ಸುದ್ದಿ ಕಣಜ.ಕಾಂ | SPECIAL STORY | ISSURU
ಶಿವಮೊಗ್ಗ: ‘ಈಸೂರು‘ ಹೆಸರೇ ಕೇಳಿದರೆ ಮೈ ರೋಮಾಂಚನ ಆಗುತ್ತದೆ. ದೇಶಭಕ್ತಿಯ ಚಿಲುಮೆ ಪುಟಿದೇಳುತ್ತದೆ. ತಾನೂ ದೇಶಕ್ಕಾಗಿ ಏನಾದರೂ ಮಾಡಿ ಮಡಿಯಬೇಕು ಎಂಬ ಹುಮ್ಮಸ್ಸು ಆವರಿಸಿಕೊಳ್ಳುತ್ತದೆ.
ಸಾಮ್ರಾಜ್ಯ ಶಾಹಿಗಳ ಮೇಲೆ ಪುಟ್ಟದೊಂದು ಗ್ರಾಮ ಸಿಡಿದೇಳುವುದು ಎಂದರೆ ಸಾಮಾನ್ಯವೇ? ಬ್ರಿಟಿಷರು ತಮ್ಮ ಕಪಟ ನೀತಿಗಳಿಂದ ಭಾರತವನ್ನು ಆಳಿ, ಮಹಾ ಸಾಮ್ರಾಜ್ಯಗಳನ್ನೇ ಉರುಳಿಸಿದ್ದರು. ಅಂತಹ ದೈತ್ಯ ಶಕ್ತಿಯ ಮುಂದೆ ಸೆಟೆದೆದ್ದು ನಿಂತಿದ್ದು ಈ ‘ಈಸೂರು’.
https://www.suddikanaja.com/2021/03/06/issuru-dange-dead/
ಗಾಂಧೀಜಿ ಅವರು 1942ರಲ್ಲಿ ಕರೆ ನೀಡಿದ್ದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ದೊಡ್ಡ ದನಿಯಾಗುತಿದ್ದಂತೆ ಇಡೀ ಗ್ರಾಮವೇ ಒಂದಾಗಿ ನಿಂತು ಬ್ರಿಟಿಷರ ವಿರುದ್ಧ ತೊಡೆ ತಟ್ಟಿತು. ಕಂದಾಯ ನೀಡಲು ನಿರಾಕರಿಸಿತು. ಇದು ಬ್ರಿಟಿಷ್ ಅಧಿಕಾರಿಗಳ ಕಣ್ಣು ಕೆಂಪಾಗುವಂತೆ ಮಾಡಿತು.
‘ಏಸೂರು ಕೊಟ್ಟರೂ ಈಸೂರು ಬಿಡೆವು’ ಘೋಷಣೆ ಮೊಳಗಿತು. 1942 ಸೆಪ್ಟೆಂಬರ್ 26ರಂದು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮೇಲೆ ಪ್ರತ್ಯೇಕ ತ್ರಿವರ್ಣ ಧ್ವಜ ಹಾರಿಸಿ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡರು. 12 ವರ್ಷದ ಮಲ್ಲಪ್ಪ ಅವರನ್ನು ಸರ್ವಾಧಿಕಾರಿ ಹಾಗೂ 10 ವರ್ಷದ ಜಯಪ್ಪ ಅವರನ್ನು ಅಮಲ್ದಾರರಾಗಿ ಆಯ್ಕೆ ಮಾಡಲಾಯಿತು. ಪ್ರತ್ಯೇಕ ಸ್ವತಂತ್ರ ಸರ್ಕಾರ ರಚಿಸಿಕೊಂಡ ವ್ಯವಸ್ಥೆಯಿಂದ ಬ್ರಿಟಿಷರು ಕೆಂಡಾಮಂಡಲವಾದರು. ಗ್ರಾಮಕ್ಕೆ ಬ್ರಿಟಿಷ್ ಅಧಿಕಾರಿಗಳನ್ನು ಕಳುಹಿಸಿಕೊಡಲಾಯಿತು.
