ಸುದ್ದಿ ಕಣಜ.ಕಾಂ | DISTRICT | RAJYOTSAVA AWARD
ಶಿವಮೊಗ್ಗ: ಯಕ್ಷಗಾನಕ್ಕಾಗಿ ಬದುಕನ್ನೇ ಮೀಸಲಿಟ್ಟ ಗೋಪಾಲಾಚಾರ್ಯ, ಯೋಗವನ್ನೇ ಜೀವನವಾಗಿಸಿಕೊಂಡಿರುವ ಭ.ಮ. ಶ್ರೀಕಂಠ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸಿದ ಪ್ರೊ.ಕೃಷ್ಣಭಟ್ಟ ಹಾಗೂ ಜಾನಪದಕ್ಕಾಗಿಯೇ ಮಿಡಿಯುತ್ತಿರುವ ಹೃದಯ. ಇವರು ಶಿವಮೊಗ್ಗದ ಮಾಣಿಕ್ಯಗಳು. ರಾಜ್ಯ ಸರ್ಕಾರ ಇವರ ಜೀವನದ ಸಾಧನೆಯನ್ನು ಮನಗಂಡು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
READ | ಶಿವಮೊಗ್ಗದ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕ್ಷೇತ್ರವಾರು ಮಾಹಿತಿ ಇಲ್ಲಿದೆ
ತುರ್ತು ಪರಿಸ್ಥಿತಿ ವೇಳೆ ಜೈಲುವಾಸ
ಪ್ರೊ.ಕೃಷ್ಣ ಭಟ್ಟ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರು ಪ್ರಸ್ತುತ ಓರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದಾರೆ. ಜೊತೆಗೆ, ಐ.ಸಿ.ಎಸ್.ಎಸ್.ಆರ್ ಕೇಂದ್ರ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ. ಆದರೆ, ಬದುಕಿ, ಜೀವನ ರೂಪಿಸಿಕೊಂಡಿದ್ದು ಮಾತ್ರ ಶಿವಮೊಗ್ಗದಲ್ಲಿ. ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದರು. ನಗರದ ಪ್ರತಿಷ್ಠಿತ ಡಿವಿಎಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಮೂರು ದಶಕಗಳ ಕಾಲ ಕೆಲಸ ಮಾಡಿದ್ದಾರೆ. ಇಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇನ್ನೂ ವಿಶೇಷವೆಂದರೆ, ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ.
ಯೋಗವೇ ಇವರ ಪಾಲಿಗೆ ಬದುಕು
ಬಿ.ಬಿ.ಸ್ಟ್ರೀಟ್ ನಿವಾಸಿ ಭ.ಮ.ಶ್ರೀಕಂಠ ಅವರಿಗೆ ಯೋಗ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದೆ. ಇವರು 80ರ ದಶಕದಿಂದಲೇ ಯೋಗಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಶಿವಮೊಗ್ಗ ನಗರದೆಲ್ಲೆಡೆ ಯೋಗ ಕೇಂದ್ರಗಳಲ್ಲಿ ಯೋಗ ತರಬೇತಿಯನ್ನು ನೀಡುವ ಕೆಲಸವನ್ನು ಫಲಾಪೇಕ್ಷೆ ಇಲ್ಲದೇ ಮಾಡುತಿದ್ದಾರೆ. ಆರ್.ಎಸ್.ಎಸ್. ಪೂರ್ಣಕಾಲಿಕ ಕಾರ್ಯಕರ್ತರಾಗಿರುವ ಶ್ರೀಕಂಠ ಅವರು ಬ್ರಹ್ಮಚಾರಿಯಾಗಿಯೇ ಉಳಿದಿದ್ದು, ಸಮಾಜಕ್ಕಾಗಿ ಜೀವಿಸುತಿದ್ದಾರೆ. ಇವರು ಶಿವಮೊಗ್ಗದಲ್ಲಿರುವ ಮೋಟರ್ಸ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿಯೂ ಕಾರ್ಯನಿರ್ವಸಿದ್ದಾರೆ. ಬೆಂಗಳೂರಿನ ಐಯ್ಯಂಗಾರ ಇವರ ಯೋಗ ಗುರು. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು ಈಗಲೂ ಶಿಸ್ತುಬದ್ಧ ಜೀವನ ಸಾಗಿಸುತಿದ್ದಾರೆ. ಇವರ ದಿನ ಬೆಳಗ್ಗೆ 3.30ವರೆಗೆ ಆರಂಭವಾಗುತ್ತದೆ. ನಿತ್ಯ ಯೋಗದ ರೂಢಿಸಿಕೊಂಡಿದ್ದಾರೆ.
