ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿಗರಿಗೆ ಹಲವು ದಶಕಗಳಿಂದ ಕಾಡುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್’ಡಿ)ಗೆ ಶೀಘ್ರವೇ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಣದೀಪ್ ಹೇಳಿದರು.
ಶನಿವಾರ ನಡೆದ ಕೆಎಫ್ ಡಿ ಕುರಿತು ಡಿಎಚ್ಓ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಲಸಿಕೆ ತಯಾರಿಕೆಗೆ ಕಂಪನಿಯೊಂದು ಮುಂದೆ ಬಂದಿದ್ದು, ಮುಂದಿನ ಸೀಸನ್ ನಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದರು.
READ | ಕದ್ದ ಆರೋಪಿ ನಾಲ್ಕು ಗಂಟೆಯಲ್ಲೇ ಅರೆಸ್ಟ್
ಪೂರ್ಣ ಪ್ರಮಾಣದಲ್ಲಿ ಕೆಎಫ್.ಡಿ ಪರೀಕ್ಷೆ
ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್ ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ಕೈಗೊಳ್ಳುವಂತೆ ರಣದೀಪ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದುವರೆಗೆ 49 ಪಾಸಿಟಿವ್
ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಜ.1 ರಿಂದ ಫೆ.2 ರವರೆಗೆ ರಾಜ್ಯದಲ್ಲಿ ಒಟ್ಟು 2288 ಕೆಎಫ್ ಡಿ ಪರೀಕ್ಷೆ ನಡೆಸಲಾಗಿದ್ದು ಶಿವಮೊಗ್ಗ ದಲ್ಲಿ 12, ಉತ್ತರ ಕನ್ನಡ 34 ಹಾಗೂ ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದು ಮರಣ ಸಂಭವಿಸಿದೆ.
ಕೆಎಫ್ ಡಿ ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿ ಯಿಂದ ಮಾರ್ಚ್ ವರೆಗೆ ಇದ್ದು ಈ ವೇಳೆ ತಾಲೂಕು ಆಸ್ಪತ್ರೆಗಳಾದ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ಸೋಂಕಿತರಿಗೆ ಎಬಿಎಆರ್’ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರಿಗೆ ಸೂಚಿಸಿದರಲ್ಲದೆ ಜನರಲ್ಲಿ ಕಾಯಿಲೆ ಕುರಿತು ಅರಿವು ಹೆಚ್ಚಿಸಲು ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿದರು.
ಡೆಪಾ ತೈಲ ಲೇಪಿಸಿಕೊಳ್ಳಬೇಕು
ಮಂಗನ ಕಾಯಿಲೆ ವೈರಾಣು ಸೋಂಕಿತ ಉಣ್ಣಿ ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದ್ದು ಜನರು ಕಾಡಿಗೆ ಹೋಗುವ ಮುನ್ನ ಸರ್ಕಾರದ ವತಿಯಿಂದ ನೀಡಲಾಗುವ ಡಿಇಪಿಎ (ಡೆಪಾ) ತೈಲವನ್ನು ಲೇಪಿಸಿಕೊಂಡು ಹೋಗಲು ಸೂಚನೆ ನೀಡಬೇಕು. ಪ್ರಸ್ತುತ ಜಿಲ್ಲೆಯಲ್ಲಿ 50 ಸಾವಿರ ಬಾಟಲ್ ಲಭ್ಯವಿದೆ. ವಿತರಕರ ಬಳಿ ಇರುವುದುಸೇರಿ ಒಟ್ಟು 80 ಸಾವಿರ ದಾಸ್ತಾನಿದೆ. ಒಂದು ಕುಟುಂಬಕ್ಕೆ ತಿಂಗಳಿಗೆ 4 ಬಾಟಲಿ ನೀಡುವಂತೆ ತಿಳಿಸಿದರು.
ಸಾರ್ವಜನಿಕರು ರಾಜ್ಯ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವುದು, ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ ಲಭ್ಯತೆ, ಉನ್ನತ ರೆಫರಲ್ ಸೆಂಟರ್ ಗೆ ಸಾಗಿಸಲು ಆಂಬುಲೆನ್ಸ್ ಸೌಲಭ್ಯ ಒದಗಿಸುವಂತೆ ಸೂಚಿಸಿದರು.
ಟೆಲಿ ಐಸಿಯು ವ್ಯವಸ್ಥೆ
ಟೆಲಿ ಐಸಿಯು ವ್ಯವಸ್ಥೆಯಲ್ಲಿ ತಜ್ಞ ವೈದ್ಯರ ತಂಡವಿದ್ದು ಶೀಘ್ರದಲ್ಲೇ ಅದರ ಉಪಯೋಗವನ್ನು ಈ ಕಾಯಿಲೆಗೂ ನೀಡಲಾಗುವುದು. ಕೆಎಫ್.ಡಿ ಹೊಸ ಲಸಿಕೆ ಪ್ರಕ್ರಿಯೆಯಲ್ಲಿದ್ದು ಮುಂದಿನ ಅವಧಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದರು.
ಸಭೆಯಲ್ಲಿ ಉತ್ತರ ಕನ್ನಡ ಡಿಎಚ್ ಒ, ಶಿರಸಿಯಲ್ಲಿ ಕೆಎಫ್ ಡಿ ಪರೀಕ್ಷೆ ನಡೆಸಲು ಒಂದು ಪ್ರಯೋಗಾಲಯ ಸ್ಥಾಪಿಸುವಂತೆ ಮನವಿ ಮಾಡಿದರು.
ಸಭೆಗೂ ಮುನ್ನ ಆಯುಕ್ತರು ವೈರಸ್ ಡಯಾಗ್ನಸ್ಟಿಕ್ ಲ್ಯಾಬ್(ವಿಡಿಎಲ್) ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ, ಸಿಬ್ಬಂದಿ ಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಪುಷ್ಪಲತಾ, ಸಿಎಂಡಿ ಜಂಟಿ ನಿರ್ದೇಶಕರಾದ ಡಾ.ತ್ರಿವೇಣಿ, ವಿಡಿಎಲ್ ಉಪ ನಿರ್ದೇಶಕ ಡಾ.ರಘುನಂದನ್, ಡಿಹೆಚ್ಒ ಡಾ.ರಾಜೇಶ್ ಸುರಗಿಹಳ್ಳಿ, ವಿಡಿಎಲ್ ಡಿಸಿಎಂಒ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.