ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ಶಿಕಾರಿಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದ ಹನುಮಂತ್ ನಾಯ್ಕ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಶಿಕಾರಿಪುರ ಗ್ರಾಮಾಂತರ ಪೊಲೀಸರು ಬರೀ ನಾಲ್ಕು ಗಂಟೆಯಲ್ಲಿ ಬಂಧಿಸಿ, ಭೇಷ್ ಎನಿಸಿಕೊಂಡಿದ್ದಾರೆ.
READ | ಬೃಹತ್ ಉದ್ಯೋಗ ಮೇಳ, ಯಾರೆಲ್ಲ ಪಾಲ್ಗೊಳ್ಳಬಹುದು?
ಆರೋಪಿ ನ್ಯಾಮತಿಯ ಚೀಲೂರು ಕೆಂಗಟ್ಟೆ ಗ್ರಾಮ ನಿವಾಸಿ ಆಕಾಶ್ (18) ಎಂಬಾತನನ್ನು ಬಂಧಿಸಿ ಆತನ ಬಳಿಯಿಂದ ₹2 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ಹನುಂತ ನಾಯ್ಕ್ ಅವರು ಜನವರಿ 29ರ ಬೆಳಗ್ಗೆ ಮನೆಗೆ ಬೀಗವನ್ನು ಹಾಕಿ ಬೀಗದ ಕೀಯನ್ನು ಮನೆಯ ಮೇಲ್ಗಡೆ ಮೊಳೆಯಲ್ಲಿ ನೇತು ಹಾಕಿ ಶಿಕಾರಿಪುರದ ಆಸ್ಪತ್ರೆಗೆ ಹೋಗಿದ್ದರು. ಆ ಸಮಯದಲ್ಲಿ ಮನೆಯ ಕೀಯನ್ನು ಬಳಸಿ ಬೀರುವುನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣ ಆರೋಪಿ ಮತ್ತು ಕಳವಾದ ನಗದು ಹಣದ ಪತ್ತೆಗಾಗಿ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮಾರಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶನದಲ್ಲಿ ಶಿಕಾರಿಪುರ ಉಪ ವಿಭಾಗ ಡಿವೈಎಸ್.ಪಿ ಶಿವಾನಂದ ಎಂ. ಮದರಖಂಡಿ ಮೇಲ್ವಿಚಾರಣೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ಪಿ.ಎಸ್.ಐ ಎನ್.ವೈ.ಓಲೇಕರ್, ಮಂಜುನಾಥ್, ತೋಟಪ್ಪ, ನಾಗರಾಜ್, ಲಕ್ಷ್ಮಿಬಾಯಿ, ಪ್ರಶಾಂತ್, ಹಜರತ್ ಅಲಿ, ಶ್ರೀಶಂಕರ ನಾಯ್ಕ್ ವಿಜಯಕುಮಾರ್ ಅವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಮೂರು ಜನರ ಬಂಧನ
HOSANAGAR: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಗೊಪ್ಪ ನೂಲಿಗರೆ ಗ್ರಾಮದ ರಾಜಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಗಳನ್ನು ಬಂಧಿಸಲಾಗಿದೆ.
ಹೊಸನಗರ ತಾಲೂಕು ನೂಲಿಗೆರೆ ಮೂಡುಗೊಪ್ಪ ಗ್ರಾಮದ ಸುಹಾನ್ ಅಲಿಯಾಸ್ ಸೋನು(21), ಎನ್.ಎಸ್.ಅಶೋಕ್ (24), ಎನ್.ಎಲ್. ಗಣೇಶ್ ಅಲಿಯಾಸ್ ಗಣಿ (30) ಬಂಧಿತ ಆರೋಪಿಗಳು. ಅಂದಾಜು ₹4.65 ಲಕ್ಷ ಮೌಲ್ಯದ 94 ಗ್ರಾಂ ಬಂಗಾರದ ಆಭರಣಗಳು ಮತ್ತು ಒಂದು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.
ಹೆಂಚು ಕಿತ್ತು ಕಳ್ಳತನ
ಜ.29ರಂದು ರಾತ್ರಿ ಮನೆಯ ಹೆಂಚನ್ನು ಕಿತ್ತು, ಬಾಗಿಲಿನ ಬೀಗ ಒಡೆದು, ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಗಳನ್ನು ಬಂಧಿಸಿದ್ದಾರೆ.
ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ ಹೊಸನಗರ ವೃತ್ತ ಸಿಪಿಐ ಗುರಣ್ಣ ಹೆಬ್ಬಾಳ್ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆ ಪಿ.ಎಸ್.ಐ ರಮೇಶ್, ಸಿಬ್ಬಂದಿ ವೆಂಕಟೇಶ್, ಪ್ರವೀಣ್ ಕುಮಾರ್, ಕಿರಣ್ ಕುಮಾರ್, ವಿಶ್ವನಾಥ್, ಶಾಂತಪ್ಪ ಅವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.