ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಪೊಲೀಸ್ ಇಲಾಖೆ ಕ್ರಿಮಿನಲ್’ಗಳ ಚಳಿ ಬಿಡಿಸುತ್ತಿದೆ. ಹತ್ತು ದಿನಗಳಲ್ಲಿ ಎರಡು ಫೈರಿಂಗ್’ಗಳಾಗಿವೆ.
ಶನಿವಾರ ಬೆಳ್ಳಂಬೆಳಗ್ಗೆ ಅಸ್ಲಂ ಎಂಬುವವರ ಕಾಲಿಗೆ ದೊಡ್ಡಪೇಟೆ ಪೊಲೀಸ್ ಠಾಣೆ ಪಿಎಸ್.ಐ ವಸಂತ್ ಅವರು ಗುಂಡು ಹಾರಿಸಿದ್ದು, ಪಿಸಿ ರಮೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಿ.ಎಚ್.ರಸ್ತೆಯಲ್ಲಿ ಅಶೋಕ್ ಪ್ರಭು ಎಂಬಾತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲು ಹೋದಾಗ ಆತ ಚಾಕುದಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ.
| ಜಿ.ಕೆ.ಮಿಥುನ್ ಕುಮಾರ್, ಎಸ್ಪಿ
ಯಾವ ಪ್ರಕರಣ, ನಡೆದಿದ್ದೇನು?
ಅಕ್ಟೋಬರ್ 30ರಂದು ರಾತ್ರಿ 10.30ರಿಂದ 11 ಗಂಟೆಯ ನಡುವೆ ಬಿ.ಎಚ್.ರಸ್ತೆಯ ಪ್ರಿಯದರ್ಶಿನಿ ಹೋಟೆಲ್ ಸಮೀಪ ಅಶೋಕ್ ಪ್ರಭು (40) ಎಂಬಾತನಿಗೆ ಹರಿತವಾದ ಆಯುಧದಿಂದ ಹಲ್ಲೆ ಕೆನ್ನೆ ಮತ್ತು ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದರು. ಈ ಪ್ರಕರಣ ದಾಖಲಿಸಿಕೊಂಡ ದೊಡಪೇಟೆ ಪೊಲೀಸರು ಎ-2 ಆಸೀಫ್ ಅಲಿಯಾಸ್ ಚಿಲ್ಲಿ (26)ಎಂಬಾತನನ್ನು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
READ | ಬಿಎಚ್ ರಸ್ತೆಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪಿ ಅರೆಸ್ಟ್
ಆರೋಪಿಯ ಕಾಲಿಗೆ ಗುಂಡು
ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಅಸ್ಲಂ ಎಂಬಾತನು ಪುರಲೆಯ ಖಾಲಿ ಲೇಔಟ್’ವೊಂದರಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಶನಿವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಕಾರ್ಯಾಚರಣೆ ನಡೆಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ಪಿಎಸ್.ಐ ವಸಂತ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆಗ ಅಸ್ಲಂ ಚಾಕು ಹಿಡಿದು ಪೊಲೀಸರ ಮೇಲೆಯೇ ತಿರುಗಿಬಿದ್ದಿದ್ದಾನೆ. ದೊಡ್ಡಪೇಟೆ ಠಾಣೆಯ ಕಾನ್’ಸ್ಟೇಬಲ್
ರಮೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗೊಂಡಿದ್ದು ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ಲಂ ಕಾಲಿಗೆ ಗುಂಡು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿಗಳು
ಆಸಿಫ್ ವಿರುದ್ಧ ಈ ಹಿಂದೆಯೇ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಅಸ್ಲಂ ವಿರುದ್ಧ ಬಿ.ಎಚ್.ರಸ್ತೆ ಹಲ್ಲೆ ಪ್ರಕರಣ ಸೇರಿ 10 ವಿವಿಧ ಠಾಣೆಯಲ್ಲಿ ಕ್ರಮಿನಲ್ ಪ್ರಕರಣಗಳಿವೆ. ಇದರಲ್ಲಿ ಬಹುಮುಖ್ಯವಾಗಿ ಕೊಲೆಯತ್ನ ಹಾಗೂ ಪ್ರಾಪರ್ಟಿ ಸಂಬಂಧಿತ ಪ್ರಕರಣಗಳಿವೆ.
10 ದಿನಗಳಲ್ಲಿ 2ನೇ ಗುಂಡೇಟು
ಶಿವಮೊಗ್ಗ ಪೊಲೀಸರು ಕಳೆದ 10 ದಿನಗಳಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಅಕ್ಟೋಬರ್ 26ರಂದು ವೆಂಕಟೇಶ್ ನಗರದಲ್ಲಿ ವಿಜಯ್ ಎಂಬುವವರ ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿ ಜಬಿ ಎಂಬಾತನಿಗೆ ಮಹಜರಿಗೋಸ್ಕರ ಕರೆದುಕೊಂಡು ಹೋಗುವಾಗ ಆತ ಚಾಕುದಿಂದ ಪೊಲೀಸ್ ಮೇಲೆಯೇ ಹಲ್ಲೆ ಮಾಡಿದ್ದ. ಆಗಲೂ ಗುಂಡು ಹಾರಿಸಲಾಗಿದೆ.
READ | ಶಿವಮೊಗ್ಗದ ಇಂದಿನ ಟಾಪ್ 10 ಸುದ್ದಿಗಳ ಕಣಜ ಇಲ್ಲಿದೆ