ಸುದ್ದಿ ಕಣಜ.ಕಾಂ | DISTRICT | CADA MEETING
ಶಿವಮೊಗ್ಗ: ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ಡಿಸೆಂಬರ್ 29ರಂದು ಎಡ ದಂಡೆ ಮತ್ತು 30ರಂದು ಬಲ ದಂಡೆ ನಾಲೆಗಳಿಗೆ ನೀರು ಹರಿಸುವ ತೀರ್ಮಾನವನ್ನು ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಪ್ರಕಟಿಸಿದರು.
ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ (ಕಾಡಾ) ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 79ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿಸೆಂಬರ್ 29ರ ರಾತ್ರಿಯಿಂದ ಎಡದಂಡೆ ನಾಲೆ ಮತ್ತು ಡಿ.30 ರ ರಾತ್ರಿಯಿಂದ ಬಲದಂಡೆ ನಾಲೆಗಳಿಗೆ 120 ದಿನಗಳ ಕಾಲ ನೀರು ಹರಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ಯಾವುದೇ ನಾಲೆಗಳ ಭಾಗದ ರೈತರಿಗೆ ತೊಂದರೆಯಾಗದಂತೆ ನೀರು ಹರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆ, ಮಲೆಬೆನ್ನೂರು ಶಾಖಾ ನಾಲೆಗಳಿಗೆ ಸ್ವಲ್ಪ ತಡವಾಗಿ ಅಂದರೆ ಡಿಸೆಂಬರ್ 6 ಅಥವಾ 7 ಕ್ಕೆ ನೀರು ಹರಿಸುವಂತೆ ಅಧಿಕಾರಿಗಳು ಕೇಳಿಕೊಂಡಿರುವ ಹಿನ್ನೆಲೆ ಅಭಿಯಂತರರು ಅಲ್ಲಿ ಮರಳಿನ ತಡೆ ಒಡ್ಡಿ ನೀರು ಹರಿಸುವಂತೆ ಸೂಚನೆ ನೀಡಿದ್ದೇನೆ. ಭದ್ರಾ ಜಲಾಶಯದಲ್ಲಿ ಡಿ.28 ರಂದು 57.703 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಬೇಸಿಗೆ ಅವಧಿಗೆ 51.97 ಟಿಎಂಸಿ ನೀರು ಅವಶ್ಯವಿದ್ದು, 5.733 ಟಿಎಂಸಿ ನೀರು ಜಲಾಶಯದಲ್ಲಿ ಉಳಿಯಲಿದೆ ಎಂದರು.
ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ರೈತರಿಗೆ ಪೂರಕವಾಗಿ ಸ್ಪಂದಿಸಬೇಕು. ರೈತರಿಗೆ ಬೆಲೆ ಕೊಡಬೇಕು. ರೈತರು ಹಾಗೂ ತಮ್ಮ ದೂರವಾಣಿ ಕರೆಗಳಿಗೆ ಸೂಕ್ತವಾಗಿ ಉತ್ತರಿಸಬೇಕು. ಅಧಿಕಾರಿಗಳ ಕೆಲಸವನ್ನು ನಾನು ಮಾಡಿದ್ದೇನೆ. ನರೇಗಾ ಯೋಜನೆಯಡಿ ಚಾನಲ್ಗಳಲ್ಲಿ ಹೂಳು ತೆಗೆಸಿದ್ದೇನೆ. ಇನ್ನು ಮುಂದೆ ಚಾನಲ್ಗಳ ಮೇಲೆ ಎಂಜಿನಿಯರುಗಳು ಓಡಾಡಿ ಕೆಲಸ ಮಾಡಬೇಕು ಎಂದು ಪವಿತ್ರಾ ರಾಮಯ್ಯ ಸೂಚನೆ ನೀಡಿದರು.
ಸಭೆಯಲ್ಲಿ ಗಣ್ಯರೇನು ಹೇಳಿದರು?
