ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಪಟ್ಟಿ ಬಿಡಿಗಡೆ ಮೂಲಕ ಉತ್ತರಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಮಾತನಾಡಿದರು.
READ | ರಾಜಕೀಯ ವಲಯದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಸಂಚಲನ, ಏನದು?
ಶಿವರಾತ್ರಿಯಂದೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶಿವಮೊಗ್ಗ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಕೈ ಹುರಿಯಾಳುಗಳ ಹೆಸರು ಬಹಿರಂಗ ಪಡೆಸಿದ್ದಾರೆ.
ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್
ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯ ಮುಖಂಡ, ಸೊರಬ ಮಾಜಿ ಶಾಸಕ ಕುಮಾರ್ ಬಂಗಾರಪ್ಪ (Kumar Bangarappa) ಅವರ ಹೆಸರು ಚರ್ಚೆಯಲ್ಲಿತ್ತು. ಇತ್ತೀಚೆಗೆ ಬಿಜೆಪಿಯ ಕಾರ್ಯಕ್ರಮಗಳಿಗೂ ಅವರು ಬಾರದ ಕಾರಣದಿಂದ ಅವರು ಕಾಂಗ್ರೆಸ್ ಸೇರಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸಾಗಿತ್ತು.
ಗೀತಾ ಶಿವರಾಜಕುಮಾರ್ ಅವರ ಪರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ (Madhu bangarappa) ಫೀಲ್ಡಿಗಿಳಿದು ಟಿಕೆಟ್ ಗಾಗಿ ಪ್ರಯಾಸ ನಡೆಸುತ್ತಿದ್ದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿಯೂ ಆಗಿರುವುದರಿಂದ ಅವರ ಮಾತಿಗೆ ಕಾಂಗ್ರೆಸ್ ಮನ್ನಣೆ ನೀಡಿದಂತಾಗಿದೆ. ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿ ಹಾಗೂ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜಕುಮಾರ್ ಸ್ಪರ್ಧೆಗಿಳಿಯುವುದು ಖಚಿತವಾಗಿದೆ.
ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
ಹಾವೇರಿಯಿಂದ ಅನಂತ ಸ್ವಾಮಿ ಗಡ್ಡೇವರಮಠ, ವಿಜಯಪುರದಿಂದ ಎಸ್.ಆರ್.ಅಲಗೂರ, ತುಮಕೂರಿನಿಂದ ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಾಮೇಗೌಡ, ಬೆಂಗಳೂರು ರೂರಲ್ ನಿಂದ ಡಿಕೆ ಸುರೇಶ್, ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್ ಹಾಗೂ ಹಾಸನದಿಂದ ಶ್ರೇಯಸ್ ಪಟೇಲ್ ಸ್ಪರ್ಧಿಸಲಿದ್ದಾರೆ.
ಕೆಲವೆಡೆ ಟಿಕೆಟ್ ಘೋಷಣೆ ಮುಂದೂಡಿಕೆ!
ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಬಿ.ಎನ್. ಚಂದ್ರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಮೊದಲನೇ ಪಟ್ಟಿಯಲ್ಲಿ ಅವರ ಹೆಸರು ಘೋಷಣೆ ಮಾಡಿಲ್ಲ. ಅದೇ ರೀತಿ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ್ ಹೆಗಡೆ ಹೆಸರು ಪ್ರಕಟವಾಗಬಹುದೆಂಬ ನಿರೀಕ್ಷೆ ಇತ್ತು. ಅದನ್ನೂ ಪ್ರಕಟಿಸಿಲ್ಲ. ಹೀಗಾಗಿ, ಟಿಕೆಟ್ ಕುತೂಹಲ ಮುಂದುವರಿದಿದೆ. ಘೋಷಣೆ ಆಗದ ಸಾಕಷ್ಟು ಕ್ಷೇತ್ರಗಳಿದ್ದು, ಅಲ್ಲಿ ಯಾರಿಗೆ ಹೈಕಮಾಂಡ್ ಗುರುತಿಸಲಿದೆ ಎಂಬ ಪ್ರಶ್ನೆ ಮೂಡಿದೆ. ಶೀಘ್ರದಲ್ಲೇ ಅದಕ್ಕೂ ಉತ್ತರ ಸಿಗುವ ಸಾಧ್ಯತೆ ಇದೆ.