ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ವಿರುದ್ಧ ಜಯಶಾಲಿಯಾಗಲು ಸಮೂಹ ಪ್ರಯತ್ನ ಅಗತ್ಯ. ಜತೆಗೆ ವೈದ್ಯರ ನೀಡುವ ಔಷಧಗಳನ್ನು ಚಾಚೂತಪ್ಪದೆ ಸೇವಿಸಬೇಕು. ಔಷಧ ಹಾಗೂ ಚಿಕಿತ್ಸೆಯ ಪೂರ್ಣ ವಿಶ್ವಾಸ ಇರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಆರೋಗ್ಯಾಧಿಕಾರಿ ಡಾ. ಎಂ. ಎಸ್ ಬಸವರಾಜ್ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಕೋವಿಡ್-19 ಕುರಿತು ಸೋಮವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ನೈಸರ್ಗಿಕ ವಿಕೋಪಗಳು, ಹವಾಮಾನ ವೈಪರೀತ್ಯ ಮತ್ತು ಬದಲಾಗುತ್ತಿರುವ ಆಹಾರ ಕ್ರಮಗಳಿಂದಾಗಿ ಹೊಸ ರೀತಿಯ ವೈರಸ್ಗಳು, ಹಿಂದೆಂದೂ ಕಂಡು ಕೇಳರಿಯದ ರೋಗಗಳು ಬೆಳಕಿಗೆ ಬರುತ್ತಲಿವೆ. ಇಂತಹ ವೈದ್ಯಕೀಯ ಸವಾಲುಗಳನ್ನು ಎದುರಿಸಲು ಸರ್ಕಾರ, ವೈದ್ಯಕೀಯ ಕ್ಷೇತ್ರದ ಪರಿಣಿತರು ಮತ್ತು ಸಂಶೋಧಕರ ಸಮಷ್ಟಿ ಪ್ರಯತ್ನ ಮಾಡಬೇಕು. ಜನರಲ್ಲಿ ರೋಗ ನಿರೋಧಕತೆ ಶಕ್ತಿ ಹೆಚ್ಚಳಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ.ಬಿ.ಪಿ.ವೀರಭಧ್ರಪ್ಪ ಮಾತನಾಡಿದರು. ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್, ಡಾ.ಡಿ.ಎಂ. ಪಲ್ಲವಿ, ಡಾ. ಎಂ.ವಿ.ಮಧುಸೂದನ್, ಡಾ. ಬಿ. ತಿಪ್ಪೇಸ್ವಾಮಿ, ಡಾ. ಎನ್. ಬಿ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.