- ರೈತ ಮುಖಂಡ ಬಸವರಾಜಪ್ಪ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶ ವಿಭಿನ್ನ ಹವಾಮಾನ ಮತ್ತು ಮಣ್ಣಿನ ಗುಣ ಹೊಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ನೀರು ಹರಿಸುವುದು ಮತ್ತು ಬಂದ್ ಮಾಡುವುದು ಕಷ್ಟ. ಏಕೆಂದರೆ ಭದ್ರಾವತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲುಭೂಮಿ, ಕೆಂಪು ಮಿಶ್ರತ ಮಣ್ಣಿನಲ್ಲಿ ಅಡಿಕೆ ಇತ್ಯಾದಿ ಬೆಳೆಯಲಾಗುತ್ತಿದ್ದು ಈ ಮಣ್ಣು 20 ರಿಂದ 25 ದಿನಕ್ಕೆ ಮಾತ್ರ ನೀರನ್ನು ಹಿಡಿದಿಡಲು ಸಾಧ್ಯ. ಅದೇ ದಾವಣಗೆರೆ, ಮಲೆಬೆನ್ನೂರು, ಹರಿಹರ ಭಾಗದಲ್ಲಿ ಎರೆಮಣ್ಣಿದ್ದು ಒಂದು ತಿಂಗಳವರೆಗೆ ನೀರನ್ನು ತಡೆದಿಡುವ ಸಾಮರ್ಥ್ಯ ಅಲ್ಲಿನ ಮಣ್ಣಿಗೆ ಇರುತ್ತದೆ. ಆದ್ದರಿಂದ ಆ ಭಾಗಕ್ಕೆ ಸ್ವಲ್ವ ತಡವಾಗಿ ನೀರು ಹರಿಸಬೇಕೆಂದು ಸದಸ್ಯರು ಕೇಳಿದ್ದಾರೆ.
- ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಈ ಬಾರಿ ಒಳ್ಳೆಯ ಮಳೆಯಾಗಿ, ಡ್ಯಾಮ್ನಲ್ಲಿ ಸಾಕಷ್ಟು ನೀರಿದ್ದರೂ, ಇದುವರೆಗೆ ನಾಲೆಗಳಿಗೆ ನೀರು ಹರಿಸದೇ ಇರುವುದರಿಂದ ವಿಶೇಷವಾಗಿ ಎಡೆದಂಡೆ ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿಲ್ಲದೇ ತುಂಬ ತೊಂದರೆಯಾಗಿದೆ. ಎಂಜಿನಿಯರುಗಳು ನೀರು ಬಂದ್ ಮಾಡಿ ಇಷ್ಟು ದಿನ ಆದರೂ ಕಾಮಗಾರಿ ಸಬೂಬು ಹೇಳಿ ನೀರು ಹರಿಸುವುದಕ್ಕೆ ಅಡ್ಡಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದರು. ಅಧ್ಯಕ್ಷರು ದೃಢವಾದ ನಿರ್ಧಾರ ಮಾಡಿ ನಾಳೆಯಿಂದಲೇ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.
- ಪ್ರಾಧಿಕಾರದ ನಿರ್ದೇಶಕ ಷಡಕ್ಷರಪ್ಪ ಮಾತನಾಡಿ, ಎಡ ದಂಡೆ ನಾಲೆ ರೈತರಿಗೆ, ಜಾನುವಾರುಗಳಿಗೆ ನೀರಿಲ್ಲದೇ ತುಂಬ ತೊಂದರೆಯಾಗಿದೆ. ಆದ್ದರಿಂದ ಎಡ ದಂಡೆ ನಾಲೆಗೆ ಇಂದಿನಿಂದಲೇ ಹಾಗೂ ಬಲ ದಂಡೆ ನಾಲೆ ಡಿ.30 ರಿಂದ ನೀರು ಬಿಡಬೇಕು. ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಚಾನಲ್ ಗಳಲ್ಲಿ ರಿಪೇರಿ ಕಾಮಗಾರಿಗಳು ಆಗಿಲ್ಲವೆಂದು ಅಧಿಕಾರಿಗಳು ಸರ್ಕಾರವನ್ನು ದೂರುವುದು ಸರಿಯಲ್ಲ ಎಂದರು.
