರಣ ಹೊಂದಿದವರಿಗೆ ಯಾವುದೇ ರೀತಿಯ ಸಹಾಯ/ ಪರಿಹಾರ ಇರುವುದಿಲ್ಲ. ಫೆ.12 ರಿಂದ ಆರಂಭವಾಗುವ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಬಾಧಿತ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಮನೆ ಮನೆ ಭೇಟಿ ನೀಡಿ ಜ್ವರ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಪ್ರತಿ ಗ್ರಾ.ಪಂ ಗಳಲ್ಲಿ, ಬಸ್ನಿಲ್ದಾಣಗಳಲ್ಲಿ ಜನರಿಗೆ ಕಾಣುವಂತಹ ಕೆಎಫ್ಡಿ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ಗಳನ್ನು ಅಂಟಿಸುವುದು, ಕರಪತ್ರಗಳನ್ನು ನೀಡುವ ಕೆಲಸ ಶೀಘ್ರದಲ್ಲೇ ಆಗಬೇಕು. ಈ ಪ್ರದೇಶದ ಜನರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕು.
– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಶೀಘ್ರ ಚಿಕಿತ್ಸೆ ಪಡೆಯಲು ಕೋರಿಕೆ
ಮಂಗನ ಕಾಯಿಲೆ ಬಾಧಿತ ಪ್ರದೇಶದ ಜನರು ಜ್ವರದಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೇ, ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು. ಕಾಯಿಲೆ ಬಗ್ಗೆ ಗಾಬರಿಯಾಗುವುದು ಬೇಡ. ಆದರೆ ಜ್ವರ, ತಲೆನೋವು, ಸ್ನಾಯುಗಳ ನೋವು ಇತ್ಯಾದಿ ಲಕ್ಷಣ ಕಾಣಿಸಿಕೊಂಡಾಗ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲೇ ರೋಗ ಲಕ್ಷಣಗಳಿಗೆ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದರು.
ಮಂಗಗಳ ಅಸಹಜ ಸಾವು, ಎಚ್ಚರಿಕೆ ಕರೆಗಂಟೆ
ಡಿಎಚ್ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಮಂಗನ ಕಾಯಿಲೆ ವೈರಾಣು ಸೋಂಕಿನ ನಿಂಫ್ ಹಂತದಲ್ಲಿರುವ ಉಣ್ಣೆಗಳು ಕಚ್ಚುವುದರಿಂದ ಹರಡುತ್ತದೆ. ಮಂಗನ ಅಸ್ವಾಭಾವಿಕ ಸಾವು ಮಂಗನ ಕಾಯಿಲೆಯ ಕುರಿತಾದ ಎಚ್ಚರಿಕೆ ಗಂಟೆ. ನಂತರ ಮನುಷ್ಯರಿಗೆ ಬರುತ್ತದೆ. ಜ್ವರ, ತಲೆನೋವು ಇತರೆ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬರಬೇಕು. ಇದು ಮೊದಲನೇ ಹಂತ. ಈ ಹಂತದಲ್ಲಿ ಸೋಂಕನ್ನು ಗುಣಪಡಿಸಬಹುದು. ಎರಡನೇ ಹಂತದಲ್ಲಿ ಫಿಟ್ಸ್, ನರಸಂಬಂಧಿ ಸಮಸ್ಯೆ, ರಕ್ತಸ್ರಾವ ಉಂಟಾಗುತ್ತದೆ.
ಅರಣ್ಯ ಭಾಗದಲ್ಲಿ ಇರುವವರೆಲ್ಲ ಸರ್ಕಾರಿ ಆಸ್ಪತ್ರೆಗಳಿಂದ ನೀಡಲಾಗುವ ಡಿಇಪಿಎ (DEPA) ತೈಲವನ್ನು ಹಚ್ಚಿಕೊಳ್ಳಬೇಕು. 2022 ರವರೆಗೆ ಕೆಎಫ್ಡಿ ನಿಯಂತ್ರಣ ಲಸಿಕೆ ಇತ್ತು. ಇದೀಗ ಹೊಸ ಲಸಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ ಎಂದರು.
ಕೆಎಫ್ಡಿ ಬಾಧಿತರಿಗೆ ಉಚಿತ ಚಿಕಿತ್ಸೆ
ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆ 25 ಪಾಸಿಟಿವ್ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಕೆಎಫ್ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗುತ್ತಿದೆ. ಹಾಗೂ ಎಬಿಎಆರ್.ಕೆ ಅಡಿಯಲ್ಲಿ ಎಂಪಾನೆಲ್ ಆದ ಖಾಸಗಿ ಆಸ್ಪತ್ರೆಯಲ್ಲಿ ಕೆಎಫ್ಡಿ ಬಾಧಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎರಡ್ಮೂರು ತಿಂಗಳು ಆರೋಗ್ಯ ಸೇವೆ ನೀಡಿ
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೆಎಫ್ಡಿಗೆ ಲಸಿಕೆ ಅತ್ಯಗತ್ಯವಾಗಿ ಬೇಕು. ಮುಂದೆ ಉಷ್ಣತೆ ಹೆಚ್ಚುತ್ತಿದ್ದಂತೆ ಸೋಂಕು ಹೆಚ್ಚುತ್ತದೆ. ಅದನ್ನು ಊಹಿಸಲೂ ಕಷ್ಟ. ಮಲೆನಾಡು ಭಾಗದಲ್ಲಿ ಕೆಎಫ್ಡಿ ಬಗ್ಗೆ ಕೋವಿಡ್ಗಿಂತ ಹೆಚ್ಚು ಭಯ ಇದೆ. ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಲಸಿಕೆ ನೀಡಬೇಕು. ಸಕ್ರಿಯ ಸಮೀಕ್ಷೆ ನಡೆಯಬೇಕು. ದೂರದ ಮಲೆನಾಡಿನ ಹಳ್ಳಿಗಾಡಿನ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಹಾಗೂ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದ ಅವರು ಬಾಧಿತ ಪ್ರದೇಶಗಳಲ್ಲಿ ಇನ್ನು 2-3 ತಿಂಗಳು ಕಾಲ ಆಂಬುಲೆನ್ಸ್/ ಮೊಬೈಲ್ ವಾಹನ ಸೇವೆಯನ್ನು ಒದಗಿಸಿ, ಜ್ವರದಂತಹ ಪ್ರಕರಣಗಳನ್ನು ಶೀಘ್ರವಾಗಿ ಉಪಚರಿಸಲು ಅನುಕೂಲ ಮಾಡಿಕೊಡಬೇಕೆಂದರು.
ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಿಡಿಎಲ್ ಅಧಿಕಾರಿ ಡಾ.ಹರ್ಷವರ್ಧನ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.