ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯು ಜಿಲ್ಲೆಯ ಹಲವೆಡೆ ನಾನಾ ಅನಾಹುತಗಳನ್ನು ಸೃಷ್ಟಿಸಿದೆ.
ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಧರೆಕುಸಿತ, ಗುಡ್ಡ ಕುಸಿತದಂತಹ ಘಟನೆಗಳು ನಡೆದಿವೆ.
ಕಾಲು ಜಾರಿ ಬಿದ್ದು ಕೃಷಿಕನ ಸಾವು
ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದ ಕೃಷಿಕ ಜಿ.ಕೆ.ಗಣಪತಿ(74) ಮೃತಪಟ್ಟಿದ್ದಾರೆ. ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅವರ ಪತಿ ಇವರಾಗಿದ್ದಾರೆ. ತೋಟಕ್ಕೆ ಕೆಲಸಕ್ಕೆಂದು ಹೋದಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
READ | ಸಾಗರದಲ್ಲಿ ಅಧಿಕ ಮಳೆ ದಾಖಲು, ಇನ್ನುಳಿದ ತಾಲೂಕುಗಳಲ್ಲಿ ಎಷ್ಟಾಗಿದೆ ವರ್ಷಧಾರೆ?
ಹೊಸನಗರ ತಾಲೂಕಿನ ಮುಂಬಾರು ಗ್ರಾಮದ ಪೂಜಾರಿ ಕ್ಯಾಂಪ್ ರಸ್ತೆ ಕೊಚ್ಚಿ ಹೋಗಿದ್ದು ಹಾನಿಯಾಗಿದೆ. ಸುಮಾರು 40 ಅಡಿ ಉದ್ದ, 10 ಅಡಿ ಅಗಲ ಕೊಚ್ಚಿ ಹೋಗಿದೆ. ರಿಪ್ಪನಪೇಟೆಯ ಕೆರೆಹಳ್ಳಿ ಹೋಬಳಿಯ ಹಾರಂಬಳ್ಳಿ ಗ್ರಾಮದ ಕೆರೆದಂಡೆ ಒಡೆದು ಹಾನಿಯಾಗಿದೆ.
ಕೊಟ್ಟಿಗೆ ಉರುಳಿಬಿದ್ದು ಗಾಯ
ಆನಂದಪುರದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಿನಬೈಲಿನಲ್ಲಿ ಅತಿಯಾದ ಮಳೆ ಸುರಿದ ಪರಿಣಾಮ ಹಕ್ರೆಕೊಪ್ಪದ ನಾರಾಯಣಪ್ಪ ಎಂಬುವವರ ಕೊಟ್ಟಿಗೆ ಉರುಳಿಬಿದ್ದು ಐದು ದನಕರು, ಎರಡು ಹೋರಿಗಳಿದ್ದವು. ತಕ್ಷಣ ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.
ಸುಣ್ಣದಮನೆ ರಾಘವೇಂದ್ರ ಮನೆ ಕುಸಿತ
ತೀರ್ಥಹಳ್ಳಿ ತಾಲೂಕಿನ ಶೆಟ್ಟಿಗಳಕೊಪ್ಪ ಗ್ರಾಮದ ಸುಣ್ಣದಮನೆ ರಾಘವೇಂದ್ರ ಅವರ ಮನೆ ಕುಸಿದಿದೆ. ಇವರು ಕಡುಬಡತನದಲ್ಲಿದ್ದು, ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದಾರೆ.
https://suddikanaja.com/2022/02/02/smart-city-managing-director-chidanand-s-vathare-explanation-on-man-fell-into-a-pit-at-balaraj-aras-road-shivamogga/