ಸದಾ ಯಕ್ಷಗಾನದ್ದೇ ಗುಂಗು
ತೀರ್ಥಹಳ್ಳಿ ಮೂಲದ ಗೋಪಾಲಾಚಾರ್ಯ ಈಗ ದಕ್ಷಿಣ ಕನ್ನಡದಲ್ಲಿ ವಾಸವಾಗಿದ್ದಾರೆ. ಆದರೆ, ಇವರು ಯಕ್ಷಗಾನದ ಅಭಿರುಚಿ ಹಚ್ಚಿಕೊಂಡಿದ್ದೇ ಶಿವಮೊಗ್ಗದಲ್ಲಿ ಇರುವಾಗ. ಇಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ಕಂಡು ಇವರೂ ಅದನ್ನು ಕಲಿತು ಈಗ ರಾಜ್ಯಮಟ್ಟದಲ್ಲಿ ಬೆಳೆದಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಲವು ಯಕ್ಷಗಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದು ಇವರ ಹೆಮ್ಮೆಯಾಗಿದೆ.
READ | ATM ಫ್ರಾಡ್ ತಪ್ಪಿಸಲು SBI ಹೊಸ ಹೆಜ್ಜೆ, ಏನದು, ಗ್ರಾಹರಿಗೇನು ಪ್ರಯೋಜನ, ಇಲ್ಲಿದೆ ಮಾಹಿತಿ…
ಅಕ್ಷರ ಬರದಿದ್ದರೂ ಜಾನಪದ ಕ್ಷೇತ್ರದ ಹೆಮ್ಮೆ
ಸಾಗರ ತಾಲೂಕು ಕಾನಲೆ ಗ್ರಾಮದ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರಿಗೆ ಅಕ್ಷರ ಬರದಿದ್ದರೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಲೆನಾಡಿನ ದೀವರ ಸಮುದಾಯದ ಹಸೆ ಗೋಡೆ ಚಿತ್ತಾರ, ಭೂಮಿ ಹುಣ್ಣಿಮೆಯ ಬುಟ್ಟಿ ಚಿತ್ತಾರ, ಭತ್ತದ ತೆನೆ ಬಾಗಿಲು ತೋರಣ, ಹಿಟ್ಟಂಡೆ ಹುಲ್ಲಿನಿಂದ ಮಾಡುವ ಆಭರಣ ಬುಟ್ಟಿಗಳು ನಾನಾ ಕಲೆಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡಿದ್ದಾರೆ. ಜೊತೆಗೆ, ಲೀಲಾಜಾಲವಾಗಿ ಜನಪದ ಕಥನ ಗೀತೆ, ಮದುವೆ ಪಾರಂಪರಿಕ ಗೀತೆ, ಒಗಟು ಹಾಗೂ ಗಾದೆ ಇತ್ಯಾದಿಗಳನ್ನು ಹೇಳುತ್ತಾರೆ. ಇವರು ಅಪ್ಪಟ ಜಾನಪದ ಕಲಾವಿದೆ. ಇವರು ರಾಜ್ಯದ ವಿವಿಧ ಮೇಳ, ವಸ್ತು ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. 2006ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗಿದೆ. ಹಲವೆಡೆ ಸನ್ಮಾನಿಸಲಾಗಿದೆ.
https://www.suddikanaja.com/2021/01/05/karnataka-janapada-academy-award-to-malenadu-kogile-k-yuvaraj/