- ಎಡದಂತೆ ನಾಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಜೆ.ರಘುನಾಥ್ ಮಾತನಾಡಿ, ಪ್ರತಿ ಸಲ ನೀರು ಬಂದ್ ಮಾಡಿದಾಗ ಗೊಂದಲ ಸೃಷ್ಟಿಯಾಗುತ್ತಿದೆ. ನೀರು ನಿಲ್ಲಿಸಿದ 25 ದಿನಗಳಿಗೆ ಅಧ್ಯಕ್ಷರು ಒಂದು ಸಭೆ ಕರೆದು ನಿರ್ಧಾರ ಕೈಗೊಳ್ಳಬೇಕು. ಎಡದಂಡೆ ಭಾಗದ ಮರಳು ಮಿಶ್ರಿತ ಮಣ್ಣಿನಲ್ಲಿ ನೀರನ ತೇವ ತಡೆದಿಡುವ ಶಕ್ತಿ ಇಲ್ಲವಾದ್ದರಿಂದ ಇಂದೇ ನೀರು ಬಿಡಬೇಕು. ಇಲ್ಲವಾದಲ್ಲಿ ಧರಣಿ ಮಾಡಲಾಗುವುದು ಎಂದರು.
- ಎಡದಂಡೆ ನಾಲೆ ಭಾಗದ ಸದಸ್ಯ ವೈ.ಜಿ ಮಲ್ಲಿಕಾರ್ಜುನ್ ಮಾತನಾಡಿ, ನೀರು ನಿಲ್ಲಿಸಿ 40 ದಿನ ಆದರೂ ನೀರು ಹರಿಸದಿರುವುದು ವಿಪರ್ಯಾಸ. ಅವೈಜ್ಞಾನಿಕವಾಗಿ ಹೀಗೆ ನೀರು ನಿಲ್ಲಿಸಿದರೆ ಬೆಳೆ ಹಾಳಾಗುತ್ತದೆ ಎಂದು ತಿಳಿಸಿದರು.
- ದಾವಣಗೆರೆ ಮತ್ತು ಮಲೆಬೆನ್ನೂರು ನಾಲಾಭಾಗದ ಸದಸ್ಯರಾದ ತೇಜಸ್ವಿ ಪಟೇಲ್ ಮತ್ತು ಇತರರು ಮಾತನಾಡಿ, ನಮಗೆ ಜ.5 ರ ಹೊತ್ತಿಗೆ ನೀರು ಬಿಡಬಹುದು. ಸಲಹಾ ಸಮಿತಿ ಸಂಪ್ರದಾಯದಂತೆ ಅಧಿಸೂಚನೆ ಹೊರಡಿಸಿ ನೀರು ಬಿಡಬೇಕು. ಡಿ.30 ಕ್ಕೆ ನೀರು ಹರಿಸಲು ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಮರಳಿನ ತಡೆ ಒಡ್ಡು ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.
- ಎಸ್.ಇ. ಚಂದ್ರಹಾಸ್ ಮಾತನಾಡಿ, 2021-22 ನೇ ಸಾಲಿನ ಬೇಸಿಗೆ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರು ಸಮರ್ಪಕವಾಗಿ ಹರಿಯುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಎಡ ದಂಡೆ ನಾಲೆ ಭಾಗದ ಸದಸ್ಯರಾದ ಯಶವಂತರಾವ್, ರಾಮಪ್ಪ, ಹನುಂತಪ್ಪ, ಶೇಖರಪ್ಪ, ಕಾಡಾ ನಿರ್ದೇಶಕರಾದ ರುದ್ರಮೂರ್ತಿ, ವಿನಾಯಕ್, ಹನುಮಂತಪ್ಪ, ಸದಾಶಿವಪ್ಪ ಗೌಡ್ರು, ರಾಜಪ್ಪ, ಇತರೆ ನಾಲೆಗಳ ಸದಸ್ಯರಾದ ದ್ಯಾಮಪ್ಪ ಗೌಡ್ರು, ದೇವಪ್ಪ ರೆಡ್ಡಿ, ಡಾಣಾಯಕಪುರದ ಪರಮೇಶಗೌಡ್ರು, ಆಡಳಿತಾಧಿಕಾರಿ ಅರುಣ್(ಪ್ರಭಾರ), ಭದ್ರಾ ಯೋಜನಾ ವೃತ್ತದ ಎಇಇಗಳಾದ ರವಿಚಂದ್ರ, ಪ್ರಸನ್ನ, ವೆಂಕಟೇಶ್, ಇತರೆ ಸದಸ್ಯರು, ಅಧಿಕಾರಿಗಳು, ರೈತರು ಹಾಜರಿದ್ದರು.
https://www.suddikanaja.com/2021/07/16/water-from-bhadra-right-and-left-canal/