ಸುದ್ದಿ ಕಣಜ.ಕಾಂ ಸಾಗರ
SAGAR: ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಇಬ್ಬರು ಸಿಬ್ಬಂದಿ ಶಿವಮೊಗ್ಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅವರು ₹30 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದು, ಬಂಧಿಸಲಾಗಿದೆ.
ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಕಾಶ್ ಕುಮಾರ್, ಅಕೌಂಟ್ ಅಸಿಸ್ಟೆಂಟ್ ಜಿ.ಆರ್.ಗಿರೀಶ್ ಬಂಧಿತರು. ಇವರು ಶಿವಮೊಗ್ಗದ ವಿದ್ಯಾನಗರ ನಿವಾಸಿ ಕ್ಲಾಸ್ 1 ಗುತ್ತಿಗೆದಾರ ಸುನೀಲ್ ಎಂಬಾತನದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಏನಿದು ಪ್ರಕರಣ, ದೂರುದಾರರ ಆರೋಪಗಳೇನು?
ಚಿತ್ರದುರ್ಗದ ಹಿರಿಯೂರಿನ ಕೆವಿಕೆ ಬಬ್ಬೂರ್ ಫಾರ್ಮ್ನ ಆಡಳಿತ ವಿಭಾಗದ ಕಚೇರಿ ಮೇಲ್ಚಾವಣಿ ನಿರ್ಮಾಣಕ್ಕೆ ₹4.23 ಲಕ್ಷಕ್ಕೆ ಟೆಂಡರ್ ಕರೆಯಲಾಗಿತ್ತು. ಸುನೀಲ್ ₹3.59 ಲಕ್ಷಕ್ಕೆ ಟೆಂಡರ್ ಪಡೆದಿದ್ದ. ಮಾರ್ಚ್ 4ರಂದು ಕಾಮಗಾರಿ ಪೂರ್ಣಗೊಂಡಿದ್ದು, ₹63,946 ಎಫ್.ಡಿ. ಹಣ ವಾಪಸ್ ನೀಡಬೇಕಾದರೆ ₹40 ಸಾವಿರ ಲಂಚ ನೀಡುವಂತೆ ಲೋಹಿತ್ ಬೇಡಿಕೆ ಇಟ್ಟಿದ್ದ. ಏ.13ರಂದು ಎಫ್.ಡಿಹಣ ಕೇಳಲು ವಿವಿಗೆ ಹೋದಾಗ ಲೋಹಿತ್ ಅವರು ಲಂಚದ ಹಣವನ್ನು ಗಿರೀಶ್ ಗೆ ನೀಡುವಂತೆ ತಿಳಿಸಿದ್ದರು ಎಂದು ಸುನೀಲ್ ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.
ಸೋಮವಾರ ಹಣ ₹30 ಸಾವಿರ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.