READ | ಈಸೂರು ಸ್ಮಾರಕಕ್ಕೆ ಹೈಟೆಕ್ ಟಚ್, ಏನೇನಿರಲಿದೆ ಇಲ್ಲಿ, ಇಲ್ಲಿದೆ ಪೂರ್ಣ ಮಾಹಿತಿ
ಸ್ವಾಭಿಮಾನದ ಪ್ರತೀಕವಾಗಿದ್ದ ಗ್ರಾಮದ ಮೇಲೆ ಬ್ರಿಟಿಷರ ದಾಳಿ
ಗ್ರಾಮಕ್ಕೆ ಆಗಮಿಸಿದ ಬ್ರಿಟಿಷ್ ಅಧಿಕಾರಿಗಳಿಗೆ ಖಾದಿ ಟೋಪಿ ಧರಿಸುವಂತೆ ಗ್ರಾಮಸ್ಥರು ಆಜ್ಞೆ ನೀಡುತ್ತಾರೆ. ಇದರಿಂದ ಕುಪಿತಗೊಂಡ ಪೊಲೀಸರು ಗ್ರಾಮಸ್ಥರ ಮೇಲೆ ಹಲ್ಲೆ ಮಾಡುತ್ತಾರೆ. ಅಲ್ಲಿಯವರೆಗೆ ಶಾಂತಿಯುತವಾಗಿದ್ದ ಈಸೂರಿನಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿಕೊಳ್ಳುತ್ತದೆ. ಇನ್ ಸ್ಪೆಕ್ಟರ್ ಕೆಂಚನಗೌಡ ಮತ್ತು ಅಮಲ್ದಾರ್ ಚನ್ನಕೃಷ್ಣಪ್ಪ ಅವರ ಕೊಲೆ ಮಾಡಲಾಗುತ್ತದೆ. ಈ ಘಟನೆಯ ಬಳಿಕ ಬ್ರಿಟಿಷರು ಗ್ರಾಮದ ಮೇಲೆ ದಾಳಿ ನಡೆಸಿ ಲೂಟಿ ಮಾಡಿ ಭಾರಿ ಹಾನಿ ಉಂಟು ಮಾಡುತ್ತಾರೆ. ಚಳವಳಿಗೆ ಬೆಂಬಲ ನೀಡಿದ ಸಾಹುಕಾರ್ ಬಸವಣ್ಯಪ್ಪ ಅವರ ಮನೆಯನ್ನು ಸುಡುತ್ತಾರೆ.
ಸರ್ಕಾರದ ವಿರುದ್ಧ ಬಂಡಾಯವೆದ್ದವರೆಂದು 50 ಮಂದಿಯ ಮೇಲೆ ಆರೋಪ ಹೊರಿಸಿ 41 ಮಂದಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು.
1943 ಮಾರ್ಚ್ 8ರಂದು ಗ್ರಾಮದ ಗುರಪ್ಪ, ಜೀನಪ್ಪ ಮಲ್ಲಪ್ಪ, ಮಾರ್ಚ್ 9ರಂದು ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ, 10ರಂದು ಗೌಡ್ರು ಶಂಕರಪ್ಪ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನೇಣುಗಂಬಕ್ಕೇರಿಸಲಾಯಿತು. ಹಾಲಮ್ಮ ಹಾಗೂ ಪಾರ್ವತಮ್ಮ ಅವರಿಗೆ ಜೀವಾವಧಿ ಗಡೀಪಾರು ಶಿಕ್ಷೆಯನ್ನು ವಿಧಿಸಲಾಯಿತು.
ಪಾರ್ವತಮ್ಮ, ಹಾಲಮ್ಮ ಮತ್ತು ಸಿದ್ಧಮ್ಮ ಅವರನ್ನು 1946 ಅಕ್ಟೋಬರ್ 21ರಂದು ಬಿಡುಗಡೆ ಮಾಡಲಾಯಿತು. ಇಡೀ ಕರ್ನಾಟಕದಲ್ಲಿ ‘ಸ್ವತಂತ್ರ ಹಳ್ಳಿ’ ಎಂದು ಘೋಷಿಸಿಕೊಂಡು ಸ್ವಾತಂತ್ರ್ಯಕ್ಕೆ ತಮ್ಮ ಪ್ರಾಣವನ್ನು ಅರ್ಪಿಸಿದ ಕಲಿಗಳಿಂದ ಈ ಊರು ಪ್ರತಿಷ್ಠಿತವಾಗಿದೆ.
https://www.suddikanaja.com/2020/11/05/robering-showing-duplicate-gold/